ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಪುರಪಿತೃಗಳಿಲ್ಲದ ಸ್ಥಳೀಯ ಸಂಸ್ಥೆ; ನಾಗರಿಕರ ಪರದಾಟ

Published 25 ಸೆಪ್ಟೆಂಬರ್ 2023, 5:50 IST
Last Updated 25 ಸೆಪ್ಟೆಂಬರ್ 2023, 5:50 IST
ಅಕ್ಷರ ಗಾತ್ರ

ಯಾದಗಿರಿ: ಮೀಸಲಾತಿ ನಿಗದಿ ಗೊಂದಲದಿಂದ ಜಿಲ್ಲೆಯ ಮೂರು ನಗರಸಭೆ, ಮೂರು ಪುರಸಭೆ, ಒಂದು ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರಿಗಳ ಆಡಳಿತವಿದ್ದು, ಸಕಾಲಕ್ಕೆ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.

ಯಾದಗಿರಿ, ಶಹಾಪುರ, ಸುರಪುರ ನಗರಸಭೆ, ಗುರುಮಠಕಲ್‌, ಕಕ್ಕೇರಾ, ಕೆಂಭಾವಿ ಪುರಸಭೆ, ಹುಣಸಗಿ ಪಟ್ಟಣ ಪಂಚಾಯಿತಿ ಸ್ಥಾನಮಾನ ಹೊಂದಿದೆ. ವಡಗೇರಾ ತಾಲ್ಲೂಕು ಕೇಂದ್ರವಾದರೂ ಗ್ರಾಮ ಪಂಚಾಯಿತಿ ಸ್ಥಾನಮಾನ ಹೊಂದಿದ್ದು, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು ಈಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ನಗರಸಭೆಗಳಿಗೆ ಜಿಲ್ಲಾಧಿಕಾರಿ, ಪುರಸಭೆಗಳಿಗೆ ಉಪವಿಭಾಗಾಧಿಕಾರಿ, ಪಟ್ಟಣ ಪಂಚಾಯಿತಿಗೆ ಮುಖ್ಯಾಧಿಕಾರಿ ಆಡಳಿತ ಅಧಿಕಾರಿಯಾಗಿದ್ದಾರೆ.

ಯಾದಗಿರಿ ನಗರಸಭೆಗೆ ಏಪ್ರಿಲ್‌ 30 ರಿಂದ ಆಡಳಿತ ಅಧಿಕಾರಿ ನೇಮಕವಾಗಿದ್ದರೆ, ಶಹಾಪುರ ನಗರಸಭೆಗೆ ಕಳೆದ 5 ತಿಂಗಳಿಂದ ಆಡಳಿತ ಅಧಿಕಾರಿ, ಸುರಪುರ ನಗರಸಭೆಗೆ ಕಳೆದ ಮಾರ್ಚ್ 9 ರಿಂದ ಅಧ್ಯಕ್ಷ, ಉಪಾಧ್ಯಕ್ಷರಿಲ್ಲ. ಅಲ್ಲಿಂದ ನಗರಸಭೆಯ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಗರಸಭೆಯ ಆಡಳಿತಾಧಿಕಾರಿ ಹೊಣೆ ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ. ಅವರ ಮೇಲಿದೆ. ಆದರೆ, ಕಾರ್ಯಭಾರದ ಒತ್ತಡದಿಂದ ನಗರಸಭೆಯ ಕೆಲಸಗಳು ಸುಗಮವಾಗಿ ಸಾಗುತ್ತಿಲ್ಲ. ನಗರಸಭೆಗೆ ಆಡಳಿತಾಧಿಕಾರಿ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆಗೆ ಧ್ವನಿಯಾಗುತ್ತಿಲ್ಲ. ಕಡತಗಳಿಗೆ ಸಹಿ ಹಾಕುವುದಕ್ಕೆ ಸೀಮಿತರಾಗಿದ್ದಾರೆ ಎಂಬ ಕೂಗು ನಗರದ ಜನತೆಯಿಂದ ಕೇಳಿ ಬರುತ್ತಲಿದೆ.

