ಇಂಡಿ: ತಾಲ್ಲೂಕಿನಲ್ಲಿ ಹರಿಯುವ ಕೃಷ್ಣಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆ 70 ಕಿ.ಮೀ ದಿಂದ 172 ಕಿ.ಮೀವರೆಗೆ ನೀರು ಹರಿಯುತ್ತಿದ್ದು, ಮುಖ್ಯ ಕಾಲುವೆಯ ಸಮೀಪ ಇರುವ ಎಲ್ಲ ಕೆರೆಗಳನ್ನು ತುಂಬಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಎಂಜಿನಿಯರ್ ಎಸ್.ಆರ್. ರುದ್ರವಾಡಿ ತಿಳಿಸಿದ್ದಾರೆ.
ಇಂಡಿ ಮುಖ್ಯ ಕಾಲುವೆಯಿಂದ ತಾಲ್ಲೂಕಿನ ಸಂಗೋಗಿ, ಹಂಜಗಿ, ಅರ್ಜನಾಳ ಮತ್ತು ಚಡಚಣ ತಾಲ್ಲೂಕಿನ ಲೋಣಿ ಬಿ.ಕೆ, ಕೆರೆ ತುಂಬುವ ಕ್ರಿಯೆ ಚಾಲನೆಯಲ್ಲಿದೆ. ಸಂಗೋಗಿ ಕೆರೆ ಪೂರ್ತಿ ತುಂಬಿದ್ದು, ಇಂಡಿ ತಾಲ್ಲೂಕಿನ 27 ಗ್ರಾಮಗಳು, ಜನವಸತಿ ಕೇಂದ್ರಗಳು ಮತ್ತು ವಿಜಯಪುರ ತಾಲ್ಲೂಕಿನ 50 ಗ್ರಾಮಗಳಿಗೆ ನೀರು ಒದಗಿಸಲಿದೆ.
ಹಂಜಗಿ ಕೆರೆಯಿಂದ 34 ಗ್ರಾಮಗಳಲ್ಲಿ, ಅಡವಿ ವಸತಿ ಮತ್ತು ತಾಂಡಾಗಳಿಗೆ, ಲೋಣಿ ಕೆಡಿ ಕೆರೆಯಿಂದ 22 ಮತ್ತು ಅರ್ಜನಾಳ ಕೆರೆಯಿಂದ 42 ಗ್ರಾಮಗಳು ಮತ್ತು ಜನ ವಸತಿ ಕೇಂದ್ರಗಳಿಗೆ ನೀರು ಪೂರೈಸಲಾಗುವುದು.
ಕೃಷ್ಣಾ ಕಾಲುವೆಯಿಂದ ನಾದ ಕೆಡಿ, ಇಂಗಳಗಿ, ಗೋಳಸಾರ, ಭತಗುಣಕಿ, ಹಲಸಂಗಿ, ಹಾವಿನಾಳ, ಅರ್ಜನಾಳ, ಭ್ಯುಯ್ಯಾರ ಹಳ್ಳದಲ್ಲಿ ನೀರು ಹರಿದು ಭೀಮಾ ನದಿ ಸೇರುತ್ತದೆ.
ಇದರಿಂದ ಕಾಲುವೆ ಮತ್ತು ಹಳ್ಳ ತೀರದ ಗ್ರಾಮಗಳಲ್ಲಿಯ ಬೋರ್ವೆಲ್, ತೆರೆದ ಬಾವಿಗಳಿಗೆ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಮತ್ತು ಜಲ ಮೂಲಗಳು ಹೆಚ್ಚಾಗಲಿವೆ.
ಕೆಬಿಜೆಎನ್ಎಲ್ ಸಿಬ್ಬಂದಿ ಶ್ರಮ
ಇಂಡಿಯ ಶಾಸಕ ಯಶವಂತರಾಯಗೌಡ ಸೂಚನೆಯ ಮೇರೆಗೆ ಕೃಷ್ಣಾ ಕಾಲುವೆ ಹತ್ತಿರದ ಕೆರೆಗಳನ್ನು ತುಂಬಲಾಗುತ್ತಿದೆ. ಕೆಬಿಜೆಎನ್ಎಲ್ ಸಿಬ್ಬಂದಿ ಹಗಲು ರಾತ್ರಿ ಎನ್ನದೇ ಕಾರ್ಯ ಮಾಡಿದ ಪ್ರಯತ್ನದಿಂದ ಕಾಲುವೆಯಿಂದ ಕೆರೆ ತುಂಬಲಾಗುತ್ತಿದೆ. –ಮನೋಜಕುಮಾರ ಗಡಬಳ್ಳಿ ಕೃಷ್ಣಾ ಮೇಲ್ದಂಡೆ ಯೋಜನೆಯ ರಾಂಪುರ ಕಚೇರಿಯ ಅಧಿಕ್ಷಕ ಎಂಜಿನಿಯರ್ ನೀರಿನ ತೊಂದರೆಯಾಗದಂತೆ ಕ್ರಮ ಕೃಷ್ಣಾ ಮುಖ್ಯ ಕಾಲುವೆಯಿಂದ ಇಂಡಿ ತಾಲ್ಲೂಕಿನ ಎಲ್ಲ ಕೆರೆಗಳನ್ನು ಮತ್ತು ತಾಲ್ಲೂಕಿನ ಎಲ್ಲ ಹಳ್ಳಗಳಲ್ಲಿ ನೀರು ಹರಿಯುವಂತೆ ಸಭೆಯಲ್ಲಿ ಚರ್ಚಿಸಿದಂತೆ ಅಧಿಕ್ಷಕ ಎಂಜಿನಿಯರ್ ಮನೋಜಕುಮಾರ ಗಡಬಳ್ಳಿ ಇವರಿಗೆ ತಿಳಿಸಲಾಗಿದೆ. ಎಲ್ಲ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಲು ತಿಳಿಸಲಾಗಿದೆ. –ರಾಹುಲ್ ಶಿಂಧೆ ವಿಜಯಪುರ ಸಿಇಒ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.