ಯಾದಗಿರಿ: ಕಳೆದ 40 ದಿನಗಳಿಂದ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮನೆಯಲ್ಲಿ ಉಳಿದಿದ್ದ ಜಿಲ್ಲೆಯ ಜನತೆಗೆ ಈಗ ಲಾಕ್ಡೌನ್ ಸಡಿಲಿಕೆ ಆಗಿದ್ದರಿಂದ ಮನೆಯಿಂದ ಹೊರ ಬರುತ್ತಿದ್ದು, ಬಿಸಿಲಿನಿಂದ ಬಸವಳಿಯುವಂತೆ ಆಗಿದೆ.
ಒಂದು ವಾರದಿಂದ ಜಿಲ್ಲೆಯ ತಾಪಮಾನ 40ರಿಂದ 42 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಬೆಳಿಗ್ಗೆ 8 ಗಂಟೆಯಿಂದಲೇ ಬಿಸಿಲಿನ ಜಳ ಅನುಭವಕ್ಕೆ ಬರುತ್ತಿದೆ. ಸಂಜೆ 6 ಗಂಟೆಯಾದರೂ ಬಿಸಿಯಾದ ವಾತಾವರಣ ಇರುತ್ತದೆ.
ಕಳೆದ ತಿಂಗಳು ಎರಡು ವಾರದಲ್ಲಿ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಮಳೆ ಬಂದಿದ್ದು, ಬೆಳೆ ನಾಶ ಮಾಡಿತ್ತು. ಆದರೆ, ತಂಪಿನ ಅನುಭವ ನೀಡಿತ್ತು. ಬರುಬರುತ್ತಾ ಬಿಸಿಲಿನ ತಾಪ ಹೆಚ್ಚಳವಾಗುತ್ತಿದೆ.
ಕೊರೊನಾ ನೆಪದಲ್ಲಿ ಮನೆಯಲ್ಲಿ ಉಳಿದ್ದ ಜನರಿಗೆ ತಾಪಮಾನ ಏರಿಕೆ ಅಷ್ಟೊಂದು ತಟ್ಟಿರಲಿಲ್ಲ. ಈಗ ವಿವಿಧ ಕೆಲಸ ಕಾರ್ಯಗಳು ಆರಂಭವಾಗಿದ್ದು, ಎಲ್ಲ ವಿಧಧ ಅಂಗಡಿ, ಕಚೇರಿಗಳು ಆರಂಭವಾಗಿದೆ. ಹೀಗಾಗಿ ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತ ಸ್ಥಿತಿ ಬಂದಿದೆ.
ಗಿರಿಜಿಲ್ಲೆ ಮೊದಲೇ ಬಿಸಿಲ ನಾಡು. ಒಂದು ತಿಂಗಳು ಹೇಗೆ ತಪ್ಪಿಕೊಂಡಿದ್ದು, ಇನ್ನು ಒಂದೂವರೆ ತಿಂಗಳು ಬಿಸಿಲಿಗೆ ಮೈಯೊಡ್ಡಬೇಕಿದೆ. ಲಾಕ್ಡೌನ್ ನಿಂದ ವಾಹನಗಳ ಓಡಾಟ ಕಡಿಮೆಯಾಗಿತ್ತು. ಈಗ ಸಾರಿಗೆ ಬಸ್ಗಳು ಓಡಾಟ ಆರಂಭಿಸಿವೆ. ಹೀಗಾಗಿ ತಾಪಮಾನ ಹೆಚ್ಚಳ ಕಂಡಿದೆ.
ಎಳೆನೀರಿಗೆ ಬೇಡಿಕೆ
ಬೇಸಿಗೆ ಆರಂಭದಲ್ಲಿ ₹25ರಿಂದ 30ಕ್ಕೆ ಸಿಗುತ್ತಿದ್ದ ಎಳೆನೀರು ಈಗ ₹35ರಿಂದ 40 ರೂಪಾಯಿಗೆ ಮಾರಾಟವಾಗುತ್ತಿವೆ. ಬಿಸಿಲಿನ ತಾಪ ಹೆಚ್ಚಳವಾಗಿದ್ದರಿಂದ ಬೇಡಿಕೆ ಹೆಚ್ಚಳವಾಗಿದೆಎನ್ನುತ್ತಾರೆ ಎಳೆನೀರು ವ್ಯಾಪಾರಿ ಮಂಜುನಾಥ ರಾಮಯ್ಯನೊರ.
