ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬ್ದಗಳ ಪರಿಕಲ್ಪನೆ ಎಷ್ಟು ಅಗತ್ಯ?

Last Updated 5 ಮಾರ್ಚ್ 2019, 19:31 IST
ಅಕ್ಷರ ಗಾತ್ರ

ಒಂದು ಭಾಷೆಯಲ್ಲಿ ಬಳಸುವ ಬಹುತೇಕ ಪದಗಳು ಪರಿಕಲ್ಪನೆ (ಕಾನ್ಸೆಪ್ಟ್‌)ಗಳೇ ಆಗಿರುತ್ತವೆ. ಪರಿಕಲ್ಪನೆಗಳಿಲ್ಲದೆ ಭಾಷೆ ಇರಲು ಸಾಧ್ಯವಿಲ್ಲ. ಒಂದು ಸಮುದಾಯದಲ್ಲಿ ಬದುಕುವ ಜನರು ತಮ್ಮದೇ ಆದ ಸಂವಹನವನ್ನು ನಿತ್ಯವೂ ಮಾಡುತ್ತಾ, ಪರಸ್ಪರ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಎಂದರೆ, ಅವರು ಆಡುವ ಭಾಷೆಯ ಪರಿಕಲ್ಪನೆಗಳ ಕನಿಷ್ಠ ಜ್ಞಾನ ಸಂವಹನದಲ್ಲಿ ಪಾಲ್ಗೊಳ್ಳುವ ವ್ಯಕ್ತಿ ಅಥವಾ ಸಮುದಾಯಕ್ಕೆ ಇದೆ ಎಂದರ್ಥ. ಒಂದು ಭಾಷೆಯಲ್ಲಿ ಬಳಕೆಯಾಗುವ ಪರಿಕಲ್ಪನೆಗಳನ್ನು ನಿರ್ದಿಷ್ಟ ಸಮಯದಲ್ಲಿ ವ್ಯಕ್ತಿ ಔಪಚಾರಿಕ ಶಿಕ್ಷಣ ಕ್ರಮದಿಂದ ಕಲಿಯಬೇಕಾದ ಅಗತ್ಯವಿಲ್ಲ. ಸಮುದಾಯದಲ್ಲಿ ಹುಟ್ಟಿ ಬೆಳೆಯುವ ಒಂದು ಮಗು ಸಾಮಾಜೀಕರಣಗೊಳ್ಳುತ್ತ ಸಮುದಾಯದಲ್ಲಿ ಸಹಜವಾಗಿ ತನ್ನಷ್ಟಕ್ಕೆ ತಾನೇ ಕಲಿಯುತ್ತದೆ.

ನಿತ್ಯವೂ ನಾವು ಮಾತನಾಡುವಾಗ ಅನೇಕ ಪದಗಳನ್ನು ಬಳಸುತ್ತೇವೆ. ಸಮುದ್ರ, ಆನೆ, ದೇವಸ್ಥಾನ, ನದಿ, ಬೆಟ್ಟ, ಶಿಕ್ಷಕ, ಸಂತೆ, ಕಾರು.. ಹೀಗೆ ನಾನಾ ಪದಗಳನ್ನು ನಮಗೆ ಅರಿವಿಲ್ಲದೆ ಸಂದರ್ಭೊಚಿತವಾಗಿ ಸಹಜವಾಗಿ ಬಳಕೆ ಮಾಡುತ್ತೇವೆ. ಈ ಪದಗಳು ಪರಿಕಲ್ಪನೆಗಳಾಗಿರುತ್ತವೆ. ಪ್ರತಿ ಪರಿಕಲ್ಪನೆಗಳ ಅರ್ಥ ಮತ್ತು ಕನಿಷ್ಠ ಜ್ಞಾನವು ಹುಟ್ಟಿನಿಂದ ಸಹಜವಾಗಿ ಅರ್ಥ ಗ್ರಹಿಕೆಯಾಗಿರುವುದು. ಉದಾ- ವಿಶಾಲವಾದ, ಎತ್ತರವಾದ ಬೆಟ್ಟದ ಸಾಲು ಎಂದ ತಕ್ಷಣ ನಮ್ಮ ಮೆದುಳಿನ ವಿವೇಚನಾ ಲಹರಿಯು ಬೆಟ್ಟದ ಬಗ್ಗೆ ಕಲ್ಪನೆ ಮಾಡಿಕೊಳ್ಳುತ್ತದೆ. ಈ ಕ್ರಿಯೆ ಅತ್ಯಂತ ಕಡಿಮೆ ಸಮಯದಲ್ಲಿ ಸಹಜವಾಗಿ ನಡೆದು ತಕ್ಷಣ ಮೆದುಳು ಪ್ರತಿಕ್ರಿಯೆ ನೀಡುತ್ತದೆ. ಭಯ ಹುಟ್ಟಿಸುವ ಒಂದು ಕಥೆ ಹೇಳಿದರೆ, ಅದನ್ನು ಅರ್ಥೈಸಿಕೊಂಡು ಭಯ ಪಡುತ್ತೇವೆ. ಕಾರಣ ಅಲ್ಲಿ ಬರುವ ಪ್ರತಿ ಪರಿಕಲ್ಪನೆಗಳನ್ನು ಪೂರ್ವದಲ್ಲಿಯೇ ಅರ್ಥೈಸಿಕೊಂಡಿರುತ್ತೇವೆ.

