ಯಾದಗಿರಿ: ಕೊರೊನಾ ಲಾಕ್ಡೌನ್ ಕಾರಣ ಕಟ್ಟಡ ಕಾರ್ಮಿಕರ ಬದುಕು ಮತ್ತೆ ಸಂಕಷ್ಟಕ್ಕೀಡಾಗಿದೆ. ಕಳೆದ ವರ್ಷ ದ ಲಾಕ್ಡೌನ್ನಿಂದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ಕಟ್ಟಡ ಕಾರ್ಮಿಕರ ಬದುಕು ಮತ್ತೆ ಸಂಕಷ್ಟಕ್ಕೀಡಾಗಿದೆ. ಪ್ರಸಕ್ತ ಲಾಕ್ಡೌನ್ ಅವರನ್ನು ಇನ್ನಷ್ಟು ತತ್ತರಿಸುವಂತೆ ಮಾಡಿದೆ. ಚೇತರಿಕೆ ಹಾದಿ ಕಾಣಸಿಗುತ್ತಿಲ್ಲ.
ಜಿಲ್ಲೆಯಲ್ಲಿ 30 ಸಾವಿರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿದ್ದು, ಇವರೆಲ್ಲರಿಗೂ ಲಾಕ್ಡೌನ್ನಿಂದ ಕೆಲಸವಿಲ್ಲದಂತಾಗಿದೆ. ಕಳೆದ ವರ್ಷದ ಲಾಕ್ಡೌನ್ ವೇಳೆ ಹಲವರು ಕೆಲಸ ಕಳೆದುಕೊಂಡಿದ್ದರು. ಈಗ ಬದುಕು ಚೇತರಿಕೆ ಕಾಣುವ ಮುನ್ನವೇ ಮತ್ತೆ ಬಿಗಡಾಯಿಸಿದೆ. ‘ಕೆಲಸ ಮಾಡದಿದ್ದರೆ, ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಹೀಗಾಗಿ ದೂರದ ಸ್ಥಳದಲ್ಲಿ ಮಾಡುತ್ತಿದ್ದ ಕೆಲಸ ವನ್ನು ಬಿಟ್ಟು ನಾವು ಹತ್ತಿರದಲ್ಲಿರುವ ಕಟ್ಟಡ ಮಾಲೀಕರನ್ನು ಕಾಡಿಬೇಡಿ ಕೆಲಸ ಗಿಟ್ಟಿಸಿಕೊಂಡಿದ್ದೇವೆ. ಆದರೆ, ಸಾಮಗ್ರಿ ಇರುವವರೆಗೆ ಮಾತ್ರ ಕೆಲಸ ನಡೆಯು ತ್ತದೆ. ಇದಾದ ನಂತರ ಮುಂದೇನು ಎನ್ನುವ ಪ್ರಶ್ನೆ ಎದುರಾ ಗಿದೆ’ ಎಂದು ಕಟ್ಟಡ ಕಾರ್ಮಿಕ ವೆಂಕಟೇಶ ಆತಂಕ ವ್ಯಕ್ತಪಡಿಸಿದರು.
ಪೊಲೀಸರಿಂದ ವಾಹನ ವಶ: ‘ಲಾಕ್ಡೌನ್ ಇದ್ದರೂ ಸರ್ಕಾರ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದೆ. ಆದರೆ, ನಾವು ದೂರದ ಸ್ಥಳಗಳಿಗೆ ತೆರಳುವ ವೇಳೆ ಪೊಲೀಸರು ಪ್ರಶ್ನಿಸಿ, ವಾಹನ ವಶಪಡಿಸಿಕೊಂಡರು. ಇದ ರಿಂದ ನಡೆದುಕೊಂಡೆ ಕೆಲಸದ ಸ್ಥಳಕ್ಕೆ ಹೋದೆವು. ಇದರಿಂದ ನಾವು ತುಂಬಾ ಸಮಸ್ಯೆ ಎದುರಿಸಬೇಕಾಯಿತು’ ಎಂದು ಕಟ್ಟಡ ಕಾರ್ಮಿಕರ ಮೇಸ್ತ್ರಿ ಹಣಮಂತ ಶಿರಗೋಳ ತಿಳಿಸಿದರು.