‘ಜಿಲ್ಲಾಧಿಕಾರಿ ಜಿಲ್ಲೆಯ ನಿರ್ವಹಣೆಯ ಗುರುತರ ಜವಾಬ್ದಾರಿ ಹೊಂದಿದ್ದು, ನಗರಸಭೆಯ ಹೆಚ್ಚುವರಿ ಹೊಣೆ ನಿಭಾಯಿಸಲು ಕಷ್ಟಸಾಧ್ಯವಾಗುತ್ತಿದೆ’ ಎಂಬುದು ನಾಗರಿಕರ ಅಭಿಪ್ರಾಯ.

‘ನಗರಸಭೆ ಕಾರ್ಯಕಲಾಪಗಳು, ಸಾಮಾನ್ಯ ಸಭೆ, ಪ್ರಗತಿ ಪರಿಶೀಲನೆ, ಕಾಮಗಾರಿ, ಸ್ವಚ್ಛತಾ ಕಾರ್ಯ, ದೈನಂದಿನ ಕೆಲಸ ಕಾರ್ಯಗಳು ಹಿನ್ನಡೆ ಅನುಭವಿಸುತ್ತಿವೆ. ಇದರಿಂದ ನಾಗರಿಕರು ಪರದಾಡುವಂತಾಗಿದೆ’ ಎನ್ನುತ್ತಾರೆ ಸಾರ್ವಜನಿಕರು.

‘ಸುರಪುರ ನಗರಸಭೆಯಲ್ಲಿ 16 ಬಿಜೆಪಿ, 15 ಕಾಂಗ್ರೆಸ್ ಸದಸ್ಯರಿದ್ದಾರೆ. ಮೊದಲ ಅವಧಿಯೂ ವಿಳಂಬವಾಗಿ 30 ತಿಂಗಳು ಸುಜಾತ ಜೇವರ್ಗಿ ಅಧ್ಯಕ್ಷರಾಗಿದ್ದರು. ಮೀಸಲಾತಿ ವಿಳಂಬದಿಂದ ಎರಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ತಡವಾಗುತ್ತಿದೆ. ಅಧ್ಯಕ್ಷರ ಆಯ್ಕೆ ಆದ ಮೇಲೆ ಅವರ ಅವಧಿ ಮುಂದಿನ 30 ತಿಂಗಳು ಇರುತ್ತದೆ‘ ಎನ್ನುತ್ತಾರೆ ಅಧಿಕಾರಿಗಳು.

‘ನಗರಸಭೆ ಸದಸ್ಯರು ಅಧಿಕಾರ ಚಲಾಯಿಸಲು ಸಾಧ್ಯವಾಗುತ್ತಿಲ್ಲ. ಎಲ್ಲದಕ್ಕೂ ಆಡಳಿತಾಧಿಕಾರಿಗಳ ಸಹಿ ಬೇಕು. ಇದರಿಂದ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ. ನಮ್ಮನ್ನು ಆಯ್ಕೆ ಮಾಡಿದ ಮತದಾರರು ನಮಗೆ ಶಪಿಸುತ್ತಿದ್ದಾರೆ’ ಎನ್ನುತ್ತಾರೆ ನಗರಸಭೆ ಸದಸ್ಯರು.

ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ನಗರಸಭೆ ಸದಸ್ಯರು ಅಧಿಕಾರ ಚಲಾಯಿಸುವಂತಿಲ್ಲ. ಹೀಗಾಗಿ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ನೈರ್ಮಲ್ಯ, ಬೀದಿದೀಪದ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂಬುದು ನಾಗರಿಕರ ಬೇಸರ.

