ಆದಿ ಶಂಕರರ ನೇರ ಶಿಷ್ಯರುಗಳೆಂದರೆ ಪದ್ಮಪಾದ, ಹಸ್ತಾಮಲಕ, ಸುರೇಶ್ವರಾಚಾರ್ಯ ಮತ್ತು ತೋಟಕಾಚಾರ್ಯ. ಅವರಲ್ಲಿ ತೋಟಕಾಚಾರ್ಯ ಸ್ವಲ್ಪ ಓದುವುದರಲ್ಲಿ ಹಿಂದೆ. ಆದರೆ, ಶಂಕರರ ಎಲ್ಲ ಸೇವೆಯನ್ನೂ ಅತ್ಯಂತ ಶ್ರಧ್ಧೆ, ನಿಷ್ಠೆ, ಭಕ್ತಿಯಿಂದ ಮಾಡುತ್ತಿದ್ದರು. ಒಮ್ಮೆ ಆಚಾರ್ಯರು ಪಾಠ ಮಾಡಲು ಪ್ರಾರಂಭಿಸಿದ್ದಾಗ ಇನ್ನೂ ತೋಟಕ ಬಂದಿರಲಿಲ್ಲ. ಅವನು ಬಂದಮೇಲೆ ಪ್ರಾರಂಭ ಮಾಡೋಣವೆಂದು ಹೇಳಿದರು. ಕೂಡಲೇ ಉಳಿದ ಶಿಷ್ಯರು ನಕ್ಕರು. ‘ಗುರುಗಳೇ ಅವನಿಗೆ ಯಾವ ಪಾಠವೂ ಅರ್ಥವಾಗುವುದಿಲ್ಲ ಅವನು ಕೇಳಿದರೂ ಒಂದೇ, ಕೇಳದಿದ್ದರೂ ಒಂದೇ ಅವನಿಗಾಗಿ ಕಾಯುವ ಸಮಯ ವ್ಯರ್ಥ’ ಎಂದರು. ಇದನ್ನು ಗಮನಿಸಿದ ಶಂಕರರು ಮನದಲ್ಲಿ ತೋಟಕನನ್ನು ಮಹಾಜ್ಞಾನಿ ಆಗಲೆಂದು ಸಂಕಲ್ಪಿಸಿ, ಆಶೀರ್ವದಿಸಿದರು.