ಯಾದಗಿರಿ: ನಗರದ ಹಳೆ ಬಸ್ ನಿಲ್ದಾಣದ ಬಳಿ ಹೊಸ ಕಟ್ಟಡ ಕಾಮಗಾರಿ ಕುಟುಂತ್ತಾ ಸಾಗಿದ್ದು, ಅಕ್ಷರಶಃ ಕುಡುಕರ ತಾಣವಾಗಿ ಮಾರ್ಪಟ್ಟಿದೆ.₹4 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಕಾಮಗಾರಿ ಮಾಡುತ್ತಿದ್ದು,ಗುತ್ತಿಗೆ ಪಡೆದು ಎರಡೂವರೆವರ್ಷವಾದರೂ ಇನ್ನೂ ಪೂರ್ಣಗೊಂಡಿಲ್ಲ.
ಅಕ್ಕಪಕ್ಕದಲ್ಲಿ ಮದ್ಯ ಮಾರಾಟ ಮಳಿಗೆಗಳಿದ್ದು, ಅಲ್ಲಿಂದ ಮದ್ಯ ತರುವ ಕುಡುಕರು ನೆನಗುದಿಗೆ ಬಿದ್ದ ಕಟ್ಟಡದಲ್ಲಿ ರಾಜಾರೋಷವಾಗಿ ಕುಡಿದು ಬಾಟಲಿಗಳನ್ನು ಅಲ್ಲಲ್ಲಿ ಬಿಸಾಕಿ ಗಬ್ಬೆಬ್ಬಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ಕುಡಿದುಬಿಸಾಕಿದ ಬಾಟಲಿಗಳು, ಜೊತೆಗೆ ನೀರಿನ ಖಾಲಿ ಬಾಟಲಿ, ಪ್ಲಾಸ್ಟಿಕ್ ಕಪ್, ಸಿಗರೇಟ್ ಪ್ಯಾಕ್ಗಳು ಬಿದ್ದಿವೆ.
ಹಾಡಹಗಲೇ ಮದ್ಯ ಕುಡಿಯುವ ಸ್ಥಳವಾಗಿ ಬಳಕೆಯಾಗುತ್ತಿದೆ. ಇದನ್ನು ತಡೆಗಟ್ಟಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.
‘ಕುಳಿತುಕೊಳ್ಳಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಆದರೂ ಹಳೆ ಬಸ್ ನಿಲ್ದಾಣದಿಂದ ಕೆಲ ಊರುಗಳಿಗೆ ಬಸ್ ಬಿಡುತ್ತಿದ್ದಾರೆ. ಇಲ್ಲಿ ಸ್ವಚ್ಛತೆ ಕಾಪಾಡಿಲ್ಲ. ಬಸ್ನಲ್ಲಿ ಕುಂತರೂ ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತದೆ' ಎಂದು ಪ್ರಯಾಣಿಕ ಮಲ್ಲು ಹಲಗಿ ಕುರಕುಂದಿ ಆಪಾದಿಸಿದರು.
‘ನಾವು ಹೇಗೋ ಸಹಿಸಿಕೊಳ್ಳುತ್ತೇವೆ. ಮಹಿಳೆಯರು, ಮಕ್ಕಳು ಪರದಾಡುತ್ತಿದ್ದಾರೆ. ಅಧಿಕಾರಿಗಳು ತಮ್ಮ ಆದಾಯವನ್ನು ಮಾತ್ರ ನೋಡುತ್ತಿದ್ದಾರೆ. ಪ್ರಯಾಣಿಕರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ' ಎನ್ನುತ್ತಾರೆ ಅವರು.
ನಿರಾಶ್ರಿತರ ತಾಣ: ಕುಡುಕರ ತಾಣದ ಜೊತೆಗೆ ನಿರಾಶ್ರಿತರ ತಾಣವಾಗಿಯೂ ಬಳಕೆ ಆಗುತ್ತಿದೆ. ಹಲವಾರು ಜನರು ಇಲ್ಲಿಯೇವಾಸಿಸುತ್ತಿದ್ದಾರೆ. ಗಂಟುಮೂಟೆ ಕಟ್ಟಿಕೊಂಡು ಆಶ್ರಯ ಪಡೆದಿದ್ದಾರೆ.
ಇಲ್ಲಿ ಅಸ್ವಚ್ಛತೆ ತಾಂಡವವಾಡುತ್ತಿದೆ. ಎಲ್ಲಿ ನೋಡಿದರೂ ಸ್ವಚ್ಛತೆ ಇಲ್ಲ. ಕುಡುಕರುಬಿದ್ದು ಹೊರಳಾಡುತ್ತಿದ್ದಾರೆ ಸ್ವಚ್ಛತೆ ಕಾಪಾಡಬೇಕು
ಅಶೋಕ ಮೋಟ್ನಳ್ಳಿ, ಪ್ರಯಾಣಿಕ
***
ನಮ್ಮೂರಿಗೆ ತೆರಳುವ ಬಸ್ಗಾಗಿ ನೆಲದ ಮೇಲೆ ಕುಳಿತುಕೊಂಡು ಕಾಯುತ್ತಿದ್ದೇವೆ. ರಾಶಿ ರಾಶಿ ಕಸವಿದ್ದರೂ ವಿಲೇವಾರಿ ಮಾಡಿಲ್ಲ
ಮಹಾದೇವಿ ದೋರನಹಳ್ಳಿ, ಪ್ರಯಾಣಿಕರು
***
ಜುಲೈನಲ್ಲಿ ನಿಲ್ದಾಣ ಉದ್ಘಾಟನೆ ಆಗುತ್ತೆ. ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಗೇಟ್ ಇಲ್ಲದಿದ್ದರಿಂದ ಸಮಸ್ಯೆ ಆಗಿದೆ ಎಂ.ಪಿ.ಶ್ರೀಹರಿಬಾಬು, ವಿಭಾಗೀಯ ನಿಯಂತ್ರಣಾಧಿಕಾರಿ, ಎನ್ಈಕೆಆರ್ಟಿಸಿ