ಸುರಪುರ: ‘ಇಂದಿನ ವಿದ್ಯಾರ್ಥಿಗಳಿ ಕಂಪ್ಯೂಟರ್ ಜ್ಞಾನ ಅವಶ್ಯಕ. ಇದರಿಂದ ಸ್ಪರ್ಧಾತ್ಮಕ ಯುಗಕ್ಕೆ ತೆರೆದುಕೊಳ್ಳಲು ಅವರಿಗೆ ಅನುಕೂಲವಾಗಲಿದೆ’ ಎಂದು ನೆಹರು ಯುವ ಕೇಂದ್ರದ ಅಧಿಕಾರಿ ಸಿದ್ರಾಮಪ್ಪ ಮಾಳ ಹೇಳಿದರು.
ಇಲ್ಲಿನ ರಂಗಂಪೇಟೆಯ ಬಸವಪ್ರಭು ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಸಗರನಾಡು ಯುವಕ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಗ್ರಾಮಿಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಈಗ ಪ್ರತಿಯೊಂದು ಕ್ಷೇತ್ರದಲ್ಲಿ ಕಂಪ್ಯೂಟರ್ ಜ್ಞಾನಕ್ಕೆ ಹೆಚ್ಚಿನ ಆದ್ಯತೆ ಇದೆ. ಸರ್ಕಾರ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಹೊಂದಲು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದರು.
ನೆಹರು ಯುವ ಕೇಂದ್ರದ ಸಮನ್ವಯ ಅಧಿಕಾರಿ ಹರ್ಷಲ್ ತಲಸ್ಕರ್ ಮಾತನಾಡಿ, ‘ವಿದ್ಯಾರ್ಥಿಗಳು ಉಚಿತ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು. ಕಂಪ್ಯೂಟರ್ ಜ್ಞಾನ ಹೊಂದಿದ ವ್ಯಕ್ತಿಗೆ ಉಪಜೀವನ ಸುಲಭ’ ಎಂದು ಹೇಳಿದರು.
ಸಗರನಾಡು ಯುವಕ ಸಂಘದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು. ಧರ್ಮರಾಜ ಬಡಿಗೇರ, ಮಲ್ಲು ಬಾದ್ಯಾಪುರ, ಕಲ್ಯಾಣಶೆಟ್ಟಿ ಅಂಗಡಿ, ಪ್ರವೀಣ ಜಕಾತಿ ಇದ್ದರು. ಸಲೀಂ ಅಡ್ಡೊಡಗಿ ನಿರೂಪಿಸಿದರು.