ಯಾದಗಿರಿ ನಗರದ ಲಕ್ಕಿ ನಗರದ ರಸ್ತೆ ಮಳೆ ನೀರು ನಿಂತು ಸಂಚಾರಕ್ಕೆ ವಾಹನ ಸವಾರರ ಪರದಾಟ
ಯಾದಗಿರಿ ನಗರದ ಲಕ್ಕಿ ನಗರದ ರಸ್ತೆ ಮಳೆ ನೀರು ನಿಂತು ಸಂಚಾರಕ್ಕೆ ವಾಹನ ಸವಾರರ ಪರದಾಟ
ಯಾದಗಿರಿ ನಗರಸಭೆಗೆ ಶೀಘ್ರ ಕಾಯಂ ಪೌರಾಯುಕ್ತರು ನೇಮಕವಾದರೆ ಕಡತಗಳು ವಿಲೇವಾರಿ ಆಗಲಿವೆ. ಪ್ರಭಾರಿ ಪೌರಾಯುಕ್ತರಿಗೂ ಕಡತಗಳನ್ನು ವಿಲೇವಾರಿ ಮಾಡಲು ಸೂವಿಸಿದ್ದೇನೆ. ಡಿಯುಡಿಸಿಯವರಿಗೆ ಮೇಲ್ವಿಚಾರಣೆ ಮಾಡಲು ಹೇಳಿದ್ದೇನೆ. ಮೂಲಸೌಕರ್ಯ ಕಲ್ಪಿಸಲು ಬದ್ದರಾಗಿದ್ದೇವೆ
- ಡಾ. ಸುಶೀಲಾ ಬಿ. ಜಿಲ್ಲಾಧಿಕಾರಿ
ಯಾದಗಿರಿ ನಗರದ ಆರ್.ವಿ. ಶಾಲೆಗೆ ತೆರಳುವ ರಸ್ತೆ ಮಳೆಯಿಂದ ಹಾಳಾಗಿರುವುದು
ಯಾದಗಿರಿ ನಗರದ ಆರ್.ವಿ. ಶಾಲೆಗೆ ತೆರಳುವ ರಸ್ತೆ ಮಳೆಯಿಂದ ಹಾಳಾಗಿರುವುದು
ಯಾದಗಿರಿ ನಗರಸಭೆಯಲ್ಲಿ ಪ್ರಭಾರಿ ಪೌರಾಯುಕ್ತರು ಕೇವಲ ₹5 ಸಾವಿರ ಕಾಮಗಾರಿಗೂ ಸಹಿ ಮಾಡುತ್ತಿಲ್ಲ. ಇದರಿಂದ ವಾರ್ಡ್‌ಗಳಲ್ಲಿ ಸಣ್ಣಪುಟ್ಟ ಕಾಮಗಾರಿಗೂ ಪರದಾಡುವಂತೆ ಆಗಿದೆ. ಜನರಿಗೆ ಉತ್ತರ ಕೊಡಲು ಆಗುತ್ತಿಲ್ಲ
- ಸುರೇಶ ಅಂಬಿಗೇರ, ಯಾದಗಿರಿ ನಗರಸಭೆ ಸದಸ್ಯ
ಯಾದಗಿರಿ ನಗರದ ಕೋಲೂರು ಮಲ್ಲಪ್ಪ ಬಡಾವಣೆಯಲ್ಲಿ ಕಲುಷಿತ ನೀರು ನಿಂತಿರುವುದು
ಯಾದಗಿರಿ ನಗರದ ಕೋಲೂರು ಮಲ್ಲಪ್ಪ ಬಡಾವಣೆಯಲ್ಲಿ ಕಲುಷಿತ ನೀರು ನಿಂತಿರುವುದು
ಸರ್ಕಾರ ಶೀಘ್ರದಲ್ಲಿ ಮೀಸಲಾತಿ ಪ್ರಕಟಿಸಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಅನುಮತಿ ಮಾಡಿಕೊಡಬೇಕು. ಇದರಿಂದ ನಗರಸಭೆ ಸುಲಲಿತ ಆಡಳಿತ ಸಾಧ್ಯವಾಗುತ್ತದೆ
- ವೇಣುಮಾಧವ ನಾಯಕ, ಸುರಪುರ ನಗರಸಭೆ ಸದಸ್ಯ
ಶಹಾಪುರ ನಗರದ ವಾರ್ಡ್ ನಂ.18ರಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಗಲೀಜು ತುಂಬಿಕೊಂಡಿರುವುದು
ಶಹಾಪುರ ನಗರದ ವಾರ್ಡ್ ನಂ.18ರಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಗಲೀಜು ತುಂಬಿಕೊಂಡಿರುವುದು
