ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ರಾಯಚೂರು ಕ್ಷೇತ್ರ: ಯಾರಿಗೆ ಸಿಗಲಿದೆ ಟಿಕೆಟ್‌?

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಲೋಕಸಭಾ ಕ್ಷೇತ್ರ, ಹಲವರು ಆಕಾಂಕ್ಷಿಗಳು
Published 15 ಮಾರ್ಚ್ 2024, 6:04 IST
Last Updated 15 ಮಾರ್ಚ್ 2024, 6:04 IST
ಅಕ್ಷರ ಗಾತ್ರ

ಯಾದಗಿರಿ: ಪರಿಶಿಷ್ಟ ಪಂಗಡಕ್ಕೆ ಮೀಸಲಾದ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಹಲವರು ಟಿಕೆಟ್‌ ಆಕಾಂಕ್ಷಿಗಳಿದ್ದು, ಯಾರಿಗೆ ಟಿಕೆಟ್‌ ಸಿಗಲಿದೆ ಎನ್ನುವುದು ಗುಟ್ಟಾಗಿ ಉಳಿದಿದೆ. ಎರಡು ಪಕ್ಷಗಳಿಂದ ಹಲವು ಆಕಾಂಕ್ಷಿಗಳು ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆಸಿದ್ದಾರೆ.

ಸುರಪುರ ಶಾಸಕರಾಗಿದ್ದ ದಿ.ರಾಜಾ ವೆಂಕಟಪ್ಪ ನಾಯಕ ಅವರ ಆಕಾಲಿಕ ನಿಧನದಿಂದ ಸುರಪುರದಿಂದ ಆಕಾಂಕ್ಷಿಗಳ ಪಟ್ಟಿ ಬದಲಾಗಿದೆ. ಮಾಜಿ ಸಚಿವ ರಾಜೂಗೌಡ ಅವರನ್ನು ಬಿಜೆಪಿ ಹುರಿಯಾಳು ಮಾಡಬೇಕು ಎಂದು ಪಕ್ಷದ ವಲಯದಲ್ಲಿ ಚರ್ಚೆ ನಡೆದಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಈಗ ಅವರು ವಿಧಾನಸಭೆಯ ಉಪಚುನಾವಣೆಯತ್ತ ಗಮನ ಹರಿಸಿರುವುದರಿಂದ ಲೋಕಸಭೆಯ ಟಿಕೆಟ್‌ ಆಕಾಂಕ್ಷಿಯಿಂದ ಹೊರ ಬಿದ್ದಂತೆ ಆಗಿದೆ.

ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ತಮಗೆ ಟಿಕೆಟ್‌ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಅದರಂತೆ ಮಾಜಿ ಸಂಸದ ಬಿ.ವಿ.ನಾಯಕ ಅವರು ತಾವು ಟಿಕೆಟ್‌ ಆಕಾಂಕ್ಷಿಯೆಂದು ಘೋಷಿಸಿಕೊಂಡಿದ್ದಾರೆ. ಅಲ್ಲದೇ ದೇವದುರ್ಗದ ಮಾಜಿ ಸಚಿವ ಕೆ.ಶಿವನಗೌಡ ನಾಯಕ, ರಾಯಚೂರು ಗ್ರಾಮಾಂತರ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಬಿಜೆಪಿಯಿಂದ ಟಿಕೆಟ್‌ ಬಯಸಿದ್ದಾರೆ.

ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿಗಳು: ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌, ಮುಖಂಡರಾದ ರವಿ ಪಾಟೀಲ, ಕುಮಾರ ನಾಯಕ, ರಾಯಪ್ಪ ನಾಯಕ, ದೇವಣ್ಣ ನಾಯಕ ಅಭ್ಯರ್ಥಿಗಳ ಪಟ್ಟಿಯ ಮುಂಚೂಣಿಯಲ್ಲಿದೆ. ಸುರಪುರ ಶಾಸಕರಾಗಿದ್ದ ದಿ. ರಾಜಾ ವೆಂಕಟಪ್ಪ ನಾಯಕರ ಪುತ್ರ ರಾಜಾ ಕುಮಾರ ನಾಯಕ ಅವರು ಲೋಕಸಭೆಗೆ ಟಿಕೆಟ್‌ ಕೇಳಿದ್ದಾರೆ. ಕಲಬುರಗಿ ಕ್ಷೇತ್ರಕ್ಕೆ ಬಿಜೆಪಿಯಿಂದ ಡಾ.ಉಮೇಶ ಜಾಧವ ಅಭ್ಯರ್ಥಿಯಿಂದ ಘೋಷಣೆಯಾಗಿದೆ. ಕಾಂಗ್ರೆಸ್‌ ಯಾರನ್ನು ಕಣಕ್ಕೆ ಇಳಿಸಲಿದೆ ಎನ್ನುವುದು ಗುಟ್ಟಾಗಿ ಉಳಿಸಿದೆ.