‘ಲಾಕ್ಡೌನ್ನಿಂದ ಕಟ್ಟಡ ಕಾರ್ಮಿಕರು ತುಂಬಾ ಹೈರಾಣು ಆಗಿದ್ದಾರೆ. ಕಳೆದ ಬಾರಿ ಲಾಕ್ಡೌನ್ ಇದ್ದ ಕಾರಣ ಕೆಲ ದಿನ ಮನೆಯಲ್ಲಿದ್ದೆವು. ಸರ್ಕಾರ ಮತ್ತೆ ಮತ್ತೆ ಲಾಕ್ಡೌನ್ ಅವಧಿ ವಿಸ್ತರಿಸಿಕೊಂಡ ಪರಿಣಾಮ 6 ತಿಂಗಳು ಕೆಲಸ ಇಲ್ಲದಂತಾಯಿತು. ಈಗ ಮತ್ತೆ ಲಾಕ್ಡೌನ್ ಮಾಡಿದ್ದರೂ ಕೆಲಸಕ್ಕೆ ಬಂದಿದ್ದೇವೆ. ಕಳೆದ ಬಾರಿ ಯಂತೆ ಸಮಸ್ಯೆಯಾದರೆ ಜೀವನ ಕಷ್ಟಕರವಾಗಲಿದೆ’ ಎಂದು ಕಟ್ಟಡ ಕಾರ್ಮಿಕರಾದ ರಾಮುಕುಮಾರ, ಭೀಮರಾಯ, ನಾಗಪ್ಪ ತಿಳಿಸಿದರು.
ಊಟಕ್ಕೆ ಸಮಸ್ಯೆ: ‘ಲಾಕ್ಡೌನ್ಗಿಂತ ಮುಂಚಿತವಾಗಿ ಕೆಲಸ ಮಾಡುವ ಸ್ಥಳದ ಅಕ್ಕಪಕ್ಕ ಹೋಟೆಲ್ಗಳಿದ್ದರೆ ಊಟ ಸೇವಿಸುತ್ತಿದ್ದೇವೆ. ಈಗ ಬಹುತೇಕ ಹೋಟೆಲ್ಗಳು ಬಾಗಿಲು ಹಾಕಿವೆ. ಇದರಿಂದ ಊಟದ ಸಮಸ್ಯೆಯೂ ಎದುರಿಸುವಂತಾಗಿದೆ. ಮನೆಕಟ್ಟಿಸು ವವರು ಊಟ ಕೊಟ್ಟರೆ ತಿನ್ನುತ್ತಿವೆ. ಇಲ್ಲಿದ್ದರೆ ನಮಗೆ ಸಮಸ್ಯೆ ತಪ್ಪಿದ್ದಲ್ಲ’ ಎಂದು ಕಟ್ಟಡ ಕಾರ್ಮಿಕರೊಬ್ಬರು ತಿಳಿಸಿದರು.
ಈ ಬಾರಿ ಪ್ಯಾಕೇಜ್ ಇಲ್ಲ!
‘ಕಳೆದ ಬಾರಿ ಲಾಕ್ಡೌನ್ ಮಾಡಿದಾಗ ರಾಜ್ಯ ಸರ್ಕಾರ ಪ್ರತಿಯೊಬ್ಬ ಕಟ್ಟಡ ಕಾರ್ಮಿಕರಿಗೆ ಪರಿಹಾರವಾಗಿ ತಲಾ ₹5 ಸಾವಿರ ಘೋಷಿಸಿತ್ತು. ಆದರೆ, ಈ ಬಾರಿ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ತಿಳಿಸಿದ್ದು, ನಮ್ಮಲ್ಲಿ ಆತಂಕ ಹೆಚ್ಚಿಸಿದೆ’ ಎಂದು ಕಟ್ಟಡ ಕಾರ್ಮಿಕರು ತಿಳಿಸಿದರು.
