ಯಾದಗಿರಿ: ಜಿಲ್ಲೆಯಲ್ಲಿ ನಾಡಹಬ್ಬ ದಸರಾ ಹಬ್ಬಕ್ಕೆ ಸೋಮವಾರ ಅದ್ಧೂರಿ ಚಾಲನೆ ನೀಡಲಾಗಿದ್ದು, ವಿವಿಧೆಡೆ ದೇವಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ನಗರದ ಹಿಂದೂ ಸೇವಾ ಸಮಿತಿಯಿಂದ ಹಮ್ಮಿಕೊಂಡಿರುವ ಗಿರಿನಾಡಿನ ದಸರಾ ಉತ್ಸವ ಸೋಮವಾರ ವಿಧ್ಯುಕ್ತವಾಗಿ ಆರಂಭಗೊಂಡಿತು.
ಭವಾನಿ ದೇವಿಯ ಮೂರ್ತಿಯನ್ನು ಭವಾನಿ ಮಂದಿರದಿಂದ ಭೀಮಾ ನದಿಗೆ ತೆರಳಿ ಗಂಗಾ ಸ್ನಾನ ನಂತರ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.
ಭೀಮಾ ನದಿಯಿಂದ ಸುಭಾಷ ವೃತ್ತ, ಶಾಸ್ತ್ರಿ ವೃತ್ತದಿಂದ ಭವಾನಿ ದೇವಸ್ಥಾನದ ವರೆಗೆ ಡೊಳ್ಳು ಕುಣಿತದ ಮೂಲಕ ಮೆರವಣಿಗೆ ಸಾಗಿತು.
ಟ್ರ್ಯಾಕ್ಟರ್ನಲ್ಲಿಅಲಂಕಾರ:
ಭವಾನಿ ದೇವಿಯ ಮೂರ್ತಿಯನ್ನು ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ ಮೂಲಕ ಗಂಗಾ ಸ್ನಾನಕ್ಕೆ ಕರೆದೊಯ್ದು ಮಂದಿರದ ಬಳಿಗೆ ಕರೆತರಲಾಯಿತು.
ಟ್ರ್ಯಾಕ್ಟರ್ನಲ್ಲಿ ದೇವಿ ಮೂರ್ತಿಯನ್ನು ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಯುವಕರು ಕೇಸರಿ ಶಾಲು ಧರಿಸಿದ್ದರೆ, ಯುವತಿಯರು ಕಳಸ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಡೊಳ್ಳು ಕುಣಿತ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಡೊಳ್ಳು ಕುಣಿತ ಆಯೋಜಿಸಲಾಗಿದ್ದು, ದಾರಿಯುದ್ದಕ್ಕೂ ಡೊಳ್ಳಿನ ಶಬ್ದಕ್ಕೆ ಯುವಕರು ನೃತ್ಯ ಮಾಡಿದರು.
ಅದ್ಧೂರಿ ಸಿದ್ಥತೆ:
ಸ್ಟೇಷನ್ ಏರಿಯಾದ ಭವಾನಿ ಮಂದಿರದಲ್ಲಿ ದೇವಿ ಪ್ರತಿಷ್ಠಾಪನೆ ಅಂಗವಾಗಿ ಅದ್ಧೂರಿ ಸಿದ್ಧತೆ ಮಾಡಲಾಗಿದೆ.
ದೇವಸ್ಥಾನವನ್ನು ವಿವಿಧ ಬಣ್ಣಗಳಿಂದ ಅಲಂಕಾರ ಮಾಡಲಾಗಿದೆ. ದೇಗುಲದ ಮುಂಭಾಗವನ್ನು ವಿವಿಧ ಬಣ್ಣದ ಆಕೃತಿಗಳಿಂದ ಸಿದ್ಧ ಮಾಡಲಾಗಿದೆ.
ವಿದ್ಯುತ್ ದೀಪಗಳ ಅಲಂಕಾರ:
ದಸರಾ ಅಂಗವಾಗಿ ಲಾಲ್ಬಹದ್ದೂರ್ ಶಾಸ್ತ್ರೀ ವೃತ್ತದಿಂದ ಭವಾನಿ ದೇವಸ್ಥಾನದ ವರೆಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ವೃತ್ತದಲ್ಲಿ ಬೃಹತಾಕರದ ಸ್ವಾಗತ ಕಮಾನು ಅಳವಡಿಸಲಾಗಿದೆ.
ದಾಂಡಿಯಾ ನೃತ್ಯ ಆಕರ್ಷಣೆ;
ಹಿಂದೂ ಸೇವಾ ಸಮಿತಿಯಿಂದ ಭವಾನಿ ಮಂದಿರದಲ್ಲಿ ಪ್ರತಿದಿನ ರಾತ್ರಿ 9ರಿಂದ12 ವರೆಗೆ ನಡೆಯುವ ದಾಂಡಿಯಾ ನೃತ್ಯ ಗಮನ ಸೆಳೆಯುತ್ತದೆ.
ವಿವಿಧೆಡೆ ದೇವಿ ಮೂರ್ತಿ ಪ್ರತಿಷ್ಠಾಪನೆ:
ದಸರಾ ಹಬ್ಬದ ಅಂಗವಾಗಿ ನಗರದ ವಿವಿಧ ಬಡಾವಣೆಗಳಲ್ಲಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಗಾಂಧಿನಗರ ತಾಂಡಾ, ಚಕ್ರಕಟ್ಟ, ಬೆಟ್ಟ, ಗಂಜ್ ಪ್ರದೇಶ ಸೇರಿದಂತೆ ವಿವಿಧ ಕಡೆ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ, ಹವನ, ಹೋಮ ಮಾಡಲಾಗುತ್ತಿದೆ.