ವಿಜಯಪುರ: ಚುನಾವಣೆಯಲ್ಲಿ ಪ್ರಸ್ತಾಪಿಸಲು ಅಭಿವೃದ್ಧಿ ವಿಚಾರಗಳಿಲ್ಲದ ಕಾರಣ ಪ್ರಧಾನಿ ನರೇಂದ್ರ ಮೋದಿ ಗಾಬರಿಯಾಗಿದ್ದು, ಮಾತಿನಲ್ಲಿಯೇ ಮೋಡಿ ಮಾಡುವ ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಕೈಗಾರಿಕೆ, ಮೂಲಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ತಿಕೋಟಾ ತಾಲ್ಲೂಕಿನ ಬರಟಗಿ ಮತ್ತು ಹಂಚನಾಳ ಪಿ. ಎಚ್. ಗ್ರಾಮದಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಪ್ರಚಾರ ಕೈಗೊಂಡು ಅವರು ಮಾತನಾಡಿದರು.
ದೊಡ್ಡ ಇತಿಹಾಸ ಹೊಂದಿರುವ ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ತ್ಯ ತಂದು ಕೊಟ್ಟಿದೆ. ಸ್ವಾತಂತ್ರ್ಯ ನಂತರದಲ್ಲಿ ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿ, ಕ್ಷೀರ ಕ್ರಾಂತಿ, ಶಿಕ್ಷಣ, ಔದ್ಯೋಗಿಕ ಕ್ರಾಂತಿ ಮೂಲಕ ಭಾರತೀಯರು ಬದುಕು ಕಟ್ಟಿಕೊಳ್ಳುವ ಕೆಲಸ ಮಾಡಿದೆ. ಆದರೆ, ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಹೇಳುವ ಬಿಜೆಪಿಯವರು ತಾವು ಏನು ಮಾಡಿದ್ದಾರೆ ಎಂಬುದನ್ನು ಹೇಳಲಿ ಎಂದರು.
ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಲೆ ಏರಿಕೆ, ಉದ್ಯೋಗ ಕಡಿತ, ಜಿ.ಎಸ್.ಟಿ ಹೆಸರಿನಲ್ಲಿ ರೈತರು, ಜನಸಾಮಾನ್ಯರಿಗೆ ಹೊರೆಯಾಗುವಂಥ ದೊಡ್ಡ ಕೊಡುಗೆಗಳನ್ನು ನೀಡಿದ್ದಾರೆ. ಅಲ್ಲದೇ, ರಮೇಶ ಜಿಗಜಿಣಗಿ ಕಳೆದ 15 ವರ್ಷಗಳಿಂದ ಜಿಲ್ಲೆಯ ಸಂಸದರಾಗಿದ್ದರೂ ಯಾವುದೇ ಅಭಿವೃದ್ಧಿ ಮಾಡಿಲ್ಲ. ಜನರಿಗೆ ಹೊರೆಯಾಗಿರುವ ಕೇಂದ್ರ ಸರ್ಕಾರ ಮತ್ತು ಸಂಸದರಿಗೆ ತಕ್ಕ ಉತ್ತರ ನೀಡಲು ಕಾಂಗ್ರೆಸ್ ಅಭ್ಯರ್ಥಿ ಆಲಗೂರ ಅವರಿಗೆ ಮತ ಹಾಕಿ ಗೆಲ್ಲಿಸುವ ಮೂಲಕ ನಮ್ಮೆಲ್ಲರ ಕೈ ಬಲಪಡಿಸಬೇಕು ಎಂದು ಅವರು ಮನವಿ ಮಾಡಿದರು.
ಬರಟಗಿ ಮುಖಂಡ ಸಂಗಮೇಶ ದಾಶ್ಯಾಳ ಮತ್ತು ಪೋಮಸಿಂಗ್ ರಾಠೋಡ, ಹಂಚನಾಳ ಪಿ. ಎಚ್. ಗ್ರಾಮದ ಮುಖಂಡರಾದ ಶ್ರೀಕಾಂತ ಬಿರಾದಾರ, ಸೋಮು ಚವ್ಹಾಣ ಮತ್ತು ರೇವಣಸಿದ್ಧ ತಮಗೊಂಡ, ಮುಖಂಡರಾದ ಕವಿತಾ ರಜಪೂತ, ಬಾಳುಗೌಡ ಪಾಟೀಲ, ಬಸುಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಪದ್ದು ಚವ್ಹಾಣ, ಸಿದ್ದು ಸಜ್ಜನ, ಕಲ್ಲಪ್ಪ ಪವಾರ, ಮೋತಿಲಾಲ ನಾಯಕ, ರಾಜು ರಾಠೋಡ, ವಿಜಯ ರಜಪೂತ, ಗೋವಿಂದ ಶಿಂಧೆ, ಸತೀಶ ನಾಯಕ, ಅಶೋಕ ಪಾಟೀಲ, ಬಾಳಪ್ಪ ಹಚಡದ, ಸುಭಾಷ ರಜಪೂತ, ಶ್ರೀಶೈಲ ಪಾಟೀಲ, ಸದಾಶಿವ ಪೂಜಾರಿ ಇದ್ದರು.
ಕಾಂಗ್ರೆಸ್ನಿಂದ ಬದುಕು ಕಟ್ಟಿಕೊಡುವ ಕೆಲಸ ಜನಸಾಮಾನ್ಯರಿಗೆ ಹೊರೆಯಾದ ಕೇಂದ್ರದ ನೀತಿ; ಆರೋಪ
ಚುನಾವಣಾ ಬಾಂಡ್ ಪ್ರಕರಣದಲ್ಲಿ ಮೋದಿ ಪ್ರಾಮಾಣಿಕತೆ ಬಯಲಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕಿದೆ-ಎಂ.ಬಿ.ಪಾಟೀಲ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.