ವಿಜಯಪುರ:ಕೊರೊನಾದಿಂದ ಬಂದ್ ಆಗಿರುವ ‘ಸಪ್ತಪದಿ’ ವಿವಾಹ ಕಾರ್ಯಕ್ರಮವನ್ನುಮಾರ್ಚ್ನಿಂದ ಜುಲೈ ವರೆಗೆ ಪುನರ್ ಆರಂಭಿಸಲಾಗುವುದು ಎಂದು ಧಾರ್ಮಿಕ ದತ್ತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಪ್ತಪದಿ ಯೋಜನೆಗೆ ಹೋದ ವರ್ಷ ಸುಮಾರು 3 ಸಾವಿರ ಅರ್ಜಿಗಳು ಬಂದಿದ್ದವು. ಈ ಬಾರಿ 6 ಸಾವಿರಕ್ಕೂ ಅಧಿಕ ಜೋಡಿಗಳು ಸಪ್ತಪದಿ ತುಳಿಯುವ ನಿರೀಕ್ಷೆ ಇದೆ ಎಂದರು.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಪ್ರತಿ ತಿಂಗಳು ಮೂರು, ನಾಲ್ಕು ಮುಹೂರ್ತ ನಿಗದಿಗೊಳಿಸಿ ಸಪ್ತಪದಿ ವಿವಾಹ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಹೋದ ವರ್ಷದಲ್ಲಿಕೇವಲ ಎಂದೆರಡು ದಿನ ಸಪ್ತಪದಿ ಕಾರ್ಯಕ್ರಮ ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ, ಈಗ ಎರಡು ಜೊತೆ, ಮೂರು ಜೊತೆ, ನಾಲ್ಕು ಜೊತೆ ಇದ್ದರೂ ಆಯಾ ತಿಂಗಳು ಮುಹೂರ್ತ ನಿಗದಿಗೊಳಿಸಿ, ಸಪ್ತಪದಿ ಯೋಜನೆ ಅನುಷ್ಠಾನಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸಪ್ತಪದಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ₹40 ಸಾವಿರ ಮೌಲ್ಯದ ಮಾಂಗಲ್ಯ, ₹10 ಸಾವಿರ ಮೊತ್ತದ ಧಾರೆ ಸೀರೆ ಕೊಳ್ಳಲುವಧುವಿನ ಖಾತೆಗೆ, ₹5 ಸಾವಿರ ವರನ ಖಾತೆಗೆ ಹಾಕಲಾಗುವುದು ಎಂದರು.
ಹಾಸ್ಟೆಲ್ ಸುಧಾರಣೆಗೆ ಕ್ರಮ
ರಾಜ್ಯದಲ್ಲಿ 2400ಕ್ಕೂ ಹೆಚ್ಚು ಹಾಸ್ಟೆಲ್ಗಳಿವೆ. 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಇದ್ದಾರೆ.ಹಾಸ್ಟೆಲ್ಗಳು ಸುಧಾರಣೆಗೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.
ಇಲಾಖೆಯ ಕಾರ್ಯದರ್ಶಿಗಳಿಂದ ಉನ್ನತ ಅಧಿಕಾರಿಗಳು ಹಾಸ್ಟೆಲ್ಗಳಿಗೆ ಖುದ್ದು ಭೇಟಿ ನೀಡಿ ನಿಗಾ ವಹಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕು ಮಟ್ಟಕ್ಕೆ, ತಾಲ್ಲೂಕು ಮಟ್ಟದ ಅಧಿಕಾರಿಗಳು ಪ್ರತಿ ಹಾಸ್ಟೆಲ್ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ವಿನಃ ಕಾರಣ ತೊಂದರೆಯಾದರೆ ಯಾರನ್ನೂ ರಕ್ಷಣೆ ಮಾಡುವುದಿಲ್ಲ ಎಂದು ಹೇಳಿದರು.
ಉಪ ವಿಭಾಗಾಧಿಕಾರಿಗಳ ನೇತೃತ್ವದ ತಂಡವು ಪ್ರತಿ ಹಾಸ್ಟೆಲ್ಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದಅಲ್ಲಿಯ ಪರಿಸ್ಥಿತಿ ತಿಳಿದುಕೊಂಡು ಪರಿಹಾರಕ್ಕೆ ಆದ್ಯತೆ ನೀಡಲು ಕ್ರಮಕೈಗೊಳ್ಳುತ್ತೇನೆ ಎಂದರು.
