ಗುರುಮಠಕಲ್: ತಾಲ್ಲೂಕಿನ ನಜರಾಪುರ ಗ್ರಾಮದ ಹೊರವಲಯದ ದಬ್ ದಬಿ ಜಲಪಾತ ವೀಕ್ಷಣೆಗೆ ಶನಿವಾರ ತೆರಳಿದ್ದ ಐವರಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.
ಹೈದರಾಬಾದ್ ಮೂಲದ ಅಬ್ದುಲ್ ರಹೀಂ (22) ಹಾಗೂ ಅದ್ನಾನ್ (16) ಮೃತಪಟ್ಟಿದ್ದು, ಇಬ್ರಾಹಿಂ ಸ್ಥಿತಿ ಗಂಭೀರವಾಗಿದೆ.
ಪಟ್ಟಣದಲ್ಲಿನ ಸಂಬಂಧಿಕರ ಮದುವೆಗೆ ಬಂದಿದ್ದ ಹೈದರಾಬಾದ್ ಮೂಲದ ಅಬೀಬ್ ಅಲಿ, ಅಬೀಬ್ ಅಬ್ದುಲ್ ಖಾದರ್, ಅಬ್ದುಲ್ ರಹೀಮ್, ಅದ್ನಾನ್ ಮತ್ತು ಇಬ್ರಾಹಿಂ ಅವರು ಮದುವೆಯ ನಂತರ ಜಲಪಾತ ವೀಕ್ಷಣೆಗೆ ಹೋಗಿದ್ದರು.
ಅದ್ನಾನ್ ಜಲಪಾತದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ರಕ್ಷಿಸಲು ತೆರಳಿದ ಅಬ್ದುಲ್ ರಹೀಂ ಹಾಗೂ ಇಬ್ರಾಹಿಂ ಪೈಕಿ ಅಬ್ದುಲ್ ರಹೀಂ ಕೂಡ ಮೃತಪಟ್ಟಿದ್ದಾರೆ. ಇಬ್ರಾಹಿಂ ಅವರನ್ನು ಸ್ಥಳದಲ್ಲಿದ್ದವರು ರಕ್ಷಿಸಿದ್ದು, ಚಿಕಿತ್ಸೆಗಾಗಿ ಹೈದರಾಬಾದ್ ನಗರಕ್ಕೆ ಕಳುಹಿಸಲಾಗಿದೆ.
ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ತಿಂಗಳು ರಾಜಸ್ಥಾನ ಮೂಲದ ಯುವಕ ಇದೇ ಜಲಪಾತದಲ್ಲಿ ಮೃತಪಟ್ಟ ಘಟನೆ ನಡೆದಿತ್ತು. ಜಲಪಾತದ ಬಳಿ ಪದೇ ಪದೇ ಇಂತಹ ಅಹಿತಕರ ಘಟನೆಗಳು ನಡೆಯುತ್ತಿವೆ. ಇವುಗಳನ್ನು ತಡೆಯಲು ‘ಈಗಲಾದರೂ ಜಲಪಾತದ ಹತ್ತಿರ ಸೂಚನಾ ಫಲಕ ಅಳವಡಿಸಿ, ತಡೆಗೋಡೆ ನಿರ್ಮಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.