ಶೈಶವಾವಸ್ಥೆಯಲ್ಲೆ ಮಗು ಸ್ಥಳೀಯ ಭಾಷೆಯನ್ನು ಸಹಜವಾಗಿ ಕಲಿಯುತ್ತದೆ. ಸಾಮಾಜೀಕರಣದ ನಿಯೋಗಗಳ ಮೂಲಕ ಪಾತ್ರ ಪ್ರಜ್ಞೆ , ಲೋಕ ರೂಢಿ, ಕಾನೂನು, ಸರಿ– ತಪ್ಪು, ಸಂಸ್ಕೃತಿ, ಆಚಾರ– ವಿಚಾರ ಹೀಗೆ ಹತ್ತು ಹಲವು ಮಾನವ ಸಂಬಂಧಗಳ ಸಹಜ ಅನುಬಂಧಗಳನ್ನು ಅರಿಯುತ್ತೇವೆ. ಈ ಕುರಿತು ಕನಿಷ್ಠ ಜ್ಞಾನ, ಚಿಂತನೆ, ಪ್ರತಿಕ್ರಿಯೆ ನಮ್ಮಲ್ಲಿ ಬೆಳೆಯುತ್ತದೆ. ಇದಕ್ಕೆ ವಿಶೇಷವಾದ ಯಾವುದೇ ತರಬೇತಿ ಅಗತ್ಯವಿಲ್ಲ. ವಯಸ್ಸು ಬೆಳೆದಂತೆ ಕಾಲಕಾಲಕ್ಕೆ ಅನುಭವ ಜನ್ಯ ಜ್ಞಾನವನ್ನು ಜೀವನದ ಉದ್ದಕ್ಕೂ ಪಡೆಯುತ್ತಲೇ ಹೋಗುತ್ತೇವೆ.

ಭಾಷಾ ಪ್ರಭುತ್ವಕ್ಕೆ ಅಗತ್ಯ
ಬಾಲ್ಯಾವಸ್ಥೆಯು ಪರಿಕಲ್ಪನೆಗಳನ್ನು ಅರ್ಥೈಸುವ, ಗುರುತಿಸುವ ಕಾಲವಾಗಿದೆ. ಈ ಅವಧಿಯಲ್ಲಿ ಮಕ್ಕಳಿಗೆ ಪರಿಕಲ್ಪನೆಗಳ ಪರಿಪೂರ್ಣ ಜ್ಞಾನ ಅತ್ಯಗತ್ಯ.‌ ಪರಿಕಲ್ಪನೆಗಳು ಅರ್ಥ ಗ್ರಹಿಕೆಯಾಗದೇ ಹೋದರೆ, ಭಾಷಾ ಪ್ರಭುತ್ವ ಬರಲಾರದು. ಸರಳವಾಗಿ ನಿರರ್ಗಳವಾಗಿ ಭಾಷೆ ಮಾತನಾಡಲೂ ಸಾಧ್ಯವಾಗುವುದಿಲ್ಲ. ವಿಶ್ಲೇಷಣೆ ವಿವರಣೆ ಮಾಡುವ ಕನಿಷ್ಠ ಜ್ಞಾನವೂ ಇರಲಾರದು. ಇಂದು ಬಹುತೇಕ ಗ್ರಾಮೀಣ ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಮಗು ಪರೀಕ್ಷೆ ಎದುರಿಸುವ ಅನಿವಾರ್ಯತೆ ಇರುವುದರಿಂದ ಕಂಠಪಾಠ ಕ್ರಮ ಅನುಸರಿಸಲಾಗುತ್ತಿದೆ. ಪರೀಕ್ಷೆಯಲ್ಲಿ ಐಕ್ಯು ಅಥವಾ ನೆನಪಿನ ಶಕ್ತಿ ಜಾಸ್ತಿ ಇರುವ ಮಗು ಹೆಚ್ಚು ಅಂಕ ಗಳಿಸಬಹುದು. ಆದರೆ, ಸ್ಮರಿಸುವ, ಗುರುತಿಸುವ, ಅರ್ಥೈಸಿಕೊಳ್ಳುವ, ವಿಶ್ಲೇಷಣೆ ಮಾಡುವ ಕೌಶಲ ಕಲಿಯುವುದರಲ್ಲಿ ವಿಫಲವಾಗುವ ಸಾಧ್ಯತೆ ಹೆಚ್ಚಾಗಬಹುದು.

