ಸುರಪುರ: ‘ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕಿನ 52 ನಿರ್ಗತಿಕರಿಗೆ ಪ್ರತಿ ತಿಂಗಳು ₹ 750 ಮಾಸಾಶನ ನೀಡಲಾಗುತ್ತಿದೆ’ ಎಂದು ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಡಿ.ಸಂದೀಪ್ ತಿಳಿಸಿದರು.
ಇಲ್ಲಿಯ ಭೋವಿಗಲ್ಲಿಯ ಹುಲಿಗೆಮ್ಮ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ಗತಿಕರಿಗೆ ಭಾನುವಾರ ಹಮ್ಮಿಕೊಂಡಿದ್ದ ವಾತ್ಸಲ್ಯ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಾಲ್ಲೂಕಿನಲ್ಲಿ ನಿರ್ಗತಿಕರನ್ನು ಗುರುತಿಸಿ ಅವರ ಜೀವನ ನಿರ್ವಹಣೆಗಾಗಿ ಪಾತ್ರೆ, ಚಾಪೆ, ತಲೆ ದಿಂಬು, ಹೊದಿಕೆ ಒಳಗೊಂಡಿರುವ ವಾತ್ಸಲ್ಯ ಎಂಬ ಕಿಟ್ ವಿತರಿಸಲಾಗುತ್ತಿದೆ’ ಎಂದರು.
‘ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಆಶೀರ್ವಾದದೊಂದಿಗೆ ಸಂಸ್ಥೆಯು ಸಮಾಜದಲ್ಲಿ ಸರ್ವರ ಒಳಿತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ಉತ್ತಮವಾಗಿ ಸೇವೆ ಮಾಡುತ್ತಿದೆ’ ಎಂದರು.
‘ತಾಲ್ಲೂಕಿನಲ್ಲಿ 2015ರಲ್ಲಿ ಶ್ರೀಧರ್ಮಸ್ಥಳ ಸ್ವ ಸಹಾಯ ಸಂಘವನ್ನು ಸ್ಥಾಪಿಸಲಾಯಿತು. ಸ್ಥಳೀಯರ ಸಹಕಾರ ಮತ್ತು ತಾಯಂದಿರ ಉತ್ತಮ ಪ್ರತಿಕ್ರಿಯೆಯಿಂದ ಇಂದು 3,144 ಗುಂಪುಗಳಿದ್ದು 27,500 ಫಲಾನುಭವಿಗಳಿದ್ದಾರೆ. ಎಲ್ಲರ ಸಹಕಾರ, ಅತ್ಯುತ್ತಮ ಕೆಲಸ ಕಾರ್ಯಗಳಿಂದ ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲೇ ಪ್ರಥಮ ಸ್ಥಾನ ಗಳಿಸಲು ಸಾಧ್ಯವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
‘ತಾಲ್ಲೂಕಿನ 14 ಜನ ವಿದ್ಯಾರ್ಥಿಗಳಿಗೆ ಅವರ ಕೋರ್ಸ್ಗಳಿಗೆ ಅನುಸಾರವಾಗಿ ಸುಜ್ಞಾನ ನಿಧಿ ಶಿಷ್ಯ ವೇತನ ನೀಡಲಾಗುತ್ತಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಜ.31 ಕೊನೆ ದಿನ’ ಎಂದ ತಿಳಿಸಿದರು.
ಪತ್ರಕರ್ತ ನಾಗರಾಜ ನ್ಯಾಮತಿ ಮಾತನಾಡಿ, ‘ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಾ ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡುತ್ತಾ ಮುಂದೆ ಸಾಗುತ್ತಿರುವ ಸಂಸ್ಥೆಯ ಜನ ಸೇವೆ ಶ್ಲಾಘನೀಯ’ ಎಂದರು.
ನಗರಸಭೆ ಸದಸ್ಯರಾದ ಮಾನಪ್ಪ ಚೆಳ್ಳಿಗಿಡ, ಮೊಹ್ಮದ್ ಶರೀಫ್, ಪತ್ರಕರ್ತ ಗಿರೀಶ್ ಶಾಬಾದಿ, ದೇವಸ್ಥಾನದ ಅರ್ಚಕ ಹುಲಗಪ್ಪ ಪೂಜಾರಿ, ಸಂಘದ ಮೇಲ್ವಿಚಾರಕಿ ರೇಖಾ, ಸೇವಾ ಪ್ರತಿನಿಧಿ ರಾಧಾ, ಪರಶುರಾಮಮಇದ್ದರು.