ಹುಣಸಗಿ: ತಾಲ್ಲೂಕಿನ ಅಗ್ನಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮ ನಡೆಯಿತು.
ಹುಣಸಗಿಯ ತಹಶೀಲ್ದಾರ್ ಅಶೋಕಕುಮಾರ್ ಸುರಪುರಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರು ತಮ್ಮ ಕಚೇರಿ ಕೆಲಸ ಕಾರ್ಯಗಳಿಗಾಗಿ ಅಲೆದಾಡವದನ್ನು ತಪ್ಪಿಸ ನಿಟ್ಟಿನಲ್ಲಿ ಸರ್ಕಾರ ಈ ಕಾರ್ಯಕ್ರಮವನ್ನು ರೂಪಿಸಿದ್ದು, ಗ್ರಾಮದ ಜನರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು. ಗ್ರೇಡ್ 2 ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ್ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸಯ್ಯ ಹಿರೇಮಠ ಪಂಚಾಯಿತಿ ರಾಜ್ ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತಂತೆ ಮಾಹಿತಿ ನೀಡಿದರು. ಕಂದಾಯ ಇಲಾಖೆಗೆ ಸಂಬಂಧಿಸಿದ 8 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಯಿತು.
ಕಂದಾಯ ಇಲಾಖೆಯ 39 , ಶಿಕ್ಷಣ ಇಲಾಖೆಯ 6 ಜೆಸ್ಕಾಂನ 1 , ಪಂಚಾಯಿತಿ ರಾಜ್ ಇಲಾಖೆಯಯ 15 ಅರ್ಜಿಗಳು , ಆರೋಗ್ಯ ಇಲಾಖೆಯ 1, ಸರ್ವೆ ಇಲಾಖೆಯ 2, ಸೇರಿದಂತೆ ಒಟ್ಟು 65 ಅರ್ಜಿಗಳನ್ನು ಸ್ವೀಕರಿಸಲಾಯಿತೆಂದು ತಿಳಿಸಲಾಯಿತು.
ಸಿದ್ಧನಗೌಡ ಪಾಟೀಲ್ ಕರಿಬಾವಿ, ಗ್ರಾ.ಪಂ. ಅಧ್ಯಕ್ಷೆ ಪರಮವ್ವ ಸಿದ್ರಾಮಪ್ಪ, ಉಪ ತಹಶೀಲ್ದಾರ್ ಪ್ರವೀಣಕುಮಾರ್ ಸಜ್ಜನ್, ಗವಿಸಿದ್ಧಯ್ಯ, ಗ್ರಾಮ ಲೆಕ್ಕಾಧಿಕಾರಿಗಳಾದ ಬಂದೇನವಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುವರ್ಣಾ ಇದ್ದರು.