8 ಮತಕ್ಷೇತ್ರಗಳು: ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 5ರಲ್ಲಿ ಕಾಂಗ್ರೆಸ್, ಎರಡರಲ್ಲಿ ಬಿಜೆಪಿ ಮತ್ತು ದೇವದುರ್ಗ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಕಾಂಗ್ರೆಸ್‌ನ ವಶವಾಗಿದ್ದ ಸುರಪುರ ಕ್ಷೇತ್ರ ರಾಜಾ ವೆಂಕಟಪ್ಪನಾಯಕ ಅವರ ಸಾವಿನ ಹಿನ್ನೆಲೆಯಲ್ಲಿ ಸದ್ಯ ತೆರವಾಗಿದೆ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಹಾಪುರ (ಶರಣಬಸಪ್ಪ ದರ್ಶನಾಪುರ), ಯಾದಗಿರಿ ( ಚನ್ನಾರೆಡ್ಡಿ ಪಾಟೀಲ ತುನ್ನೂರು), ರಾಯಚೂರು ಗ್ರಾಮಾಂತರ( ಬಸನಗೌಡ ದದ್ದಲ್), ಮಾನ್ವಿ (ಜಿ.ಹಂಪಯ್ಯ ನಾಯಕ) ಕಾಂಗ್ರೆಸ್‌ ವಶದಲ್ಲಿವೆ. ರಾಯಚೂರು ನಗರ (ಡಾ. ಶಿವರಾಜ್ ಪಾಟೀಲ), ಲಿಂಗಸುಗೂರು (ಮಾನಪ್ಪ ವಜ್ಜಲ) ಬಿಜೆಪಿ ವಶದಲ್ಲಿವೆ. ದೇವದುರ್ಗದಲ್ಲಿ (ಕರೆಮ್ಮ ಜಿ.ನಾಯಕ) ಜೆಡಿಎಸ್‌ ಶಾಸಕರಿದ್ದಾರೆ.  ಇನ್ನೂ ಕಲಬುರಗಿಗೆ ಒಳಪಡುವ ಗುರುಮಠಕಲ್‌ ಕ್ಷೇತ್ರ ಜೆಡಿಎಸ್‌ ವಶದಲ್ಲಿದ್ದು, ಇಲ್ಲಿನ ಶಾಸಕ ಶರಣಗೌಡ ಕಂದಕೂರ ನಡೆ ಇನ್ನೂ ನಿಗೂಢವಾಗಿದೆ.

ಜಿಲ್ಲೆಯವರಿಗೆ ಟಿಕೆಟ್‌ ನೀಡಲು ಆಗ್ರಹ

2010ರಲ್ಲಿ ಕಲಬುರಗಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಯನ್ನು ಪ್ರತ್ಯೇಕಗೊಳಿಸಿ ಜಿಲ್ಲೆ ಮಾಡಲಾಗಿತ್ತು. ಅಂದಿನಿಂದಲೂ ಇಲ್ಲಿಯವರೆಗೂ ಯಾದಗಿರಿ ಜಿಲ್ಲೆಯಿಂದ ಯಾರಿಗೂ ರಾಯಚೂರು ಲೋಕಸಭೆಗೆ ಟಿಕೆಟ್‌ ನೀಡಿಲ್ಲ. ಅಲ್ಲದೇ ಜಿಲ್ಲೆಯಿಂದ ಯಾರನ್ನು ಗುರುತಿಸಿ ಟಿಕೆಟ್ ನೀಡಿಲ್ಲ. ಹೀಗಾಗಿ ಗಿರಿ ಜಿಲ್ಲೆಯು ಇನ್ನೂ ಅನೇಕ ಸಮಸ್ಯೆಗಳಿಂದ ನರಳುತ್ತಿದೆ. ಸದ್ಯ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮುಂಚೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ಟಿಕೆಟ್ ಹಂಚಿಕೆ ವೇಳೆ  ಯಾದಗಿರಿ ಜಿಲ್ಲೆಯವರಿಗೆ ಅವಕಾಶ ನೀಡಬೇಕು ಎಂದು ಜಿಲ್ಲೆಯ ಜನರ ಆಗ್ರಹವಾಗಿದೆ.

