ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಣ್ಣೆತ್ತಿನ ಅಮಾವಾಸ್ಯೆಗೆ ರೈತರು ಸಜ್ಜಾಗಿದ್ದು, ನಗರದ ಮೆಥೋಡಿಸ್ಟ್ ಚರ್ಚ್, ಹಳೆ ಜಿಲ್ಲಾಸ್ಪತ್ರೆ ರಸ್ತೆ ಬಳಿ ಪಿಒಪಿ ಮತ್ತು ಮಣ್ಣಿನಲ್ಲಿ ತಯಾರಿಸಿದ ಎತ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಎತ್ತುಗಳನ್ನು ಬಸವಣ್ಣನ ರೂಪ ಎಂದೇ ಪೂಜಿಸುತ್ತಾರೆ. ಮಳೆ, ಬೆಳೆ ಸಮೃದ್ಧಿಯಾಗಲಿ, ಉತ್ತು ಬಿತ್ತನೆಗೆ ಎತ್ತುಗಳಿಗೆ ಶಕ್ತಿ ನೀಡಲಿ ಎಂದು ಮಣ್ಣೆತ್ತಿನ ಅಮಾವಾಸ್ಯೆಯಂದು ಪೂಜಿಸಲಾಗುತ್ತದೆ. ಆದರೆ, ಕಾಲ ಬದಲಾದಂತೆ ಮಣ್ಣಿನ ಬದಲಾಗಿ (ಪಿಒಪಿ) ಅಲಂಕಾರಿಕ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಆಧುನಿಕತೆಯ ಪರಿಣಾಮ ಗ್ರಾಮೀಣ ಭಾಗದ ಹಬ್ಬಗಳು ಸೊರಗಿವೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಆಶಾದಾಯಕವಾಗಿಲ್ಲ. ಆದರೂ ರೈತಾಪಿ ವರ್ಗ ಮಣ್ಣೆತ್ತು ಪೂಜಿಸುವ ಮೂಲಕ ಮಳೆ ಬರಲಿ ಎಂದು ಪ್ರಾರ್ಥಿಸಲು ತಯಾರಿ ನಡೆಸಿದ್ದಾರೆ.
ನಗರದ ಚರ್ಚ್ ಮುಂಭಾಗದ ರಸ್ತೆ ಬಳಿ ಮಣ್ಣೆತ್ತಿನ ಅಮಾವಾಸ್ಯೆಗಾಗಿ ಮಣ್ಣಿನ ಎತ್ತುಗಳು, ಪಿಒಪಿ ಎತ್ತುಗಳು ಮಾರಾಟಕ್ಕೆ ಇಡಲಾಗಿದೆ. ವಿವಿಧ ಬಣ್ಣಗಳಿಂದ ಪಿಒಪಿ ಎತ್ತುಗಳನ್ನು ಸಿಂಗರಿಸಲಾಗಿದ್ದು, ಆಕರ್ಷಕವಾಗಿದೆ. ಇದರಿಂದ ಗ್ರಾಹಕರು ಇವುಗಳಿಗೆ ಮೊರೆ ಹೋಗುತ್ತಿದ್ದಾರೆ.
ಮಣ್ಣೆತ್ತಿನ ಅಮಾವಾಸ್ಯೆಗೆ ಮಣ್ಣೆತ್ತುಗಳ ಬದಲಿಗೆ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಎತ್ತುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮಹಾರಾಷ್ಟ್ರದ ಲಾತೂರ್, ಸೊಲ್ಲಾಪುರ, ಅಕ್ಕಲಕೋಟದಿಂದ ಪಿಒಪಿ ಎತ್ತುಗಳನ್ನು ಆಮದು ಮಾಡಿಕೊಳ್ಳಲಾಗಿದೆ.
₹30ರಿಂದ ₹500ರವರೆಗೆ ಎತ್ತುಗಳ ದರ: ಮಣ್ಣಿನ ಎತ್ತುಗಳಿಗೆ ಬೆಲೆ ಕಡಿಮೆ ಇದ್ದು, ಪಿಒಪಿ ಮೂರ್ತಿಗಳಿಗೆ ದರ ಅಧಿಕವಿದೆ. ಮಣ್ಣಿನ ಜೋಡಿ ಎತ್ತುಗಳ ದರ ₹50ರಿಂದ ಆರಂಭವಾಗಿ ₹300 ತನಕ ಬೆಲೆ ಇದ್ದರೆ, ಪಿಒಪಿ ಜೋಡಿ ಎತ್ತುಗಳು ₹30ರಿಂದ ₹500 ರ ತನಕ ಬೆಲೆ ಇವೆ.
