ಬೆಳಗಾವಿ:`ಆವಿಷ್ಕಾರದ ಬದಲಾವಣೆಗಳಿಗೆ ಹೊಂದಿಕೊಂಡಾಗ ಮಾತ್ರ ಒಳ್ಳೆಯ ಶಸ್ತ್ರಚಿಕಿತ್ಸಕ ಹಾಗೂ ಒಬ್ಬ ಒಳ್ಳೆಯ ವೈದ್ಯನಾಗಿ ಮಾರ್ಪಡಲು ಸಾಧ್ಯ~ ಎಂದು ಕೆಎಲ್ಇ ವಿಶ್ವವಿದ್ಯಾಲಯದ ಕುಲಪತಿ ಡಾ. ಚಂದ್ರಕಾಂತ ಕೊಕಾಟೆ ಹೇಳಿದರು.
ಕೆಎಲ್ಇ ವಿಶ್ವವಿದ್ಯಾಲಯದ ಜವಾಹರಲಾಲ್ ನೆಹರೂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆರಂಭವಾದ ಕಿವಿ, ಗಂಟಲು ಮತ್ತು ಮೂಗು ಶಸ್ತ್ರಚಿಕಿತ್ಸಕರ 29ನೇ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.
`ಮೇಲಿಂದ ಮೇಲೆ ಇಂಥ ಸಮಾವೇಶಗಳನ್ನು ಹಮ್ಮಿಕೊಳ್ಳುವುದರಿಂದ ಇತ್ತೀಚಿನ ಆವಿಷ್ಕಾರಗಳ ವಿನಿಮಯ ಹಾಗೂ ನೂತನ ಸಾಧ್ಯತೆಗಳನ್ನು ಅಳವಡಿಸಿಕೊಳ್ಳಲು ಸಾಧ್ಯ. ಅಲ್ಲದೇ ಆವಿಷ್ಕಾರಗಳ ಬದಲಾವಣೆಗೆ ಹೊಂದಿಕೊಳ್ಳಲು ಶಸ್ತ್ರಚಿಕಿತ್ಸಕರಿಗೆ ಸಹಕಾರಿಯಾಗಲಿದೆ ಎಂದರು.
ತರಬೇತಿದಾರರಿಂದ ವೈದ್ಯ ವಿದ್ಯಾರ್ಥಿಗಳಿಗೆ ಮಾಹಿತಿ ದೊರಕಿಸಿಕೊಡಲು ವೈದ್ಯಕೀಯ ಮಹಾವಿದ್ಯಾಲಯಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.
ವಿಶ್ವವಿದ್ಯಾಲಯದ ಕುಲಸಚಿವ ಡಾ. ಪಿ.ಎಫ್. ಕೋಟೂರ, `ಆವಿಷ್ಕಾರಗಳು ಕೇವಲ ಶಸ್ತ್ರಚಿಕಿತ್ಸಕರಲ್ಲಿ ಮಾತ್ರ ಇರದೇ, ಅವು ಸಾಮಾನ್ಯ ಜನರನ್ನು ತಲುಪುವಂತಾಗಬೇಕು~ ಎಂದು ಹೇಳಿದರು.
ಇಎನ್ಟಿ ಶಸ್ತ್ರಚಿಕಿತ್ಸೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ. ಬಿ.ಡಿ ಗುತ್ತಿಗೋಳ, ಡಾ. ಎಂ.ಎಲ್. ತುಕ್ಕಾರ ಹಾಗೂ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಸೇವೆ ಮಾಡಿದ ರುದ್ರಪ್ಪಾ ಭಂದ್ರೆ ದಂಪತಿಯನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.