ನಗರಸಭೆಯಲ್ಲಿ ಅಧ್ಯಕ್ಷರಿಲ್ಲದೆ ಕಳೆದ 6 ತಿಂಗಳಿಂದ ಸಾಮಾನ್ಯ ಸಭೆ ನಡೆದಿಲ್ಲ. ಇದರಿಂದ ಅನುದಾನದ ಹಂಚಿಕೆ ಆಗುತ್ತಿಲ್ಲ. ಕಾಮಗಾರಿಗಳ ಅನುಮೋದನೆ ವಿಳಂಬವಾಗುತ್ತಿದೆ. ಜನರಿಗೆ ನಾವು ಮುಖ ತೋರಿಸದಂತಾಗಿದೆ.
- ರಾಜಾ ಪಿಡ್ಡನಾಯಕತಾತಾ, ಸುರಪುರ ನಗರಸಭೆ ಸದಸ್ಯ
ಸುರಪುರದ ರಂಗಂಪೇಟೆಯ ಬಡಾವಣೆಯ ರಸ್ತೆಯ ದುಸ್ಥಿತಿ
ಸುರಪುರದ ರಂಗಂಪೇಟೆಯ ಬಡಾವಣೆಯ ರಸ್ತೆಯ ದುಸ್ಥಿತಿ
ನಗರಸಭೆ ವ್ಯಾಪ್ತಿಯ ಬಡಾವಣೆಯಲ್ಲಿ ಚರಂಡಿ ಸ್ವಚ್ಛಗೊಳಿಸಲಾಗುತ್ತಿದೆ. ತೆರಿಗೆ ವಸೂಲಿ ಮಾಡಲು ಸಿಬ್ಬಂದಿ ತಮ್ಮ ಕೈ ಕೆಳಗೆ ಯಾರನ್ನು ನೇಮಿಸಿಕೊಂಡಿಲ್ಲ. ನಗರಸಭೆಯ ಸಿಬ್ಬಂದಿ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ
- ರಮೇಶ ಬಡಿಗೇರ ಶಹಾಪುರ ಪೌರಾಯುಕ್ತ
ಪುರಸಭೆ ಸದಸ್ಯರಾದರೂ ನಮ್ಮ ವಾರ್ಡ್‌ನಲ್ಲಿ ಕೆಲಸಗಳಾಗುತ್ತಿಲ್ಲ. ಸಾರ್ವಜನಿಕರಿಗೆ ಏನೂ ಹೇಳಲಾರದ ಪರಿಸ್ಥಿತಿ ಒದಗಿದೆ. ಅಭಿವೃದ್ಧಿ ಕಡೆ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಸದಸ್ಯರಿಗೆ ಗೊತ್ತಿಲ್ಲದಂತೆ ಅನೇಕ ಕೆಲಸಗಳಾಗುತ್ತಿದ್ದು ಇದರ ಬಗ್ಗೆ ತನಿಖೆಯಾಗಬೇಕು
- ಪರಶುರಾಮ ಗೋವಿಂದರ್, ಕಕ್ಕೇರಾ ಪುರಸಭೆ ಸದಸ್ಯ
ಕೆಂಭಾವಿ ಪುರಸಭೆ ಸದಸ್ಯರ ಚುನಾವಣೆ ನಡೆದು ಸದಸ್ಯರಾಗಿ ಆಯ್ಕೆಯಾದರೂ ಯಾವುದೇ ಅಧಿಕಾರ ಇಲ್ಲದ ಕಾರಣ ಪಟ್ಟಣದ ಅಭಿವೃದ್ಧಿ ಕುಂಠಿತವಾಗುತ್ತದೆ. ಅಧಿಕಾರಿಗಳು ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ. ಇದರಿಂದ ಹೊಸ ಕಾಮಗಾರಿಗಳು ಅನುಷ್ಠಾನ ಗೊಳಿಸಲು ಸಾಧ್ಯವಾಗುತ್ತಿಲ್ಲ.
- ರವಿ ಸೊನ್ನದ ಕೆಂಭಾವಿ ಪುರಸಭೆ ಸದಸ್ಯ
ನಗರಸಭೆ ಆಡಳಿತ ಜನತೆಯಿಂದ ‘ದೂರ’