‘ಅತ್ತ ಕೆಲಸವೂ ಇಲ್ಲದೇ ಇತ್ತ ಸರ್ಕಾರದಿಂದ ಪರಿಹಾರವೂ ಇಲ್ಲದೆ ಉಪಜೀವನಕ್ಕೆ ಎನು ಮಾಡಬೇಕು ಎಂಬುದೇ ಚಿಂತೆ. ಜಿಲ್ಲೆಯ ಕಟ್ಟಡ ಕಾರ್ಮಿಕರ ಬಳಿ ಗುರುತಿನ ಚೀಟಿ ಇಲ್ಲ. ಹೀಗಾಗಿ ಕೆಲವರಿಗೆ ಸರ್ಕಾರ ಕಳೆದ ಬಾರಿ ನೀಡಿದ ಪರಿಹಾರವೂ ಬಂದಿಲ್ಲ. ದಾಖಲೆ ಸಲ್ಲಿಸಿದರೂ ಸೂಕ್ತವಾಗಿಲ್ಲದ ಕಾರಣ ನೀಡಿ ಅರ್ಜಿ ತಿರಸ್ಕಾರ ಮಾಡಲಾಗಿದೆ’ ಎಂದು ಕಾರ್ಮಿಕರು ದೂರಿದರು.
*ಲಾಕ್ಡೌನ್ ಮುಂಚೆ ಮಾರುಕಟ್ಟೆ ಮತ್ತು ಮುದ್ನಾಳ ಮತ್ತಿತರ ಕಡೆ ಕೆಲಸ ನಡೆಯುತ್ತಿತ್ತು. ಈಗ ಮನೆ ಅಕ್ಕಪಕ್ಕದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಊಟಕ್ಕೆ ತಣ್ಣೀರು ಬಟ್ಟೆ ಗತಿಯಾಗುತ್ತಿದೆ
ಹಣಮಂತ ಶಿರಗೋಳ, ಕಟ್ಟಡ ನಿರ್ಮಾಣ ಮೇಸ್ತ್ರಿ
*ಲಾಕ್ಡೌನ್ ಇದೆ ಎಂದು ಮನೆಯಲ್ಲಿ ಕುಳಿತು ಊಟ ಮಾಡಲು ಹಣವಿಲ್ಲ. ಹೀಗಾಗಿ ಕೆಲಸ ಕೇಳಿಕೊಂಡು ಮಾಲೀಕರ ಬಳಿ ಕೂಲಿ ಮಾಡುತ್ತಿದ್ದೇವೆ. ಕಟ್ಟಡ ಕಾರ್ಮಿಕರ ಬಗ್ಗೆ ಸರ್ಕಾರ ಕಾಳಜಿ ವಹಿಸಲಿ
ಮಲ್ಲಿಕಾರ್ಜುನ ಮ್ಯಾಗೇರಿ, ಕಟ್ಟಡ ಕಾರ್ಮಿಕ
*ಲಾಕ್ಡೌನ್ಗಿಂತ ಮುಂಚೆಯೇ ಎಲ್ಲ ಕಟ್ಟಡ ನಿರ್ಮಾಣ ಸಾಮಗ್ರಿ ತಂದಿಟ್ಟರಿಂದ ಕಟ್ಟಡ ಕಾರ್ಮಿಕರು ಕೂಲಿ ಮಾಡುತ್ತಿದ್ದಾರೆ. ಇಲ್ಲದಿದ್ದರೆ ಸಾಮಗ್ರಿ ಖರೀದಿಗೆ ಕಷ್ಟವಾಗುತ್ತಿತ್ತು
ಸುರೇಶ ರೆಡ್ಡಿ, ಕಟ್ಟಡ ಮಾಲಿಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.