ಪಸಪೂಲ (ಸೈದಾಪುರ): ‘ವಿವಿಧ ಚಟುವಟಿಕೆಗಳ ಮೂಲಕ ದಾಖಲಾತಿ ಹಾಗೂ ಹಾಜರಾತಿ ಹೆಚ್ಚಳಕ್ಕೆ ಪ್ರಜಾಯತ್ನ ಸಂಸ್ಥೆ ಪ್ರಯತ್ನಿಸುತ್ತಿದೆ’ ಎಂದು ಮುಖ್ಯಶಿಕ್ಷಕ ಮಾರುತಿ ಅಭಿಪ್ರಾಯಪಟ್ಟರು.
ಸಮೀಪದ ಪಸಪೂಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ್ರಜಾಯತ್ನ ಸಂಸ್ಥೆಯ ಸಹಯೋಗದಲ್ಲಿ ನಡೆದ ವಿಶೇಷ ದಾಖಲಾತಿ ಆಂದೋಲನದಲ್ಲಿ ಮಾತನಾಡಿದರು.
ಈ ಶೈಕ್ಷಣಿಕ ವರ್ಷ ಕಲಿಕಾ ಚೇತರಿಕೆ ವರ್ಷವಾಗಿದೆ. ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಬೋಧನೆ ಮಾಡಬೇಕು. ಕಾಲಮಿತಿಯೊಳಗೆ ಮಕ್ಕಳು ಕಲಿಯುವಂತೆ ನೋಡಿಕೊಳ್ಳಬೇಕು. ಇದಕ್ಕೆ ಪ್ರಜಾಯತ್ನ ಸಂಸ್ಥೆ ಸಹಕರಿಸುತ್ತಿದೆ. ಮಕ್ಕಳಿಗೆ ಕಲಿಕೋಪಕರಣ ಹಾಗೂ ಪಾಠೋಪಕರಣ ಒದಗಿಸುವುದರ ಜತೆಗೆ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ಇದೇ ವೇಳೆ ಕಲ್ಪನಾ ಕಾಶಪ್ಪ ಮತ್ತು ಹಣಮಂತಿ ಮಲ್ಲಿಕಾರ್ಜುನ ಎನ್ನುವ ಮಕ್ಕಳನ್ನು 1ನೇ ತರಗತಿಗೆ ದಾಖಲು ಮಾಡಿಕೊಳ್ಳಲಾಯಿತು.
ಪ್ರಜಾಯತ್ನ ಸಂಸ್ಥೆಯ ತಾಲ್ಲೂಕು ಸಂಯೋಜಕ ರುದ್ರಸ್ವಾಮಿ ಚಿಕ್ಕಮಠ ಪರಸನಹಳ್ಳಿ, ಶಿಕ್ಷಕರಾದ ಹೇಮಾಗಿರಿಧರ, ಪ್ರತಿಭಾ, ಪೋಷಕರು, ಶಿಕ್ಷಣ ಪ್ರೇಮಿಗಳು, ಶಿಕ್ಷಕರು ಹಾಗೂ ಮಕ್ಕಳು ಇದ್ದರು.