ಶಹಾಪುರ: ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿ ಮುಕ್ತಾಯಗೊಂಡ ಬಳಿಕ ಹೊಸ ಅಧ್ಯಕ್ಷರ ನೇಮಕಾತಿಯಲ್ಲಿ ಮೀಸಲಾತಿ ಗೊಂದಲದಿಂದ ಕಳೆದ 5 ತಿಂಗಳಿಂದ ನಗರಸಭೆಗೆ ಆಡಳಿತಾಧಿಕಾರಿ ನೇಮಕರಾಗಿದ್ದಾರೆ. ‘ನಗರಸಭೆಗೆ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಆಸ್ತಿ ತೆರಿಗೆ ವಸೂಲಿ ಮಾಡುವ ಸಿಬ್ಬಂದಿ ತಮ್ಮ ಕೈ ಕೆಳಗೆ ಮತ್ತೊಬ್ಬರನ್ನು ನೇಮಿಸಿಕೊಂಡು ಕೆಲಸ ನಿಭಾಯಿಸುತ್ತಿದ್ದಾರೆ. ಇದು ಅಕ್ರಮಕ್ಕೆ ಕಾರಣವಾಗುತ್ತಲಿದೆ. ಕಚೇರಿಗೆ ಆಗಮಿಸುವ ಜನತೆಯ ಜೊತೆ ಸೌಜನ್ಯದಿಂದ ವರ್ತಿಸುವುದಿಲ್ಲ. ಹಲವಾರು ಬಡಾವಣೆಯಲ್ಲಿ ಚರಂಡಿ ಸ್ವಚ್ಛಗೊಳಿಸುತ್ತಿಲ್ಲ’ ಎಂದು ಬಿಜೆಪಿಯ ಮುಖಂಡ ಯಲ್ಲಯ್ಯ ನಾಯಕ ವನದುರ್ಗ ತಿಳಿಸಿದರು. ‘ನಗರದ ಹಲವಾರು ಬಡಾವಣೆಯಲ್ಲಿ ಸಮರ್ಕವಾದ ಬೀದಿ ದೀಪಗಳನ್ನು ಅಳವಡಿಸಿಲ್ಲ. ನಗರದಲ್ಲಿ ಕೇವಲ ಹೆದ್ದಾರಿಯ ಮೇಲೆ ಒಂದಿಷ್ಟು ಕಸಗುಡಿಸಿ ಮಾಯವಾಗುವ ಸಿಬ್ಬಂದಿ ಬಡಾವಣೆಯ ಬೀದಿಯ ಕಡೆ ಮುಖ ಮಾಡುತ್ತಿಲ್ಲ. ಸ್ವಚ್ಛತೆ ಇಲ್ಲವಾಗಿದೆ. ಚರಂಡಿಯಲ್ಲಿ ಹಂದಿ ಸತ್ತು ಬಿದ್ದು ಇಡೀ ಪ್ರದೇಶ ದುರ್ವಾಸನೆಯಿಂದ ತುಂಬಿಕೊಂಡಿದೆ. ನಗರಸಭೆಯಲ್ಲಿ ಹಲವು ವರ್ಷದಿಂದ ಸಿಬ್ಬಂದಿ ಇಲ್ಲಿಯೇ ಠಿಕಾಣಿ ಹೂಡಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಕಿವಿಯಾಗುತ್ತಿಲ್ಲ. ನಗಸರಭೆ ಆಡಳಿತಾಧಿಕಾರಿ ನಗರಸಭೆಯ ಆಡಳಿತಕ್ಕೆ ತುರ್ತು ಚಿಕಿತ್ಸೆ ನೀಡಬೇಕು' ಎಂದು ನಗರದ ನಿವಾಸಿ ಆಯಿಷ್ ಪರ್ವಿನ್ ಜಮಖಂಡಿ ಮನವಿ ಮಾಡಿದ್ದಾರೆ.
ಮೇಲ್ದರ್ಜೆಗೇರಿದಾಗಲಿಂದ ಪ್ರತಿನಿಧಿಗಳಿಲ್ಲ!
ಹುಣಸಗಿ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿದ ಬಳಿಕ ಇಲ್ಲಿಯವರೆಗೂ ಚುನಾವಣೆ ನಡೆಯದೇ ಇರುವುದರಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂದು ಪಟ್ಟಣದ ಜನತೆ ಹೇಳುತ್ತಾರೆ. ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಕಳೆದ ಮೂರೂವರೆ ವರ್ಷದ ಹಿಂದೆ (ಫೆ. 