ಎರಡು ಕ್ಷೇತ್ರಗಳಿಗೆ ಹಂಚಿಹೋಗಿರುವ ಜಿಲ್ಲೆ

ಯಾದಗಿರಿ ಜಿಲ್ಲೆಯೂ ರಾಯಚೂರು ಮತ್ತು ಕಲಬುರಗಿ ಲೋಕಸಭೆ ಕ್ಷೇತ್ರಕ್ಕೆ ಹರಿದು ಹಂಚಿಹೋಗಿದೆ. ಯಾದಗಿರಿ ಶಹಾಪುರ ಸುರಪುರ ವಿಧಾನಸಭಾ ಕ್ಷೇತ್ರಗಳು ರಾಯಚೂರು ಕ್ಷೇತ್ರಕ್ಕೆ ಗುರುಮಠಕಲ್‌ ಮತಕ್ಷೇತ್ರ ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ಹಂಚಿಕೆಯಾಗಿದೆ. ಹೀಗಾಗಿ ಜಿಲ್ಲೆಯ ಪರವಾಗಿ ಗಟ್ಟಿಯಾಗಿ ಟಿಕೆಟ್‌ ಕೇಳಲು ಆಗುತ್ತಿಲ್ಲ. ಅಲ್ಲದೇ ಜಿಲ್ಲೆಯ ಸಮಸ್ಯೆಗಳನ್ನು ಪರಿಹರಿಸಲು ಒತ್ತಡ ಹಾಕುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಎರಡು ಬಾರಿಯೂ ಬಿಜೆಪಿಯಲ್ಲಿ ಘೋಷಣೆಯಿಲ್ಲ

ಲೋಕಸಭೆ ಚುನಾವಣೆಗೆ ಬಿಜೆಪಿ ಪಕ್ಷವೂ ಎರಡು ಬಾರಿ ಸ್ಪರ್ಧಾರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಯನ್ನು ಅಖೈರು ಮಾಡಿಲ್ಲ. ಇದರಿಂದ ಟಿಕೆಟ್‌ ಯಾರಿಗೆ ನೀಡಬೇಕು ಎನ್ನುವುದು ಕಗ್ಗಂಟಾಗಿ ಉಳಿದಿದೆ. ಆದರೆ ಕಾಂಗ್ರೆಸ್‌ ಪಕ್ಷದಿಂದ ಇನ್ನೂ ಪೂರ್ಣ ಪ್ರಮಾಣದಲ್ಲಿ ಪಟ್ಟಿ ಬಿಡುಗಡೆ ಮಾಡಿಲ್ಲ. ಹೀಗಾಗಿ ಯಾರಿಗೆ ಟಿಕೆಟ್‌ ಸಿಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ರಾಯಚೂರು ಕಲಬುರಗಿ ಲೋಕಸಭೆ ಕ್ಷೇತ್ರಕ್ಕೆ ಹಲವಾರು ಟಿಕೆಟ್‌ ಆಕಾಂಕ್ಷಿಗಳಿದ್ದು ಪಕ್ಷ ಯಾರಿಗೆ ಟಿಕೆಟ್‌ ನೀಡುತ್ತದೆ ಅದಕ್ಕೆ ಬದ್ಧರಾಗಿ ಕೆಲಸ ಮಾಡುತ್ತೇವೆ. ದಿ.ರಾಜಾ ವೆಂಕಟಪ್ಪ ನಾಯಕರು ಇದ್ದಿದ್ದರೆ ರಾಯಚೂರು ಕ್ಷೇತ್ರದ ಅಭ್ಯರ್ಥಿ ಆಗುತ್ತಿದ್ದರು.
–ಬಸರೆಡ್ಡಿ ಅನಪುರ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT