ಶನಿವಾರ, ಏಪ್ರಿಲ್ 1, 2023
23 °C
ಹಳ್ಳದ ಹೂಳು ತೆಗೆಯಲು, ಚೆಕ್ ಡ್ಯಾಂ ನಿರ್ಮಾಣಕ್ಕೆ ಪಿಡಿಓ ಆದ್ಯತೆ

ಜಂಬಗಿ ಗ್ರಾಮದ ಮಹಿಳೆಯರ ಕೈಹಿಡಿದ ‘ನರೇಗಾ’

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಜಂಬಗಿ ಮತ್ತು ಹೊನ್ನಳ್ಳಿ ಗ್ರಾಮಸ್ಥರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ(ಎನ್ಆರ್‌ಇಜಿ)ಯಡಿ ಊರಿನ ಹಳ್ಳಗಳ ಹೂಳು ತೆಗೆದು, ಚೆಕ್‌ ಡ್ಯಾಂ ನಿರ್ಮಿಸುವ ಮೂಲಕ ಕೈತಂಬಾ ಸಂಪಾದನೆ ಮಾಡಿದ್ದಾರೆ.

ಜಂಬಗಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಮೇತ್ರಿ ಅವರು ಶೇ 50ರಷ್ಟು ಹಳ್ಳಿ ಮಹಿಳೆಯರನ್ನು ಉದ್ಯೋಗ ಖಾತ್ರಿ ಯೋಜನೆಯಲ್ಲಿ ತೊಡಗಿಸುವ ಮೂಲಕ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಗಮನ ಸೆಳೆದಿರುವುದು ವಿಶೇಷ. 

ಜಂಬಗಿ ಮತ್ತು ಹೊನ್ನಳ್ಳಿ ಗ್ರಾಮಗಳಲ್ಲಿ ಕೃಷಿ ಅವಲಂಬಿತರು ಹೆಚ್ಚು. ರೈತರು ಪ್ರಮುಖವಾಗಿ ದ್ರಾಕ್ಷಿ, ದಾಳಿಂಬೆ, ಲಿಂಬೆ ಮತ್ತು ತೊಗರಿಯನ್ನು ವಿಶೇಷವಾಗಿ ಬೆಳೆಯುತ್ತಾರೆ. ಪ್ರತಿ ವರ್ಷ ಬೇಸಿಗೆಯಲ್ಲಿ ಅಂತರ್ಜಲ ಮಟ್ಟವೂ ಕುಸಿದು ಕೊಳವೆಬಾವಿಗಳು ತೊಟ್ಟಿಕ್ಕುತ್ತಿದ್ದವು. ಆದರೆ, ಇದೀಗ ಊರಿನ ಹಳ್ಳದ ಹೂಳನ್ನು ತೆಗೆದು, ಅಲ್ಲಲ್ಲಿ ಚೆಕ್‌ ಡ್ಯಾಂ ನಿರ್ಮಿಸಿ ನೀರು ಸಂಗ್ರಹವಾಗುವಂತೆ ಎನ್‌ಆರ್‌ಇಜಿ ಅಡಿ ಕಾರ್ಯನಿರ್ವಹಿಸಿದ ಪರಿಣಾಮ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಕೊಳವೆಬಾವಿಗಳು ರೀಚಾರ್ಜ್‌ ಆಗಿದ್ದು, ನೀರಿನ ಬರ ನೀಗಿದೆ. 

ಜಂಬಗಿ ಕೆರೆಯ ಹೂಳೆತ್ತಿರುವುದರಿಂದ ಸುತ್ತಲಿನ 200 ಎಕರೆ ಜಮೀನಿಗೆ ನೀರು ಪೂರೈಕೆಯಾಗುತ್ತಿದೆ. ರೈತರು ಸಮೃದ್ಧ ಫಸಲು ಬೆಳೆಯುವಂತಾಗಿದೆ.