2020) ಮೇಲ್ದರ್ಜೆಗೇರಿಸಲಾಯಿತು. ಇದರಿಂದಾಗಿ ಬಹುಬೇಗ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಪಟ್ಟಣದ ಜನತೆ ನಿರೀಕ್ಷೆ ಇಟ್ಟುಕೊಂಡಿದ್ದರು. ‘ಯಾವುದೇ ಒಂದು ಪಟ್ಟಣದ ಕೆಲಸ ಕಾರ್ಯಗಳು ತ್ವರಿತ ಆಗಬೇಕಾದರೆ ಚುನಾಯಿತ ಜನಪ್ರತಿನಿಧಿಗಳಿದ್ದಲ್ಲಿ ವಿವಿಧ ವಾರ್ಡ್‌ಗಳಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದರೆ ಪ್ರತಿನಿಧಿಗಳು ಇರದೇ ಅಧಿಕಾರಿಗಳೇ ಕಾರ್ಯನಿರ್ವಹಿಸಿದಲ್ಲಿ ನಿರೀಕ್ಷಿತ ಪ್ರಗತಿ ಹೇಗೆ?. ಕೂಡಲೇ ಚುನಾವಣೆ ನಡೆಸಿ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ’ ಎಂದು ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ದಂಡಿನ್ ಹೇಳುತ್ತಾರೆ. ‘ಚುನಾಯಿತ ಜನಪ್ರತಿನಿಧಿಗಳಿದ್ದಲ್ಲಿ ವಾರ್ಡ್‌ಗಳ ಜನರು ಸಮಸ್ಯೆಗಳನ್ನು ಜನಪ್ರತಿನಿಧಿಗಳ ಮುಂದೆ ಹೇಳಿಕೊಳ್ಳುತ್ತಾರೆ. ಆದರೆ ಕೇವಲ ಅಧಿಕಾರಿಗಳಿದ್ದಾಗ ಈ ಕೆಲಸ ಸಾಧ್ಯವಾಗುವುದಿಲ್ಲ. ಅಲ್ಲದೆ ಅಧಿಕಾರಿಗಳಿಂದ ಕೆಲಸದ ವೇಗ ಕೂಡ ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ’ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮೇಲಪ್ಪ ಗುಳಿಗೆ ಎನ್ನುತ್ತಾರೆ. ಈ ಕುರಿತಂತೆ ಪಟ್ಟಣ ಪಂಚಾಯತಿ ಅಧಿಕಾರಿ ಸಿದ್ರಾಮೇಶ್ವರ ಮಾತನಾಡಿ ‘ಅಭಿವೃದ್ಧಿಗಾಗಿ ನಗರೋತ್ಥಾನ ಯೊಜನೆಯಡಿ ಅಂದಾಜು ₹5 ಕೋಟಿ ಮಂಜೂರಾಗಿದ್ದು ಅದರಲ್ಲಿ ಎರಡು ಕೋಟಿ ವೆಚ್ಚದಲ್ಲಿ 16 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ 9 ಕಾಮಗಾರಿಗಳು ಮುಕ್ತಾಯವಾಗಿವೆ’ ಎಂದು ಮಾಹಿತಿ ನೀಡಿದರು. ‘ಪಟ್ಟಣದ ರಾಮನಗೌಡರ ಕಾಲೊನಿ ವಿದ್ಯಾನಗರ ಸೇರಿದಂತೆ ಇತರ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಕಳೆದ ಸಾಲಿನಲ್ಲಿ ಅಂದಾಜು ₹20 ಲಕ್ಷ ಕರ ವಸೂಲಿಯಾಗಿದ್ದು ಸದ್ಯ ₹18 ಲಕ್ಷ ಕರ ವಸೂಲಿಯಾಗಿದೆ’ ಎಂದು ತಿಳಿಸಿದರು.

