ಸುರಪುರ: ‘ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳ ಕುಡಿಯುವ ನೀರು ಯೋಜನೆಗೆ ₹540 ಕೋಟಿ ಅನುದಾನ ಮಂಜೂರು ಮಾಡಲಗಿದೆ. ಅದರಲ್ಲಿ ಸುರಪುರಕ್ಕೆ ₹240 ಕೋಟಿ ಒದಗಿಸಲಾಗಿದೆ’ ಎಂದು ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಶಾಸಕ ರಾಜೂಗೌಡ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ನಗರಕ್ಕೆ ಶಾಶ್ವತವಾಗಿ ನೀರು ಒದಗಿಸಲು ವಿಶೇಷ ಯೋಜನೆ ರೂಪಿಸಲಾಗಿದೆ. 72 ಎಕರೆ ಕೆರೆ ಗುರುತಿಸಲಾಗಿದ್ದು ನದಿಯ ನೀರಿನ ಜೊತೆಗೆ ಕೆರೆ ನೀರು ಶುದ್ಧೀಕರಿಸಿ ನಿರಂತರ ನೀರು ಒದಗಿಸುವ ಉದ್ಧೇಶ ಹೊಂದಲಾಗಿದೆ. ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುವುದು’ ಎಂದು ಹೇಳಿದರು.
‘ಪ್ರಥಮ ಹಂತವಾಗಿ ಶಹಾಪುರಕ್ಕೆ ₹68 ಕೋಟಿ, ಅಫಜಲಪುರ ₹88 ಕೋಟಿ, ಔರಾದ್ ₹70 ಕೋಟಿ, ಆಳಂದ ಕುಡಿಯುವ ನೀರಿಗಾಗಿ ₹90 ಕೋಟಿ ಮಂಜೂರು ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ಮುಂಬರುವ ದಿನಗಳಲ್ಲಿ ಇನ್ನಷ್ಟು ಅನುದಾನ ತಂದು ರಾಯಚೂರು ಕೊಪ್ಪಳ, ಬಳ್ಳಾರಿ, ವಿಜಯಪುರ ಸೇರಿದಂತೆ ನೀರಿನ ಸಮಸ್ಯೆ ಇರುವ ಇತರೆ ನಗರಗಳ ನೀರಿನ ಸಮಸ್ಯೆ ನೀಗಿಸಲಾಗುವುದು. ರಾಜ್ಯದೆಲ್ಲೆಡೆ ನಗರ ಪ್ರದೇಶದ ಜನರಿಗೆ ಸಮರ್ಪಕವಾಗಿ ನೀರು ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ’ ಎಂದರು.
‘ಗುರುವಾರ ಕಲಬುರ್ಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗಿಯಾಗದಿರುವುದಕ್ಕೆ ಅಪಾರ್ಥ ಕಲ್ಪಿಸಬೇಕಿಲ್ಲ. ಮಹತ್ವಪೂರ್ಣ ಕೆಲಸದ ಮೇಲೆ ಬೇರೆಡೆಗೆ ಹೋಗಿದ್ದೆ. ಪಕ್ಷದಲ್ಲಿ ಆಂತರಿಕ ಕಲಹ ಶುರುವಾಗಿದೆ, ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರ ಶೀಘ್ರದಲ್ಲಿ ಪತನವಾಗಲಿದೆ ಎಂಬೆಲ್ಲ ಮಾತುಗಳು ಬರೀ ಗಾಳಿ ಸುದ್ದಿ’ ಎಂದರು.