ವಿಜಯಪುರ:ಎಸ್ಸಿ, ಎಸ್ಟಿ ಹಾಗೂ ಅಂಗವಿಕಲರ ಕಲ್ಯಾಣಕ್ಕೆ ಅನುದಾನ ಮೀಸಲಿಡದ ಹಾಗೂ ಖರ್ಚು ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಸೂಚನೆ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ 18ನೇ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಎಸ್ಸಿ, ಎಸ್ಟಿ ಹಾಗೂ ಅಂಗವಿಕಲರ ಕಲ್ಯಾಣಕ್ಕೆ ಶೇ 5ರಷ್ಟು ಅನುದಾನವನ್ನು ಪ್ರತಿ ಇಲಾಖೆಯಲ್ಲೂ ಕಡ್ಡಾಯವಾಗಿ ಕಾಯ್ದಿರಿಸಬೇಕು ಮತ್ತು ಸಮರ್ಪಕ ವಿನಿಯೋಗ ಮಾಡಬೇಕು ಎಂದು ಹೇಳಿದರು.
ಹಾಲಿ ಜಿಲ್ಲಾ ಪಂಚಾಯ್ತಿ ಸದಸ್ಯರ ಅವಧಿ ಮುಗಿಯುತ್ತಾ ಬಂದಿದೆ ಎಂಬ ಕಾರಣಕ್ಕೆ ಅಧಿಕಾರಿಗಳು ನಿರ್ಲಕ್ಷ್ಯ ಭಾವನೆ ತಾಳುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಕೆಲಸದಿಂದ ವಜಾ:
ಎನ್ಆರ್ಇಜಿ ಹಣವನ್ನು ದುರುಪಯೋಗ ಪಡಿಸಿಕೊಂಡ ಮೂವರು ಗುತ್ತಿಗೆ ಆಧಾರಿತ ಸಿಬ್ಬಂದಿಯನ್ನು ಒಂಬಡ್ಸ್ಮನ್ ವರದಿ ಹಿನ್ನೆಲೆಯಲ್ಲಿ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಸಿಇಒ ಲಕ್ಷ್ಮಿಕಾಂತ ರೆಡ್ಡಿ ಸಭೆಯ ಗಮನಕ್ಕೆ ತಂದರು.
ಹೊಲಿಗೆ ಯಂತ್ರಕ್ಕೆ ಹಂಚಿಕೆಗೆ ಒತ್ತಾಯ
ಗ್ರಾಮೀಣ ಮತ್ತು ಚಿಕ್ಕಿ ಉದ್ಯಮ ವಿಭಾಗದಿಂದ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಬಂದಿರುವ ಹೊಲಿಗೆ ಯಂತ್ರಗಳನ್ನು ಎಲ್ಲ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಿಗೆ ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಬೀಜೋತ್ಪಾದನೆ ಕೇಂದ್ರ ವಿಫಲ
ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಸುಮಾರು 180 ಎಕರೆಯಲ್ಲಿರುವ ಬೀಜೋತ್ಪಾದನಾ ಕೇಂದ್ರ ಬಳಕೆಯಾಗದೇ ಪಾಳು ಬಿದ್ದಿದೆ. ಎತ್ತುಗಳನ್ನು ಸರಿಯಾಗಿ ಸಾಕುತ್ತಿಲ್ಲ. ಟ್ರ್ಯಾಕ್ಟರ್ಗಳು ಮೂಲೆಸೇರಿವೆ. ಈ ಭೂಮಿಯನ್ನು ರೈತರಿಗೆ ಮರಳಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಭೀಮರಾವ್ ಎಂಟಮಾನೆ ಆಗ್ರಹಿಸಿದರು.
ಸಭೆ ನೀರಸ:ಬುಧವಾರ ನಡೆದ ಜಿಲ್ಲಾ ಪಂಚಾಯ್ತಿ 18ನೇ ಸಾಮಾನ್ಯ ಸಭೆಯು ಹೋಳಿಗೆ ಊಟ ಸವಿಯುವುದರೊಂದಿಗೆಹಾಲಿ ಸದಸ್ಯರಿಗೆ ವಿದಾಯ ಕೋರುವ ಸಭೆಯಾಗಿ ಮಾರ್ಪಟ್ಟಿತು.
11 ಗಂಟೆಗೆ ನಿಗದಿಯಾಗಿದ್ದಕೊನೆಯ ಸಭೆಯೂ ಎಂದಿನಂತೆ ಒಂದು ತಾಸು ವಿಳಂಬವಾಗಿ ಅಂದರೆ, ಮಧ್ಯಾಹ್ನ 12ಕ್ಕೆ ಆರಂಭವಾಯಿತು. ಕೋರಂ ಇಲ್ಲದ ಕಾರಣಕೊನೆಯ ಸಭೆಯೂ ವಿಳಂವಾಗಿ ಆರಂಭವಾಗಿದ್ದಕ್ಕೆ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಬೇಸರ ವ್ಯಕ್ತಪಡಿಸಿದರು.
ತಮ್ಮ ಅವಧಿಯಲ್ಲಿ ಕೈಗೊಂಡಿರುವ ಅನೇಕ ಅಭಿವೃದ್ಧಿ ಕಾರ್ಯಗಳು ಅವಧಿ ಮುಗಿಯುತ್ತಾ ಬಂದಿದ್ದರೂ ಪೂರ್ಣಗೊಂಡಿಲ್ಲದಿರುವುದಕ್ಕೆ ಸದಸ್ಯರು ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅನೇಕ ಸದಸ್ಯರು ಹತಾಷೆ ವ್ಯಕ್ತಪಡಿಸಿದರು. ಮತ್ತೆ ಕೆಲವರುರಸ್ತೆ, ಶಾಲಾ ಕಟ್ಟಡ ಮತ್ತಿತರ ಕಾಮಗಾರಿಗಳು ಕಳಪೆಯಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಹಾಲಿ ಸದಸ್ಯರ ಅವಧಿ ಮುಗಿಯುತ್ತಾ ಬಂದಿದೆ ಎಂದು ನಿರ್ಲಕ್ಷ್ಯ ತೋರಿಸಬೇಡಿ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಜಾತಾ ಕಳ್ಳಿಮನಿ ಎಚ್ಚರಿಕೆ ನೀಡಿದರು.
ನಮ್ಮ ಅವಧಿ ಮುಗಿದಿರಬಹುದು ಆದರೆ, ಮುಂದೆ ಬರುವವರು ನಮಗಿಂತ ಬಿರುಸಾಗಿರುತ್ತಾರೆ ಎಂಬುದನ್ನು ಮರೆಯಬೇಡಿ ಎಂದು ಸದಸ್ಯಭೀಮರಾವ್ ಎಂಟಮಾನೆ ಹೇಳಿದರು.
ಆರಂಭದಿಂದ ಕೊನೆಯ ವರೆಗೂ ಸಭೆ ನೀರಸವಾಗಿತ್ತು.ಅನುಸರಣಾ ವರದಿ ಓದಿ ದೃಢೀಕರಿಸಲು ಹಾಗೂ ವಿವಿಧ ಸ್ಥಾಯಿ ಸಮಿತಿಗಳ ನಡಾವಳಿಗಳನ್ನು ಅನುಮೋದಿಸುವುದಕ್ಕೆ ಸೀಮಿತವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.