ವಡಗೇರಾ: ಹಣ್ಣುಗಳ ರಾಜ ‘ಮಾವಿನ ಹಣ್ಣಿ’ನ ಋತು ಆರಂಭವಾಗಿದ್ದು, ತರಹೇವಾರಿ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಆದರೆ ಸಾವಯವ ಮಾವಿನ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ.
ಇತ್ತೀಚಿನ ದಿನಗಳಲ್ಲಿ ಮಾವನ್ನು ಹಣ್ಣಾಗಿಸಲು ಹಲವು ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಇದು ಜನರ ಅನಾರೋಗ್ಯಕ್ಕೂ ಕಾರಣವಾಗುತ್ತಿದೆ. ಹೀಗಾಗಿ ಜನರು ಮಾರುಕಟ್ಟೆಯಲ್ಲಿ ಸಾವಯವ ಕೃಷಿಯಾಧಾರಿತವಾಗಿ ಬೆಳೆ ಮಾವಿನ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ.
ಸಾವಯವ ಮಾವಿಗಾಗಿ ದೂರದ ಮುಂಬೈ, ಹೈದರಾಬಾದ್, ಸಾಂಗಲಿ ಹಾಗೂ ಇನ್ನಿತರ ಭಾಗದಿಂದ ಖರೀದಿದಾರರು, ರೈತರ ಜಮೀನುಗಳಿಗೆ ಭೇಟಿ ನೀಡಿ, ಸಾವಯವ ಮಾವನ್ನು ಖರೀದಿಸುತ್ತಿದ್ದಾರೆ. ದಸರೆ, ರಸಪೂರಿ, ಬೇನಿಸನ್ ಹಾಗೂ ಮಲ್ಲಿಕಾ ತಳಿಗಳ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಕೆ.ಜಿ.ಗೆ ₹100ರಂತೆ ಮಾರಾಟವಾಗುತ್ತಿವೆ.
ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ, ಪ್ರಸಕ್ತ ವರ್ಷ ಮಾವಿನ ಹಣ್ಣಿನ ಇಳುವರಿಯಲ್ಲಿ ಬಹಳ ಇಳಿಕೆಯಾಗಿದೆ. ಬರಗಾಲ, ಭೂಮಿಯಲ್ಲಿ ಅಂತರ್ಜಲದ ಕೊರತೆ ತೇವಾಂಶವಿಲ್ಲದಿರುವುದು ಹಾಗೂ ಮಳೆ ಕೊರತೆಯಿಂದಾಗಿ ಗಿಡದಲ್ಲಿ ಹೆಚ್ಚು ಹೂ ಬಿಡದಿರುವುದರಿಂದ ಇಳುವರಿ ಕಡಿಮೆಯಾಗಿದೆ. ಜತೆಗೆ ಈಗ ಆರಂಭವಾಗಿರುವ ಬಿರುಗಾಳಿ ಮಳೆಯಿಂದಾಗಿಯೂ ಇಳುವರಿಗೆ ಹೊಡೆತ ಬೀಳುತ್ತಿದೆ ಎಂದು ಮಾವು ಬೆಳದ ರೈತರು ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ಸಾವಯವ ಮಾವಿಗೆ ಬೇಡಿಕೆ ಹೆಚ್ಚಿದೆ. ತಾಲ್ಲೂಕಿನ ಬಿಳ್ಹಾರ ಗ್ರಾಮದ ಮಲ್ಲಿಕಾರ್ಜನಗೌಡ ಅವರ ಸಾವಯವ ಮಾವಿನ ಹಣ್ಣು ಬೆಳೆದಿದ್ದು, ವ್ಯಾಪಾರಸ್ಥರು ಖುದ್ದು ಅವರ ಜಮೀನಿಗೆ ಭೇಟಿ ನೀಡಿ, ಮಾವು ಖರೀದಿಸುತ್ತಿದ್ದಾರೆ.
ಕೇವಲ; ಮೂರು ವರ್ಷದಲ್ಲಿ ಮಾವಿನ ಬೆಳೆ ಬರುತ್ತದೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬೇಕಾದರೆ, ಮಾವಿನ ಬೆಳೆಯನ್ನು ಬೆಳೆಯಬೇಕು. ಇದಕ್ಕೆ ಸರ್ಕಾರದಿಂದ ರಿಯಾಯತಿ ಸಿಗುತ್ತದೆ. ಸಾವಯವ ಗೊಬ್ಬರವನ್ನು ಉಪಯೋಗಿಸಿದಾಗ ಜಮೀನಿನ ಫಲವತ್ತತೆ ಉಳಿಯುತ್ತದೆ. ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದ
ಮಲ್ಲಿಕಾರ್ಜುನಗೌಡ ಬಿಳ್ಹಾರ, ಮಾವು ಬೆಳೆಗಾರ
ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಈ ವರ್ಷಮಾವಿನ ಹಣ್ಣಿನ ಬೆಲೆ ಕಡಿಮೆಯಿದೆ. ಆದರೂ ಸಹ ವ್ಯಾಪಾರ ಬಹಳ ಕಡಿಮೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ಚೆನ್ನಾಗಿ ವ್ಯಾಪಾರವಾಗುವ ಸಾಧ್ಯತೆಯಿದೆ
ರಾಮಣ್ಣ, ಹಣ್ಣಿನ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.