ಕೆಂಭಾವಿ: ವಿದ್ಯಾರ್ಥಿಗಳಲ್ಲಿ ಓದಿನ ಜೊತೆ ಉತ್ತಮ ಸಂಸ್ಕಾರ ಬೆಳೆಸುವ ಅವಶ್ಯಕತೆ ಇದೆ ಎಂದು ಜಿಲ್ಲಾ ವಿಷ ಪರಿವೀಕ್ಷಕ ವೀರಣ್ಣ ಕನ್ನಳ್ಳಿ ಹೇಳಿದರು.
ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ 7ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವ ಹೊಂದಿರಬೇಕು. ಸಾಧನೆ ಮಾಡಬೇಕೆಂಬ ಗುರಿ ಇಟ್ಟು ಮುಂದೆ ಬರಬೇಕು, ಸಾಧನೆಗೆ ಯಾವುದೆ ಜಾತಿಗೆ ಸೀಮೀತವಲ್ಲ, ಅದು ಕೇವಲ ಪರಿಶ್ರಮದಿಂದ ಮಾತ್ರ ಲಭಿಸುವುದು ಎಂದು ಹೇಳಿದರು.
ಗುರಿ ಸಾಧನೆಗೆ ಸಮಯ ಪರಿಪಾಲನೆ ಅತೀ ಮುಖ್ಯವಾಗಿದ್ದು, ದೇಶದ ಅನೇಕ ಮಹನೀಯರು ಸಮಯ ಪಾಲನೆ ಮಾಡಿ ಉತ್ತಮ ಮೇಧಾವಿ ವ್ಯಕ್ತಿಗಳಾಗಿದ್ದಾರೆ.ಅವ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ಉತ್ತಮ ವಿದ್ಯಾರ್ಥಿಯಾಗಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನವನ್ನು ಉತ್ತಮ ಪಡಿಸಿಕೊಂಡು ಉನ್ನತ ಹುದ್ದೆಗೇರಬೇಕು. ತಾಲ್ಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಆರ್ಟ ಆಫ್ ಲೀವಿಂಗ್ನ ಶಿವಾನಂದ ಗುರೂಜಿ ಪ್ರಸ್ತಾವಿಕ ಮಾತನಾಡಿದರು.
ಹಿರೇಮಠದ ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ, ಜಿಲ್ಲಾ ಪಂಚಾಯತಿ ಸದಸ್ಯ ಬಸನಗೌಡ ಯಡಿಯಾಪೂರ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ. ಎಮ್. ಬಿರಾದಾರ, ಪುರಸಭೆ ಅಧ್ಯಕ್ಷ ದೇವಪ್ಪ ಮ್ಯಾಗೇರಿ, ಜಿಲ್ಲಾ ವಿಷಯ ಪರಿವೀಕ್ಷಕ ವೆಂಕೋಬ, ಇಫ್ಕೊ ಸಂಸ್ಥೆಯ ನಿರ್ದೇಶಕ ವಾಯ್. ಟಿ. ಪಾಟೀಲ, ಸಿ.ಆರ್.ಸಿ ಬಸನಗೌಡ, ಸಂಗನಗೌಡ ಮರಡ್ಡಿ, ಬಸನಗೌಡ ಹೊಸಮನಿ, ಸಿದ್ಧನಗೌಡ ಶಿವಪೂರ, ಶಿವಪ್ಪ ಕಟ್ಟಿಮನಿ ಇದ್ದರು.