ಸೈದಾಪುರ: ಪಟ್ಟಣದ ವಿದ್ಯಾ ವರ್ಧಕ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಗುಬ್ಬಚ್ಚಿ ಸಂತತಿ ಉಳಿವಿಗಾಗಿ ಜನಜಾಗೃತಿ ಜಾಥಾ ಅಭಿಯಾನ ಕೈಗೊಂಡರು. ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಂಚಾರ ಮಾಡಿ ವಿವಿಧ ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಮೂಡಿಸಿದರು.
ಅಭಿಯಾನದ ನೇತೃತ್ವ ವಹಿಸಿದ 10ನೇ ತರಗತಿ ವಿದ್ಯಾರ್ಥಿನಿ ಕಾವೇರಿ ಮಾತನಾಡಿ, ‘ಗುಬ್ಬಚ್ಚಿಗಳು ಮತ್ತು ಇತರ ಪಕ್ಷಿಗಳ ಅವಾಸಾನದ ಅಂಚಿನಲ್ಲಿವೆ. ಇದಕ್ಕೆ ಗ್ರಾಮ ಮತ್ತು ನಗರಗಳಲ್ಲಿ ಮರಗಳ ಕಡಿತ ಪ್ರಮುಖ ಕಾರಣವಾಗಿದೆ. ನಗರಗಳಲ್ಲಿ ಗಾಜಿನ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಆರ್.ಸಿ.ಸಿ ಮನೆಗಳನ್ನು ಕಟ್ಟುವುದರಿಂದ ಗುಬ್ಬಿಗಳಿಗೆ ಗೂಡು ಕಟ್ಟಲು ಆಗುತ್ತಿಲ್ಲ’ ಎಂದರು.
‘ಭತ್ತ, ರಾಗಿ, ಜೋಳ ಇತ್ಯಾದಿ ಧಾನ್ಯಗಳಿಗೆ ಅತ್ಯಂತ ಹೆಚ್ಚಿನ ಪ್ರಮಾಣದ ರಾಸಾಯನಿಕ ಗೊಬ್ಬರ ಮತ್ತು ಕ್ರೀಟನಾಶಕಗಳನ್ನು ಬಳಸುವುದರಿಂದ ಇಂತಹ ಧಾನ್ಯಗಳನ್ನು ಸೇವಿಸುವ ಗುಬ್ಬಚ್ಚಿಗಳ ಸಂತತಿ ಕಡಿಮೆಯಾಗುತ್ತಿದೆ. ಮೊಬೈಲ್ ಫೋನ್, ಟವರ್ಗಳಿಂದ ಉಂಟಾಗುವ ಹೆಚ್ಚಿನ ಮಟ್ಟದ ಮೈಕ್ರೊವೇವ್ ಮಾಲಿನ್ಯವು ಗುಬ್ಬಚ್ಚಿಗಳ ಅವನತಿಗೆ ಪ್ರಮುಖ ಕಾರಣವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಗುಬ್ಬಚ್ಚಿಗಳ ಉಳಿವು ಎಲ್ಲರ ಜವಾಬ್ದಾರಿಯಾಗಬೇಕು. ಈ ದಿಸೆಯಲ್ಲಿ ಉತ್ತಮ ಪರಿಸರವನ್ನು ನಾವು ಕಾಪಾಡಿಕೊಳ್ಳಬೇಕಾಗಿದೆ’ ಎಂದರು.
ಮುಖ್ಯಗುರು ಲಿಂಗಾರೆಡ್ಡಿ ನಾಯಕ, ವಿಜ್ಞಾನ ಶಿಕ್ಷಕ ರಾಚಯ್ಯ ಸ್ವಾಮಿ ಬಾಡಿಯಾಲ, ಕಾಶಿನಾಥ ಶೇಖಸಿಂದಿ, ವಿಶ್ವನಾಥರೆಡ್ಡಿ ಪಾಟೀಲ ಕಣೇಕಲ್, ಸಂಗಾರೆಡ್ಡಿ, ರಾಚಪ್ಪ, ಮೋಹನ ಪಾಲ್ಗೊಂಡಿದ್ದರು.