ವಿದ್ಯಾರ್ಥಿ ವೇತನ ಬಿಡುಗಡೆ
ರಾಜ್ಯದಲ್ಲಿ ₹37 ಲಕ್ಷ ವಿದ್ಯಾರ್ಥಿಗಳು ವಿವಿಧ ವಿದ್ಯಾರ್ಥಿವೇತನ ಪಡೆಯುತ್ತಿದ್ದಾರೆ. ಅವರಿಗೆ ಬೇರೆ ಬೇರೆ ಕಾರಣಕ್ಕೆ ಬಿಡುಗಡೆಯಾಗದೇ ಕಡಿತವಾಗಿರುವ ವಿದ್ಯಾರ್ಥಿವೇತನವನ್ನು ಮರು ಹೊಂದಾಣಿಕೆ ಮಾಡಿ ಕೊಡಲಾಗುವುದು ಎಂದರು.
ವಿದ್ಯಾರ್ಥಿ ವೇತನ ಪೂರ್ಣ ಪ್ರಮಾಣದಲ್ಲಿ ನೀಡಲು ಕನಿಷ್ಠ ₹ 400 ಕೋಟಿ ಅನುದಾನ ಬೇಕು. ಈ ಸಂಬಂಧ ಆರ್ಥಿಕ ಇಲಾಖೆ ಜೊತೆ ಚರ್ಚಿಸಿದ್ದೇನೆ ಒಂದು ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಬಡ್ತಿ ಶೀಘ್ರ
ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ವಾರ್ಡನ್ ಪೋಸ್ಟ್ಗೆ ಬಡ್ತಿ ನೀಡುವ ಕಾರ್ಯ ಶೀಘ್ರ ಆರಂಭವಾಗಲಿದೆ. ಈ ಸಂಬಂಧ ದಾಖಲೆಗಳ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದರು.
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ದೇವೇಂದ್ರ ಚವ್ಹಾಣ, ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
****
₹ 50 ಲಕ್ಷ ಹಿಂದಿರುಗಿಸಿದ ದೇವಸ್ಥಾನ!
ವಿಜಯಪುರ: ಧಾರ್ಮಿಕ ದತ್ತಿ ಇಲಾಖೆಯಡಿ ನೀಡಲಾಗಿದ್ದ₹50 ಲಕ್ಷ ಅನುದಾನವನ್ನು ವಿಜಯಪುರದ ಜ್ಞಾನ ಯೋಗೇಶ್ವರ ದೇವಸ್ಥಾನಹಿಂದಿರುಗಿಸಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ವಿಜಯಪುರ ಜಿಲ್ಲೆಯ ಆರು ಮಠಗಳಿಗೆ ₹2.65 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
₹ 25 ಲಕ್ಷಕ್ಕಿಂತ ಹೆಚ್ಚು ಆದಾಯ ಬರುವಂತ ‘ಎ’ ದರ್ಜೆ ದೇವಸ್ಥಾನಗಳುವಿಜಯಪುರ ಜಿಲ್ಲೆಯಲ್ಲಿ ಒಂದೂ ಇಲ್ಲ. ₹ 5ಲಕ್ಷಕ್ಕಿಂತ ಹೆಚ್ಚು ಆದಾಯ ಬರುವ ‘ಬಿ’ ದರ್ಜೆ ದೇವಸ್ಥಾನಗಳು ಕೇವಲ ಎರಡು ಮಾತ್ರ ಇವೆ.. ಉಳಿದಂತೆ ‘ಸಿ’ ದರ್ಜೆ ದೇವಸ್ಥಾನಗಳು552 ಇವೆ ಎಂದರು.
2020–21ನೇ ಸಾಲಿನಲ್ಲಿ ಜಿಲ್ಲೆಯ 30 ದೇವಸ್ಥಾನಗಳಿಗೆ ₹1.13 ಕೋಟಿ ಬಿಡುಗಡೆ ಮಾಡಲಾಗಿದೆ. ಸದ್ಯ ₹3,.75 ಕೋಟಿ ತಸ್ತಿಕ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿದೆ. ಇದರಲ್ಲಿ ₹1.36 ಕೋಟಿಯನ್ನು ಆಯಾ ದೇವಸ್ಥಾನಗಳ ಅರ್ಚಕರ ಖಾತೆಗೆ ಹಾಕಲಾಗಿದೆ ಎಂದರು.
***
ಹಾಸ್ಟೆಲ್ ವಾತಾವರಣ ಸ್ವಚ್ಛವಾಗಿರಬೇಕು. ಗುಣಮಟ್ಟದ ಊಟೋಪಚಾರ ನೀಡಲು ಹೆಚ್ಚು ಗಮನ ಕೊಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ
–ಕೋಟ ಶ್ರೀನಿವಾಸ ಪೂಜಾರಿ
ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.