‘ಪೂಜೆ ಮಾಡುವವರು ಮಣ್ಣೆತ್ತುಗಳನ್ನು ಖರೀದಿಸುತ್ತಾರೆ. ಕೆಲವರು ಅಲಂಕಾರಕ್ಕಾಗಿ ಪಿಒಪಿ ಎತ್ತುಗಳನ್ನು ಖರೀದಿಸುತ್ತಾರೆ. ಚೌಕಾಶಿ ಮಾಡಿ ಖರೀದಿ ಮಾಡುತ್ತಿದ್ದಾರೆ. ಮುದ್ನಾಳ ಕೆರೆಯಿಂದ ಜೇಡಿ ಮಣ್ಣು ತಂದು ಎತ್ತುಗಳನ್ನು ತಯಾರಿಸುತ್ತೇವೆ. 9 ಕುಂಬಾರ ಕುಟುಂಬಗಳಿದ್ದು, ಕುಂಬಾರಿಕೆಯಲ್ಲಿ ತೊಡಗಿಸಿ ಕೊಂಡಿದ್ದೇವೆ ಎಂದು ವ್ಯಾಪಾರಿ ವಿಶ್ವನಾಥ ಕುಂಬಾರ ಹೇಳುತ್ತಾರೆ.
ಹಳ್ಳಿಗಳಲ್ಲಿ ಹಬ್ಬ ಜೋರು: ಆಧುನಿಕತೆಯ ಪರಿಣಾಮ ಗ್ರಾಮೀಣ ಭಾಗದ ಹಬ್ಬಗಳು ಸೊರಗಿವೆ. ಮಣ್ಣೆತ್ತಿನ ಖರೀದಿಯೂ ಕಡಿಮೆಯಾಗಿದೆ. ಪಿಒಪಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಸಂಭ್ರಮದಿಂದ ಮಾಡಲಾಗುತ್ತಿದೆ. ಮಕ್ಕಳು, ಹಿರಿಯರೊಡನೆ ಸೇರಿ ಕೆರೆ, ಕುಂಟೆ ಮಣ್ಣಿನ ಮೂಲಕ ಎತ್ತುಗಳನ್ನು ನಿರ್ಮಿಸಿ ಸ್ಥಳೀಯವಾಗಿ ಸಿಗುವ ವಸ್ತುಗಳಿಂದ ಅಲಂಕಾರ ಮಾಡುತ್ತಾರೆ. ಹಬ್ಬ ಮುಗಿದ ನಂತರ ಮನೆಯ ಮಾಳಿಗೆಯ ಮೇಲಿಟ್ಟು ಮಳೆ ನೀರಿಗೆ ಕರಗಿ ಹೋಗಲು ಬಿಡುತ್ತಾರೆ.
‘ಮನೆಯಲ್ಲಿ ಸಣ್ಣ ಮಣ್ಣೆತ್ತುಗಳನ್ನು ಪೂಜೆ ಮಾಡಲಾಗುತ್ತಿತ್ತು. ಯುವಕರು ದೊಡ್ಡ ಮಣ್ಣೆತ್ತು ಮಾಡಿ ಊರೆಲ್ಲ ಮೆರವಣಿಗೆ ಮಾಡಲಾಗಿತ್ತು. ಆ ನಂತರ ಬಸವಣ್ಣ ದೇವಸ್ಥಾನ ಮೇಲೆ ಅದನ್ನು ಇಡಲಾಗುತ್ತಿದೆ. ಮಳೆಗೆ ಕರಗಿಹೋಗುತ್ತಿತ್ತು’ ಎಂದು ಚನ್ನಾರೆಡ್ಡಿ ಪಾಟೀಲ ಹೇಳುತ್ತಾರೆ.