Cut-off box - ಒಮ್ಮೆ ಮಾತ್ರ ಆಡಳಿತಾಧಿಕಾರಿ ಸಭೆ ಗುರುಮಠಕಲ್‌: ಇಲ್ಲಿನ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಅವಧಿ ಮೇ ತಿಂಗಳಲ್ಲಿ ಕೊನೆಗೊಂಡಿದ್ದು ಈವರೆಗೆ ಒಮ್ಮೆ ಮಾತ್ರ ಪುರಸಭೆ ಆಡಳಿತಾಧಿಕಾರಿ ಸಭೆ ನಡೆಸಿದ್ದಾರೆ. ಸದ್ಯ ಯಾದಗಿರಿ ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ್‌ ಇಲ್ಲಿನ ಪುರಸಭೆ ಆಡಳಿತಾಧಿಕಾರಿಯಾಗಿ ನಿಯುಕ್ತರಾಗಿದ್ದಾರೆ. ಈ ಹಿಂದಿನ ಉಪವಿಭಾಗಾಧಿಕಾರಿ ಶಾಲಂ ಹುಸೇನ್‌ ಅವರು ಒಂದು ಬಾರಿ ಅಭಿವೃದ್ಧಿ ವಿಷಯ ಸೇರಿ ವಿವಿಧ ವಿಷಯಗಳಿಗೆ ಪೂರಕವಾಗಿ ಸಭೆ ನಡೆಸಿದ್ದರು. ನಂತರ ಅವರ ವರ್ಗವಾಗಿದ್ದು ಅವರ ಸ್ಥಳಕ್ಕೆ ಹೊಸ ಉಪವಿಭಾಗಾಧಿಕಾರಿ ಸಜ್ಜನ್‌ ನಿಯುಕ್ತರಾದ ನಂತರ ಒನ್ನೂ ಸಭೆ ನಡೆಸಿಲ್ಲ. ‘ಯಾದಗಿರಿ ಜಿಲ್ಲೆಯ ಎಲ್ಲಾ ಪುರಸಭೆಗಳ ಆಡಳಿತಾಧಿಕಾರಿ ಜತೆಗೆ ಯಾದಗಿರಿ ನಗರಸಭೆ ಹೆಚ್ಚುವರಿ ಕಾರ್ಯದೋತ್ತಡದ ಕಾರಣ ಅವರು ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಪುರಸಭೆಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ಸದಸ್ಯರ ಮಾತು ಕೇಳದ ಅಧಿಕಾರಿಗಳು
ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರ ಮಾತು ನಡೆಯುತ್ತಿಲ್ಲ. ಎಲ್ಲವೂ ಪೌರಾಯುಕ್ತರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯುತ್ತಿದ್ದು ತಮ್ಮ ಮಾತು ಕೇಳುತ್ತಿಲ್ಲ ಎಂದು ಸದಸ್ಯರು ಆರೋಪಿಸಿದ್ದಾರೆ. ವಾರ್ಡ್‌ನ ಕೆಲಸ ಕಾರ್ಯಕ್ಕಾಗಿ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಇದರಿಂದ ಅಭಿವೃದ್ಧಿ ಮರೀಚಿಕೆಯಾಗಿದೆ. ಶಾಶ್ವತ ಕುಡಿಯುವ ನೀರು ವಾರ್ಡ್‌ನ ಸಮಸ್ಯೆ ಶೌಚಾಲಯ ನಗರೋತ್ಥಾನ ಕಾಮಗಾರಿಗೆ ಗ್ರಹಣ ಇನ್ನು ಮುಂತಾದ ಸಮಸ್ಯೆಗಳು ನಗರದಲ್ಲಿ ಕಾಡುತ್ತಿವೆ. ಇವುಗಳನ್ನು ಪರಿಹರಿಸಬೇಕಾದ ಅಧಿಕಾರಿಗಳು ಯಾವುದೇ ಕಾಮಗಾರಿ ಮಾಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ‘ಸಾಮಾನ್ಯ ಸಭೆ ಆಗುತ್ತಿದ್ದರೆ ಅಧಿಕಾರಿಗಳು ಭಯದಿಂದ ಕೆಲಸ ಮಾಡುತ್ತಿದ್ದರು. ಆಡಳಿತ ಮಂಡಳಿ ಸದಸ್ಯರು ಇಲ್ಲದಿದ್ದರಿಂದ ಆಟಕ್ಕಿಲ್ಲ ಲೆಕ್ಕಕ್ಕುಂಟು ಎನ್ನುವಂತಾಗಿದೆ. ಅಧಿಕಾರಿಗಳಿಗೆ ಒಂದು ಕಡೆ ಕೆಲಸ ಮಾಡಲು ಹೇಳಿದರೆ ಮತ್ತೊಂದು ಕಡೆ ಕೆಲಸ ಮಾಡುತ್ತಾರೆ. ನಮಗೆ ಗೌರವವೇ ಕೊಡುವುದಿಲ್ಲ. ಇದೆಲ್ಲ ಅಧಿಕಾರಿಗಳ ದರ್ಬಾರ್‌ ಆಗಿದೆ. ಅನುದಾನ ಬಳಕೆಯಾಗುತ್ತಿಲ್ಲ. ಅಧಿಕಾರಿಗಳಿಗೆ ಕೇಳುವವರು ಹೇಳುವವರು ಯಾರೂ ಇಲ್ಲ. ನಗರದಲ್ಲಿ ರಸ್ತೆ ಚರಂಡಿ ಇಲ್ಲ. ಅಭಿವೃದ್ಧಿಯಾಗುವುದು ಹೇಗೆ’ ಎಂದು ಯಾದಗಿರಿ ನಗರಸಭೆ ಸದಸ್ಯ ಸುರೇಶ ಅಂಬಿಗೇರ ಪ್ರಶ್ನಿಸುತ್ತಾರೆ.

ಅಂಕಿ ಅಂಶ

ಜಿಲ್ಲೆಯ ಸ್ಥಳೀಯ ಸಂಸ್ಥೆಯ ಸದಸ್ಯರು

ಯಾದಗಿರಿ ನಗರಸಭೆ ವಾರ್ಡ್‌ಗಳು;31

ಶಹಾಪುರ ನಗರಸಭೆ ವರ್ಡ್‌ಗಳು; 31

ಸುರಪುರ ನಗರಸಭೆ ವಾರ್ಡ್‌ಗಳು; 31

ಗುರುಮಠಕಲ್ ಪುರಸಭೆ ವಾರ್ಡ್‌ಗಳು;23

ಕಕ್ಕೇರಾ ಪುರಸಭೆ ವಾರ್ಡ್‌ಗಳು;23

ಕೆಂಭಾವಿ ಪುರಸಭೆ ವಾರ್ಡ್‌ಗಳು;23

ಪೂರಕ ಮಾಹಿತಿ: ಅಶೋಕ ಸಾವವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ ಅಶೋಕ ಸಾವವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT