ಸೈದಾಪುರ: ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ನಡೆದಿದ್ದ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಆರೋಪಿಯಿಂದ ₹1.10 ಲಕ್ಷ ನಗದು ಜಪ್ತಿ ಮಾಡಿದ್ದಾರೆ.
ಏನಿದು ಪ್ರಕರಣ?: ಗ್ರಾಮದ ರೈತ ಮಲ್ಲಿಕಾರ್ಜುನ ದಾನವೋರ ಅವರು ಜಮೀನಿನಲ್ಲಿ ಬೆಳೆದ ಹತ್ತಿ ಮಾರಾಟ ಮಾಡಿದ್ದರು. ಅದರಿಂದ ಬಂದ ₹1.10 ಲಕ್ಷವನ್ನು ಮನೆಯ ಪೆಟ್ಟಿಗೆಯಲ್ಲಿಟ್ಟಿದ್ದರು. ಡಿ.27 ರಿಂದ ಜ.1ರ ಅವಧಿಯಲ್ಲಿ ಆ ಹಣ ಕಳವು ಮಾಡಲಾಗಿತ್ತು.
ಹಣ ಪತ್ತೆ ಮಾಡಿಕೊಡಬೇಕು ಮತ್ತು ಕಳವು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮಲ್ಲಿಕಾರ್ಜುನ ಅವರು ಗುರುವಾರ (ಜ.4) ಇಲ್ಲಿನ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.
ಜ.4 ರಂದು ತಿಮ್ಮಪ್ಪ ಲೋಹಿತ್ಕುಮಾರ ಅಂಗಡಿ (19) ಎನ್ನುವಾತನನ್ನು ವಿಚಾರಣೆಗೊಳಪಡಿಸಿದಾಗ ಹಣ ಕಳವು ಮಾಡಿದ ಕುರಿತು ತಿಳಿಸಿದ್ದಾನೆ. ನಂತರ ಆರೋಪಿಯ ಮನೆಗೆ ತೆರಳಿ ಹಣ ಜಪ್ತಿ ಮಾಡಿಕೊಂಡಿದ್ದಾರೆ.
ಡಿಎಸ್ಪಿ ಅವರ ಮಾರ್ಗದರ್ಶನದಲ್ಲಿ ಮತ್ತು ಸೈದಾಪುರ ಠಾಣೆಯ ಪಿಐ ವಿನಾಯಕ ಅವರ ನೇತೃತ್ವದಲ್ಲಿ ಪಿಎಸ್ಐ ಅಲ್ಲಾಭಕ್ಷ, ರಾಮುಲು, ಎಎಸ್ಐ ಭೀಮರೆಡ್ಡಿ, ಎಚ್ಸಿ ಮೋಹನರೆಡ್ಡಿ, ಬಸಪ್ಪ ಕುಂಬಾರ, ತಿಪ್ಪಣ್ಣ, ಸಾಬರೆಡ್ಡಿ, ಮಪಿಸಿ ಅನ್ನಪೂರ್ಣ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.