ಕಕ್ಕೇರಾ: ಪಟ್ಟಣದಲ್ಲಿ ಸುಮಾರು 50ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಭಜಂತ್ರಿ ಕಾಯಕ ವೃತ್ತಿ ಮಾಡುತ್ತಿರುವ ಕುಟುಂಬಗಳು ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿವೆ.
ಸರ್ಕಾರದ ವಿಶೇಷ ಪ್ಯಾಕೇಜ್ನಲ್ಲಿ ತಮ್ಮ ವೃತ್ತಿಯನ್ನು ಕಡೆಗಣಿಸಿರುವ ಅಧಿಕಾರಿಗಳು, ಜನಪ್ರತಿನಿಧಿಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಯೊಂದು ಶುಭ ಸಮಾರಂಭಗಳಿಗೆ ನಾವುಗಳು ಮಾತ್ರ ನೆನಪಾಗುತ್ತೇವೆ. ಆದರೆ ನಮಗೆ ತೊಂದರೆಯಾದಾಗ ಯಾರು ಇಲ್ಲವಾ ಎಂದು ಬ್ಯಾಂಜೋ ಮುಖ್ಯಸ್ಥ ಹಣಮಂತ ಭಜಂತ್ರಿ ಹೇಳುತ್ತಾರೆ.
ಮದುವೆ ಸಮಾರಂಭಗಳಲ್ಲಿ ,ಶುಭ ಕಾರ್ಯಕ್ರಮಗಳಲ್ಲಿ ವಾದ್ಯಮೇಳದವರಿಗೆ ಹೆಚ್ಚು ಬೇಡಿಕೆ ಇರುತ್ತಿತ್ತು. ಆದರೆ ಕೋವಿಡ್ ಮಾರ್ಗಸೂಚಿಗಳಿಂದಾಗಿ ನಮಗೆ ತೊಂದರೆಯಾಗಿದೆ ಎನ್ನುತ್ತಾರೆ ಅವರು.
ಬ್ಯಾಂಜೋ ವಾದಕರ ಚಾಲಕರು, ಕಲಾವಿದರು ಇಂದು ನಿರ್ಗತಿಕರಾಗಿದ್ದು, ಅವರ ಕುಟುಂಬ ಕಷ್ಟದಲ್ಲಿದೆ ಎಂದು ಮೌನೇಶ ಭಜಂತ್ರಿ ಹೇಳಿದರು.
ಮದುವೆ ಶುಭ ಸಮಾರಂಭಗಳಲ್ಲಿ ಒಂದು ಮದುವೆಗೆ ₹ 10 ಸಾವಿರದಿಂದ ₹ 12 ಸಾವಿರ ಹಣ ಪಡೆಯುತ್ತಿದ್ದೇವು. ಆದರೆ ಪ್ರಸ್ತುತ ಬ್ಯಾಂಜೋ ವಾದಕರಿಲ್ಲದೇ ಮದುವೆ ಮಾಡುತ್ತಿದ್ದು, ನಮಗೆ ತೊಂದರೆಯಾಗಿದೆ ಎಂದು ಹಿರಿಯ ಮುಖಂಡ ರಮೇಶ ಹೂಗಾರ ಹೇಳಿದರು.
‘ನಮಗೆ ಸರ್ಕಾರ ಸಹಾಯಧನ ನೀಡಬೇಕು ಎಂದು ಯಲ್ಲಪ್ಪ ಭಜಂತ್ರಿ, ಸೋಮನಿಂಗಪ್ಪ ಭಜಂತ್ರಿ, ರಮೇಶ ಹೂಗಾರ, ಹಣಮಂತ ಭಜಂತ್ರಿ, ಪರಮಣ್ಣ ಭಜಂತ್ರಿ ಹಾಗೂ ನಾಗನಾಥ ಸಾಳಿ ಮನವಿ ಮಾಡಿದ್ದಾರೆ.