ಯಾದಗಿರಿ: ಯಾದಗಿರಿ ಜಿಲ್ಲೆಯಾಗಿ 10 ವರ್ಷ ಕಳೆದರೂ ಅಂಚೆ ವಿಭಾಗೀಯ ಕಾರ್ಯಾಲಯ ಕಲಬುರ್ಗಿಯಿಂದಲೇ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಎಲ್ಲ ರೀತಿಯಿಂದಲೂ ಜಿಲ್ಲೆಯ ಜನತೆ ಸಮಸ್ಯೆ ಅನುಭವಿಸುವಂತಾಗಿದೆ.
ಜಿಲ್ಲೆಗೆ ಸಂಬಂಧಪಟ್ಟ ಅಂಚೆ ಇಲಾಖೆಯ ಎಲ್ಲಾ ಕೆಲಸಗಳು ಕಲಬುರ್ಗಿ ವಿಭಾಗದ ಅಂಚೆ ವರಿಷ್ಠಾಧಿಕಾರಿಯವರಿಂದಲೇ ಸಹಿ, ಮಂಜೂರಾತಿ ಸಿಕ್ಕ ಬಳಿಕವೇ ಬರಬೇಕಾಗುತ್ತದೆ. ಇದರಿಂದ ಸಾಕಷ್ಟು ವಿಳಂಬವಾಗುತ್ತದೆ. ಅಂಚೆ ಕಚೇರಿಯ ಗ್ರಾಹಕರ ಸಮಯವೂ ಇದರಿಂದ ವ್ಯರ್ಥವಾಗುತ್ತಿದೆ.
ಜಿಲ್ಲೆಯು ಆರು ತಾಲ್ಲೂಕುಗಳನ್ನು ಹೊಂದಿದ್ದು, ಸಾಕಷ್ಟು ಪತ್ರ ವ್ಯವಹಾರ ಸೇರಿದಂತೆ ವಿವಿಧ ಚಟುವಟಿಕೆಗಳು ಅಂಚೆ ಕಚೇರಿ ಮೂಲಕ ನಡೆಯುತ್ತವೆ.ಜಿಲ್ಲಾ ಕೇಂದ್ರವು ಸ್ವತಂತ್ರವಾದ ‘ಅಂಚೆ ವಿಭಾಗ’ ಹೊಂದಲು ಅರ್ಹವಿದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಇದು ನನೆಗುದಿಗೆ ಬಿದ್ದಿದೆ.
ನೂತನ ಜಿಲ್ಲೆಯಾದ ನಂತರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಕಚೇರಿಗಳು ಮಂಜೂರು ಆಗಿವೆ. ಆದರೆ, ಅಂಚೆ ಇಲಾಖೆ ಮಾತ್ರ ನಿರ್ಲಕ್ಷ್ಯಕ್ಕೆ ಒಳಗಾಗಿ ಕಲಬುರ್ಗಿಯಿಂದಲೇ ಎಲ್ಲ ಚಟುವಟಿಕೆಗಳು
ನಿಯಂತ್ರಿಸಲ್ಪಡುತ್ತಿವೆ.
ಯಾದಗಿರಿ ಜಿಲ್ಲೆಯಾದರೂ ಪ್ರಧಾನ ಅಂಚೆ ಕಚೇರಿ ಮಾತ್ರ ಹೊಂದಿದ್ದು, 33 ಉಪ ಅಂಚೆ ಕಚೇರಿಗಳನ್ನು ಹೊಂದಿದೆ. ಅಲ್ಲದೇ ಕಲಬುರ್ಗಿ ಜಿಲ್ಲೆಯ ಸೇಡಂ, ವಾಡಿ, ಚಿತ್ತಾಪುರ ತಾಲ್ಲೂಕಿನ ಗ್ರಾಮಗಳು ಯಾದಗಿರಿ ಅಂಚೆ ವಿಭಾಗ ವ್ಯಾಪ್ತಿಗೆ ಒಳಪಟ್ಟಿವೆ.
ನಗರದ ಅಂಚೆ ಕಚೇರಿಯಲ್ಲಿ 33 ಸಾವಿರ ಉಳಿತಾಯ ಖಾತೆಗಳನ್ನು ಹೊಂದಿದ್ದು, ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಗ್ರಾಹಕರ ಖಾತೆಗಳಿವೆ. ಕಚೇರಿ ಸಿಬ್ಬಂದಿ, ರಜೆ, ಟಿಎ, ಡಿಎ, ಆರ್ಥಿಕ ಚಟುವಟಿಕೆಗಳೆಲ್ಲವೂ ಕಲಬುರ್ಗಿಯಿಂದಲೇ ಅನುಮೋದನೆಗೊಂಡು ಬರಬೇಕಿದೆ.