ಈ ಬಾರಿ ಸರ್ಕಾರಿ ನೌಕರರಿಗಿಲ್ಲ ರಿಯಾಯ್ತಿ
ಪ್ರತಿ ವರ್ಷ ಕಲ್ಯಾಣ ಕರ್ನಾಟಕದಲ್ಲಿ ಬೇಸಿಗೆ ವೇಳೆ ಸರ್ಕಾರಿ ಕಚೇರಿಗಳಲ್ಲಿ ಸಯಮ ಬದಲಾವಣೆ ಆಗುತ್ತಿತ್ತು. ಆದರೆ, ಈ ಬಾರಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಅವಧಿ ಬದಲಾವಣೆ ಆಗಿಲ್ಲ. ಪ್ರತಿವರ್ಷ ಏಪ್ರಿಲ್, ಮೇ ತಿಂಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ ವರೆಗೆ ಮಾತ್ರ ಕಚೇರಿ ಕೆಲಸ ಇರುತ್ತಿತ್ತು. ಬೆಳಿಗ್ಗೆ 8ರಿಂದ 2 ಗಂಟೆಯೊಳಗೆ ಸರ್ಕಾರಿ ಕಚೇರಿಗಳು ಬೀಗ ಹಾಕಲಾಗುತ್ತಿತ್ತು. ಈಗ ಸಯಮ ಬದಲಾವಣೆ ಇಲ್ಲದಿದ್ದರಿಂದ ನೌಕರರು ಬೇಸಿಗೆ ಬಿಸಿಲಿಗೆ ತತ್ತರಿಸಿದ್ದಾರೆ.
‘ಕೊರೊನಾ ನೆಪದಿಂದ ಬಿಸಿಲಿಗೆ ಹೋಗುವುದು ತಪ್ಪಿತ್ತು. ಆದರೆ, ಲಾಕ್ಡೌನ್ ಸಡಿಲಿಕೆ ಮಾಡಿದ್ದರಿಂದ ಅನಿವಾರ್ಯವಾಗಿ ಹೊರಗಡೆ ತಿರುಗಾಡಬೇಕಾಗಿದೆ. ಮಧ್ಯಾಹ್ನ ವೇಳೆ ಬಿಸಿಲಿಗೆ ಮೈ ಸುಡುತ್ತಿದೆ ಎನ್ನುವ ಅನುಭವ ಆಗುತ್ತಿದೆ. ಇಷ್ಟು ದಿನ ಮನೆಯಲ್ಲಿ ಇದ್ದಿದ್ದರಿಂದ ಒಂದು ರೀತಿಯ ಒಳ್ಳೆಯ ವಾತಾವರಣ ಸೃಷ್ಟಿಯಾಗಿತ್ತು’ ಎಂದು ಖಾಸಗಿ ಉದ್ಯೋಗಿ ಸುಧಾರಕ ರೆಡ್ಡಿ ಹೇಳುತ್ತಾರೆ.
***
ತಾಟಿನಿಂಗು ದೇಹಕ್ಕೆ ತಂಪು ನೀಡುವುದರಿಂದ ಹೆಚ್ಚಿನ ಜನರು ಖರೀದಿ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ತಾಟಿನಿಂಗು ಸಿಗುವುದಿಲ್ಲ. ಹೀಗಾಗಿ ನೆರೆ ಜಿಲ್ಲೆಗಳಿಂದ ತರಲಾಗುತ್ತಿದೆ
-ಮಹಮ್ಮದ್ ಮೈನುದ್ದೀನ್, ತಾಟಿನಿಂಗು ವ್ಯಾಪಾರಿ
***
ಬಿಸಿಲು ದಿನೇ ದಿನೇ ಹೆಚ್ಚುತ್ತಿದ್ದು, ನಗರಸಭೆ ವತಿಯಿಂದ ಪ್ರತಿದಿನ ಟ್ಯಾಂಕರ್ ಮೂಲಕ ರಸ್ತೆಗೆ ನೀರು ಸಿಂಪರಣೆ ಮಾಡಬೇಕು. ಇದರಿಂದ ಧೂಳು ಏಳುವುದು ನಿಲ್ಲುವುದರ ಜೊತೆಗೆ ಬಿಸಿಲಿನ ತಾಪಮಾನ ನಿಯಂತ್ರಣಕ್ಕೆ ಬರಲಿದೆ
-ಭೀಮುನಾಯಕ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.