****
ಗ್ರಾಮೀಣ ಭಾಗದಲ್ಲಿ ಜೋರು ಹಬ್ಬ
ಆಧುನಿಕತೆಯ ಪರಿಣಾಮ ಗ್ರಾಮೀಣ ಭಾಗದ ಹಬ್ಬಗಳು ಸೊರಗಿವೆ. ಮಣ್ಣೆತ್ತಿನ ಖರೀದಿಯೂ ಕಡಿಮೆಯಾಗಿದೆ. ಪಿಒಪಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಸಂಭ್ರಮದಿಂದ ಮಾಡಲಾಗುತ್ತಿದೆ. ಮಕ್ಕಳು, ಹಿರಿಯರೊಡನೆ ಸೇರಿ ಕೆರೆ, ಕುಂಟೆ ಮಣ್ಣಿನ ಮೂಲಕ ಎತ್ತುಗಳನ್ನು ನಿರ್ಮಿಸಿ ಸ್ಥಳೀಯವಾಗಿ ಸಿಗುವ ವಸ್ತುಗಳಿಂದ ಅಲಂಕಾರ ಮಾಡುತ್ತಾರೆ. ಹಬ್ಬ ಮುಗಿದ ನಂತರ ಮನೆಯ ಮಾಳಿಗೆಯ ಮೇಲಿಟ್ಟು ಮಳೆ ನೀರಿಗೆ ಕರಗಿ ಹೋಗಲು ಬಿಡುತ್ತಾರೆ.
‘ಮನೆಯಲ್ಲಿ ಸಣ್ಣ ಗಾತ್ರದ ಮಣ್ಣೆತ್ತುಗಳನ್ನು ಪೂಜೆ ಮಾಡಲಾಗುತ್ತಿತ್ತು. ಯುವಕರು ದೊಡ್ಡ ಮಣ್ಣೆತ್ತು ಮಾಡಿ ಊರೆಲ್ಲ ಮೆರವಣಿಗೆ ಮಾಡಲಾಗಿತ್ತು. ಆ ನಂತರ ಬಸವಣ್ಣ ದೇವಸ್ಥಾನ ಮೇಲೆ ಅದನ್ನು ಇಡಲಾಗುತ್ತಿದೆ. ಮಳೆಗೆ ಕರಗಿಹೋಗುತ್ತಿತ್ತು’ ಎಂದು ಗುರುಸಣಗಿಯ ಚನ್ನಾರೆಡ್ಡಿ ಪಾಟೀಲ ಹೇಳುತ್ತಾರೆ.
****
ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಮಣ್ಣೆತ್ತು ಮತ್ತು ಪಿಇಒ ಎತ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಸೋಮವಾರದಿಂದ ಮಾರಾಟಕ್ಕೆ ಇಟ್ಟಿದ್ದು, ವ್ಯಾಪಾರವೂ ಚೆನ್ನಾಗಿದೆ ಇದೆ
ಶ್ರೀಶೈಲ್ ಕುಂಬಾರ, ವ್ಯಾಪಾರಿ
****
ಎರಡು ದಿನಗಳ ಕಾಲ ಮಣ್ಣೆತ್ತಿನ ಅಮಾವ್ಯಾಸೆ ಇದ್ದು, ಬುಧವಾರ ಹೆಚ್ಚು ಖರೀದಿಯಾಗುವ ಸಾಧ್ಯತೆ ಇದೆ. ಹೆಚ್ಚು ಮಳೆ ಬಂದರೆ ನಮ್ಮ ವ್ಯಾಪಾರಕ್ಕೂ ತೊಂದರೆಯಾಗಬಹುದು
ಅಮರಮ್ಮ ಕುಂಬಾರ, ವ್ಯಾಪಾರಿ
***
ಮಣ್ಣಿನ ಎತ್ತುಗಳನ್ನು ಖರೀದಿ ಮಾಡಲು ಬಂದಿದ್ದೇವೆ. ಎಣ್ಣೆತ್ತುಗಳನ್ನು ಪೂಜಿಸುವ ಮೂಲಕ ಉತ್ತಮ ಮಳೆಯಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ
ಬಾಬಣ್ಣ ಕೊಲಿನವರ್, ಕಟಗಿ ಶಹಾಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.