ಬರವಣಿಗೆಯಲ್ಲಿ ಪ್ರೌಢಿಮೆ
ಮಕ್ಕಳು ಒಂದು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವುದರ ಜೊತೆಗೆ ಬರವಣಿಗೆಯ ಕೌಶಲದಲ್ಲಿ ಪ್ರೌಢಿಮೆ ಸಾಧಿಸಲು ಪರಿಕಲ್ಪನೆಗಳು ಸಹಕಾರಿಯಾಗಬಲ್ಲವು. ಪರಿಕಲ್ಪನೆಗಳ ಆಳವಾದ ಜ್ಞಾನವಿದ್ದಾಗ ಭಾಷೆಯ ಮೇಲೆ ಹಿಡಿತ ಸಾಧಿಸಿ ಪ್ರಭುದ್ದತೆ ಸಾಧಿಸಬಹುದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಮಾಡಲು ಈ ಬಗ್ಗೆ ಸಾಮರ್ಥ್ಯ ಅತ್ಯಗತ್ಯ.

ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿವಿಧ ಸ್ಪರ್ಧಾ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬೇಕು ಎಂದರೆ, ವಿಷಯದ ಆಳವಾದ ಜ್ಞಾನ ಅಗತ್ಯ. ವಿವಿಧ ಮ್ಯಾನೇಜ್‌ಮೆಂಟ್ ಹುದ್ದೆಗಳಿಗೆ ಹೋಗಲು, ಖಾಸಗಿ‌ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಲು, ಸಂದರ್ಶನ ಮಾಡುವಾಗ. ಒಂದು ವಿಷಯದ ಬಗ್ಗೆ ವಿವರಣೆ ನೀಡಬೇಕು ಎಂದರೆ ಆ ಪರಿಕಲ್ಪನೆಯ ಸಾಮಾನ್ಯ ಜ್ಞಾನ ಅತ್ಯಗತ್ಯ. ಒಂದು ಪರಿಕಲ್ಪನೆ ನೀಡಿ ವಿವರಣೆ ನೀಡಲು ಹೇಳಬಹುದು. ಉದಾ- ‘ಮನೆ’ ಎಂದುಕೊಳ್ಳೋಣ. ಈ ಮನೆ ಎಂಬ ಪರಿಕಲ್ಪನೆ ಬಗ್ಗೆ ಐದು ಹತ್ತು ನಿಮಿಷ ಮಾತನಾಡುವ, ಬರೆಯುವ ಸಾಮರ್ಥ್ಯ ಅಭ್ಯರ್ಥಿಗೆ ಇರಬೇಕಾಗುತ್ತದೆ.

ಆಡು ಭಾಷೆಯ ಮೂಲ ಪರಿಕಲ್ಪನೆಗಳ ಮೂಲ ಸ್ವರೂಪ ಯಾವತ್ತೂ ಬದಲಾಗುವುದಿಲ್ಲ. ಆದರೆ ಕೆಲವು ಪರಿಕಲ್ಪನೆಗಳು ಕಾಲ ಬದಲಾದಂತೆ ರೂಪಾಂತರ ಪಡೆಯುತ್ತವೆ. ಉದಾ: ಪೋನ್ ಎಂಬ ಪ್ರಾಥಮಿಕ ಪರಿಕಲ್ಪನೆ ಆಧರಿಸಿ‌ ಮೊಬೈಲ್ ಎಂಬ ಹೊಸ ಪರಿಕಲ್ಪನೆ ಆವಿಷ್ಕಾರವಾಯಿತು. ಇದರ ಬಗ್ಗೆ ಜ್ಞಾನವನ್ನು ಒಮ್ಮೆ ರೂಢಿಸಿಕೊಂಡು ಅನುಸರಿಸಿದರೆ ಸಾಲದು. ಜೀವನ ಶೈಲಿ ಬದಲಾದಂತೆ, ಇವನ್ನು ಕಾಲ, ಸನ್ನಿವೇಶ, ಪರಿಸ್ಥಿತಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳುವ ಕಲೆ ಕಲಿಯಬೇಕು.

ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಪಡೆದರೆ ಮಕ್ಕಳು ಹೆಚ್ಚು ಹೆಚ್ಚು ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳುತ್ತಾರೆ. ಗಣಿತ, ವಿಜ್ಞಾನ ಹಾಗೂ ಸಮಾಜ ವಿಷಯಗಳ ಮೂಲ ಪರಿಕಲ್ಪನೆಗಳನ್ನು ಅರ್ಥೈಸಿಕೊಂಡರೆ ಪ್ರೌಢ, ಪದವಿ ಹಂತದ ಶಿಕ್ಷಣ ಸುಲಭವಾಗಿ ಅರ್ಥಗ್ರಹಿಕೆಯಾಗುವುದು. ಜೊತೆಗೆ ವಿಷಯದ ಆಳ ಜ್ಞಾನವು ಬೆಳೆಯುವುದು. ವಾಸ್ತವದಲ್ಲಿ ಈಗಿನ ಸರ್ಕಾರಿ ಶಿಕ್ಷಣ ವ್ಯವಸ್ಥೆ ಯಲ್ಲಿ ಸಿಸಿಇ (ನಿರಂತರ ವ್ಯಾಪಕ ಮೌಲ್ಯಮಾಪನ) ಎನ್ನುವುದು ಪರಿಕಲ್ಪನೆಗಳ‌ ಬೆಳವಣಿಗೆಗೆ ಸಾಕಷ್ಟು ಪುಷ್ಟಿ ನೀಡಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT