ಯಾದಗಿರಿ: ಕೇಂದ್ರ ಸಚಿವ ಭಗವಂತ ಖೂಬಾ ಅವರನ್ನು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಜನಾರ್ಶೀವಾದ ಯಾತ್ರೆಗೆ ಸ್ವಾಗತಿಸಿದ ಆರೋಪದ ಮೇಲೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಯರಗೋಳ ಗ್ರಾಮದ ರಾಮಲಿಂಗಪ್ಪ, ಮೋನಪ್ಪ, ಮೈಬೂಬ್, ಶಾಂತಮೂರ್ತಿ, ಹನಮಂತ, ಶಿವಪ್ಪ, ವೆಂಕಟರೆಡ್ಡಿ ಅವರ ವಿರುದ್ಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ನೀಡಿದ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲ್ಲೂಕಿನ ಯರಗೋಳದಲ್ಲಿ ಬುಧವಾರ ನಡೆದ ಜನಾರ್ಶೀವಾದ ಯಾತ್ರೆ ವೇಳೆ ಕೋವಿಡ್ ನಿಯಮ ಉಲ್ಲಂಘನೆ ಮಾಡಲಾಗಿತ್ತು.
ಪ್ರಮುಖರ ಹೆಸರು ಕೈಬಿಟ್ಟ ಪೊಲೀಸರು: ಯಾದಗಿರಿ ನಗರದಲ್ಲಿ ಬೈಕ್ ರ್ಯಾಲಿ ಹಾಗೂ ಸಮಾರಂಭ ಆಯೋಜನೆ ಮಾಡಿದವರ ವಿರುದ್ಧ ದೂರು ದಾಖಲು ಮಾಡದೆ ಗ್ರಾಮಸ್ಥರ ವಿರುದ್ಧ ಮಾತ್ರ ಪೊಲೀಸ್ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಬಿಜೆಪಿ ಪ್ರಮುಖರ ಹೆಸರನ್ನು ಕೈಬಿಡಲಾಗಿದೆ.
ಪ್ರಭಾವಿ ರಾಜಕಾರಣಿಗಳ ಪ್ರಭಾವಕ್ಕೆ ಮಣಿದಿದ್ದಾರೆಯೇ ಎನ್ನುವ ಪ್ರಶ್ನೆ ಎದ್ದಿದೆ.
ಲೈಸೆನ್ಸ್ ರದ್ದತಿಗೆ ಡಿಸಿಗೆ ಪತ್ರ: ‘ಯಾರಗೋಳದಲ್ಲಿ ಕೇಂದ್ರ ಸಚಿವರನ್ನು ಸ್ವಾಗತಿಸುವ ವೇಳೆ ನಾಲ್ಕು ಜನರು ಸಿಂಗಲ್ ಬ್ಯಾರೆಲ್ ಬಂದೂಕಿನಿಂದ ಮದ್ದುಸಿಡಿಸಿದ ಆರೋಪದ ಮೇಲೆ ಈಗಾಗಲೇ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂದೂಕು ಲೈಸೆನ್ಸ್ ರದ್ದು ಮಾಡಲು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
ಯಾದಗಿರಿಯ ಅಂಬೇಡ್ಕರ್ ವೃತ್ತದ ಬಳಿ ಜನಾರ್ಶೀವಾದ ಯಾತ್ರೆ ಅಂಗವಾಗಿ ಬಿಜೆಪಿ ಯುವ ಮೋರ್ಚಾದಿಂದ ಆಯೋಜಿಸಿದ್ದ ಬೈಕ್ ರ್ಯಾಲಿ