ಹುಣಸಗಿ: ತಾಲ್ಲೂಕಿನಲ್ಲಿ ಗುರುವಾರ ಮತ್ತು ಶುಕ್ರವಾರ ಸುರಿದ ತುಂತುರು ಮಳೆಯು ಬೆಳೆಗಳಿಗೆ ಅನುಕೂಲವಾಗಿದೆ. ಮಳೆಯಾಶ್ರಿತ ಜಮೀನುಗಳಲ್ಲಿ ಬಿತ್ತಿದ ಹತ್ತಿ, ತೊಗರಿ ಹಾಗೂ ಸಜ್ಜೆ ಬೆಳೆಗಳಿಗೆ ಜೀವಕಳೆ ಬಂದಂತಾಗಿದೆ.
‘ಗುರುವಾರ ಬೆಂಬಿಡದೇ ಸುರಿದ ಮಳೆಯಿಂದ ಹೊಲದಲ್ಲಿ ನೀರು ಹರಿದಾಡದಿದ್ದರೂ ತೇವಾಂಶ ಮಾತ್ರ ಹೆಚ್ಚಾಗಿದೆ’ ಎಂದು ಮಂಜಲಾಪುರಹಳ್ಳಿ ಗ್ರಾಮದ ರೈತ ಪರಮೇಶ್ವರಪ್ಪ ಮೇಟಿ ಹೇಳಿದರು.
‘ಕಳೆದ ಇಪ್ಪತ್ತು ದಿನಗಳ ಹಿಂದೆ ಜಮೀನಿನಲ್ಲಿ ಹತ್ತಿ ಊರಲಾಗಿದ್ದು, ಸದ್ಯ ಬೆಳೆ ಚೆನ್ನಾಗಿದೆ. ನೀರಿನ ಕೊರತೆಯಿಂದಾಗಿ ಬೆಳೆ ಒಣಗುವ ಹಂತದಲ್ಲಿತ್ತು. ಆದರೆ ಈ ತುಂತುರು ಮಳೆ ಆಸರೆಯಾಗಿದ್ದು, ಹೊಲದಲ್ಲಿನ ಬೆಳೆಗಳು ಹುಲುಸಾಗಿ ಬೆಳೆಯುವ ಎಲ್ಲ ಲಕ್ಷಣಗಳಿವೆ’ ಎಂದು ಮಂಜಲಾಪುರಹಳ್ಳಿ ಗ್ರಾಮದ ಗುಡದಪ್ಪ ಕಕ್ಕೇರಿ, ದ್ಯಾಮವ್ವ ಮೇಟಿ, ಬಸಣ್ಣ, ಮಾನಯ್ಯ ಬಿರಾದಾರ ಹೇಳಿದರು.
‘ಇನ್ನೂ ಮಳೆ ಬರಬಹುದು ಎಂಬ ನಿರೀಕ್ಷೆಯಿಂದಾಗಿ ಒಣ ಹೊಲದಲ್ಲಿಯೇ ತೊಗರಿ ಬಿತ್ತನೆ ಮಾಡಲಾಗಿತ್ತು. ಬಿತ್ತಿದ ಮೂರು–ನಾಲ್ಕು ವಾರಗಳು ಗತಿಸಿದ್ದರೂ ಒಮ್ಮೆಯೂ ಮಳೆಯಾಗಿರಲಿಲ್ಲ. ಆದರೆ ಈ ಪುನರ್ವಸು ಮಳೆ ನಮಗೆ ವರದಾನವಾಗಿದ್ದು, ಅಲ್ಪ ಮಳೆಯಾದರೂ ಅದು ಹೆಚ್ಚು ಸಹಕಾರಿಯಾಗಿದೆ’ ಎಂದು ಶ್ರೀನಿವಾಸಪುರ ಗ್ರಾಮದ ರೈತರಾದ ಭೀಮರಾಯ ದೊಡ್ಡಮನಿ, ಹಣಮಂತ್ರಾಯ ಪೂಜಾರಿ ಕನಗಂಡನಹಳ್ಳಿ ಹಾಗೂ ಚಂದ್ರಶೇಖರ ಗಡದ ಹೇಳಿದರು.
ಶುಕ್ರವಾರ ಸಂಜೆ ಕೂಡ ಹುಣಸಗಿ ಪಟ್ಟಣ ಸೇರಿದಂತೆ ಇತರ ಗ್ರಾಮಗಳಲ್ಲಿ ತುಂತುರು ಮಳೆಯಾಗಿದೆ. ಬಹುತೇಕ ಜನರು ಕೊಡೆ ಹಿಡಿದುಕೊಂಡು ನಿತ್ಯದ ಕೆಲಸ ಕಾರ್ಯಗಳಿಗೆ ಓಡಾಡುತ್ತಿರುವುದು ಕಂಡುಬಂತು. ಮಳೆ ಹಿನ್ನೆಯಲ್ಲಿ ತಾಲ್ಲೂಕಿನ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.