ಹೀಗಾಗಿ ಜಿಲ್ಲೆಯಲ್ಲಿಯೇ ವಿಭಾಗೀಯ ಕಚೇರಿ ಸ್ಥಾಪನೆಯಾದರೆ ಜನರ ಪತ್ರ ವ್ಯವಹಾರ, ಆರ್ಥಿಕ ಚಟುವಟಿಕೆ, ಹೆಚ್ಚಿನ ಸಿಬ್ಬಂದಿ ಬರಲಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಅಂಚೆ ಇಲಾಖೆ ಹೆಚ್ಚಿನ ಗ್ರಾಹಕರನ್ನು ತಲುಪಲು ಸಾಧ್ಯವಿದೆ. ಸದ್ಯ ಪ್ರಧಾನ ಅಂಚೆ ಕಚೇರಿಯಲ್ಲಿ 35 ಹುದ್ದೆಗಳು ಮಂಜೂರಿದ್ದು, 28
ಭರ್ತಿ ಇವೆ.
ಹೀಗಾಗಿ ಜಿಲ್ಲೆಯ ಸಂಸದರು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಸರ್ಕಾರದ ಮೇಲೆ ಒತ್ತಡ ಹಾಕಿ ಯಾದಗಿರಿಯಲ್ಲಿ ವಿಭಾಗೀಯ ಅಂಚೆ ವರಿಷ್ಠಾಧಿಕಾರಿ ನೂತನ ಕಾರ್ಯಾಲಯ ಬರುವಂತೆ
ಮಾಡಬೇಕಿದೆ.
***
ಎಲ್ಲೆಲ್ಲಿ ಉಪ ಅಂಚೆ ಕಚೇರಿಗಳಿವೆ?
ಯಾದಗಿರಿ ಅಂಚೆ ವಿಭಾಗವು ಭೀಮರಾಯನಗುಡಿ, ಬಿಜಾಸಪುರ, ಸಿ.ಎಫ್.ಕುರಕುಂಟಾ, ಚಿತ್ತಾಪುರ, ಗೋಗಿ, ಗುರುಮಠಕಲ್, ಹುಣಸಗಿ, ಕೆಂಭಾವಿ, ಕೋಡೆಕಲ್, ಕುಂಬಾರಪೇಟ, ಮಾಧ್ವಾರ, ಮಳಖೇಡ, ಮಳಖೇಡ ರಸ್ತೆ, ಮೂಧೋಳ, ನಾಯ್ಕಲ್, ನಾಲವಾರ, ನಾರಾಯಣಪುರ, ನಿಡಗುಂದ, ರಾಜನಕೊಳೂರ, ರಾಮಸಮುದ್ರ, ರಂಗಂಪೇಟ, ಸಗರ, ಸೈದಾಪುರ, ಸೇಡಂ, ಶಹಾಪುರ, ಶಹಾಪುರ ನಗರ, ಸುರಪುರ, ಸುರಪುರ ನಗರ, ವಡಗೇರಾ, ವಾಡಿ, ಯಾದಗಿರಿ ಸ್ಟೇಷನ್, ಯಾದಗಿರಿ ನಗರ, ಯಾದಗಿರಿ ಉಪ ಅಂಚೆ ಕಚೇರಿಗಳ ವ್ಯಾಪ್ತಿ ಹೊಂದಿದೆ.
***
ಅಂಚೆ ವಿಭಾಗೀಯ ಕಾರ್ಯಾಲಯ ಯಾದಗಿರಿ ಜಿಲ್ಲೆಯಲ್ಲಿ ಸ್ಥಾಪಿಸಲು ಸಂಬಂಧಿಸಿದ ಸಚಿವರಿಗೆ ಶೀಘ್ರದಲ್ಲೇ ಪತ್ರ ಬರೆಯಲಾಗುವುದು
ರಾಜಾ ಅಮರೇಶ್ವರ ನಾಯಕ, ರಾಯಚೂರು ಸಂಸದ
***
ಜಿಲ್ಲೆಯ ಜನಪ್ರತಿನಿಧಿಗಳಿಗೆ ರಾಜಕೀಯ ಒತ್ತಾಸೆ ಇಲ್ಲ. ಇಚ್ಛಾಶಕ್ತಿಯೂ ಇಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು
ಶರಣಪ್ಪ ಮಾನೇಗಾರ ಕಾಂಗ್ರೆಸ್ ಮುಖಂಡ
***
ದೊಡ್ಡ ವಿಭಾಗ ಇರುವ ಜಿಲ್ಲೆಯನ್ನು ಬೇರ್ಪಡಿಸಲು ಕೇಂದ್ರದಿಂದ ಪತ್ರ ಬಂದಿದ್ದು, ಯಾದಗಿರಿ ಜಿಲ್ಲೆಯ ಹೆಸರು ಶಿಫಾರಸು ಮಾಡಲಾಗುವುದು
ಬಿ.ಆರ್.ನನಜಗಿ, ಕಲಬುರ್ಗಿ ಅಂಚೆ ವಿಭಾಗದ ವರಿಷ್ಠ ಅಂಚೆ ಅಧೀಕ್ಷಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.