ಯಾದಗಿರಿ: ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ (1961 ಕಲಂ 79 ಎಬಿಸಿ ಮತ್ತು 80) ರದ್ದುಪಡಿಸಬಾರದು, ಬಗರ್ ಹುಕುಂ ಸಾಗುವಳಿದಾರರಿಗೆ ಪಟ್ಟಾ, ಪಹಣಿ ವಿತರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ಪದಾಧಿಕಾರಿಗಳು ಬುಧವಾರ ನಗರದ ನೇತಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ‘ಒಂದು ವೇಳೆ ಈ ಕಾಯ್ದೆ ಜಾರಿಯಾದರೆ ಸಣ್ಣ ಹಿಡುವಳಿ ರೈತರ ಜಮೀನು ಬಂಡವಾಳಶಾಹಿಗಳ ಪಾಲಾಗುತ್ತದೆ. ಇದರಿಂದ ರೈತಾಪಿ ವರ್ಗ ಬೀದಿಗೆ ಬರುತ್ತದೆ. ಭೂಸುಧಾರಣೆ ಕಾಯ್ದೆ ರದ್ದು ಮಾಡಬಾರದು’ ಎಂದರು.
‘ಗ್ರಾಮೀಣ ಭಾಗದಲ್ಲಿ ಬಗರ್ ಹುಕುಂ ಸಾಗುವಳಿ ರೈತರಿಗೆ ಸರ್ಕಾರ ಪಟ್ಟಾ,ಪಹಣಿ ವಿತರಿಸಬೇಕು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ ತಿದ್ದುಪಡಿ ಮಾಡಬಾರದು’ ಎಂದರು.
ಸಂಘದ ಮಹಿಳಾ ಘಟಕದ ಕಾರ್ಯದರ್ಶಿ ನಾಗರತ್ನಾ ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ಶರಣಗೌಡ ಮದ್ರಕಿ, ಸಿದ್ದಣ್ಣ ಮೇಟಿ, ಚಂದ್ರಕಲಾ ವಡಗೇರಿ, ಮುದ್ದಣ್ಣ ಅಮ್ಮಾಪುರ, ಸಿದ್ದು, ಮಲ್ಕಣ್ಣ, ಶಹಾಪುರ, ಚನ್ನಾಮಲ್ಲಿಕಾರ್ಜುನ, ವೀರಸಂಗಪ್ಪ ಇದ್ದರು.