12 ಚೆಕ್‌ ಡ್ಯಾಂ: ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಂಬಗಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಮೇತ್ರಿ, ಜಂಬಗಿ, ಹೊನ್ನಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಎನ್‌ಆರ್‌ಇಜಿ ಯೋಜನೆಯಡಿ 12 ಚೆಕ್‌ ಡ್ಯಾಂ ನಿರ್ಮಿಸಲಾಗಿದೆ. ಇದರಿಂದ ಹಳ್ಳದಲ್ಲಿ ನೀರು ಸಂಗ್ರಹವಾಗಲು ಅನುಕೂಲವಾಗಿದೆ. ಹಳ್ಳದ ಆಸುಪಾಸಿನ ಜಮೀನುಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಎರಡು ಗ್ರಾಮಗಳ 31 ರೈತರ ಜಮೀನುಗಳಲ್ಲಿ ಬದುಗಳ ನಿರ್ಮಾಣ ಹಾಗೂ ಐದು ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಅಲ್ಲದೇ, 38 ಇಂಗುಗುಂಡಿಗಳನ್ನು ನಿರ್ಮಿಸಿ, 11 ಕೃಷಿ ಹೊಂಡಗಳ ಹೂಳೆತ್ತಲಾಗಿದೆ. ಎರಡು ಕಡೆ ಮಳೆ ನೀರು ಸಂಗ್ರಹ ಯೋಜನೆ ರೂಪಿಸಲಾಗಿದೆ. ಒಂದು ದನದ ಶೆಡ್‌ ಕೂಡ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಜಂಬಗಿ ಮತ್ತು ಹೊನ್ನಳ್ಳಿಯ 423 ಕುಟುಂಬಗಳಿಗೆ ಎನ್‌ಆರ್‌ಇಜಿ ಅಡಿ 827 ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದರು.

ಶೇ 49.74ರಷ್ಟು ಮಹಿಳೆಯರಿಗೆ, ಶೇ 7.33 ಪರಿಶಿಷ್ಟ ಜಾತಿಯರುವರಿಗೆ, ಶೇ 1.3ರಷ್ಟು ಪರಿಶಿಷ್ಟ ಪಂಗಡದವರಿಗೆ ಸೇರಿದಂತೆ ನಾಲ್ಕು ತಿಂಗಳಲ್ಲಿ 12,707 ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಹೇಳಿದರು.

ಲಾಕ್‌ಡೌನ್‌ ಅವಧಿಯಲ್ಲಿ ಜಂಬಗಿ ಮತ್ತು ಹೊನ್ನಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಎನ್‌ಆರ್‌ಇಜಿ ಕಾಮಗಾರಿಗಳು ನಡೆದಿರುವ ಸ್ಥಳಗಳಿಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಇತ್ತೀಚೆಗೆ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

***

ಲಾಕ್‌ಡೌನ್‌ ಅವಧಿಯಲ್ಲಿ ಗ್ರಾಮೀಣ ಮಹಿಳೆಯರ ಪಾಲಿಗೆ ಎನ್‌ಆರ್‌ಇಜಿ ವರವಾಗಿ ಪರಿಣಮಿಸಿತು. ಜನರಿಗೆ ಕೂಲಿ ಕೆಲಸ ಲಭಿಸಿದ ಪರಿಣಾಮ ಯಾರೂ ತೊಂದರೆಗೆ ಒಳಗಾಗಲಿಲ್ಲ
–ವಿಜಯಲಕ್ಷ್ಮಿ ಮೇತ್ರಿ, ಪಿಡಿಒ, ಜಂಬಗಿ ಗ್ರಾ.ಪಂ.

––––

ಜಂಬಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎನ್‌ಆರ್‌ಇಜಿ ಅಡಿ ಚೆಕ್‌ ಡ್ಯಾಂ ಹೂಳೆತ್ತುವ ಕೆಲಸವಾಗಿ ಉತ್ತಮ ನಡೆದಿದೆ. ಅದರಲ್ಲೂ ಮಹಿಳೆಯರಿಗೆ ಹೆಚ್ಚು ಉದ್ಯೋಗ ನೀಡಿರುವುದು ಶ್ಲಾಘನೀಯ

-ಗೋವಿಂದರೆಡ್ಡಿ, ಸಿಇಒ, ಜಿ.ಪಂ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು