ಯಶವಂತಪುರ ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲೊಂದು. ರೈಲ್ವೆ ನಿಲ್ದಾಣ, ಮೆಟ್ರೊ ನಿಲ್ದಾಣ ಇಲ್ಲಿನ ಪ್ರಮುಖ ಕೇಂದ್ರಗಳು. ಇದೇ ಪ್ರದೇಶದಲ್ಲಿರುವ ಆರ್ಟಿಒ ಕಚೇರಿ ರಸ್ತೆಗುಂಟ ಮುಂದೆ ಸಾಗಿದರೆ ಸಿಗುವ ಮಾರುಕಟ್ಟೆಯಲ್ಲಿ ಜನವೋ ಜನ. ಬಸ್ನಿಂದ ಹಿಡಿದು ಸೈಕಲ್ವರೆಗೂ ಇಲ್ಲಿ ಸಾಹಸಪಟ್ಟುಕೊಂಡೇ ಚಲಿಸಬೇಕು. ತರಕಾರಿ, ಹಣ್ಣು, ಹೂ ಮಾರಾಟ ಇಲ್ಲಿ ಜೋರಾಗಿರುತ್ತದೆ. ಫುಟ್ಪಾತ್, ರಸ್ತೆ ಎಂಬುದು ಇಲ್ಲಿ ಲೆಕ್ಕಕ್ಕಿಲ್ಲ. ವ್ಯಾಪಾರಿಗಳು ಸೀದಾ ರಸ್ತೆಯಲ್ಲೇ ಸಾಮಗ್ರಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಾರೆ.
ತುಮಕೂರು ಕಡೆಯಿಂದ ಬರುವ ಜನರು ಯಶವಂತಪುರ ಮಾರುಕಟ್ಟೆಗೆ ತೆರಳಲು ಅನುಕೂಲವಾಗುವಂತೆ ಬಸ್ ಸ್ಟಾಪ್ ಪಕ್ಕದಲ್ಲೇ ನಿರ್ಮಿಸಿರುವ ಅಂಡರ್ಪಾಸ್ ಪಾರ್ಕಿಂಗ್ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ವಾಹನಗಳನ್ನು ನಿಲ್ಲಿಸದಂತೆ ನಿರ್ಬಂಧವಿದೆ. ವ್ಯಾಪಾರಿಗಳೂ ಅಂಡರ್ಪಾಸ್ನಲ್ಲಿ ಅಂಗಡಿ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಅಂಡರ್ಪಾಸ್ನಲ್ಲೂ ವ್ಯಾಪಾರ ಶುರು ಮಾಡಿದರೆ ಓಡಾಡುವವರಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.ರೈಲ್ವೆ ನಿಲ್ದಾಣದ ಸಮೀಪ ನಿಗದಿತ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ಅಂಡರ್ಪಾಸ್ನಲ್ಲಿ ಗಾಡಿ ನಿಲ್ಲಿಸುವುದನ್ನು ಇಲ್ಲಿನ ಸ್ಥಳೀಯರು ರೂಢಿಸಿಕೊಂಡಿದ್ದಾರೆ.
ಹತ್ತಾರು ರೈಲುಗಳು ಬಂದುಹೋಗುವ ನಿಲ್ದಾಣಕ್ಕೆ ಪ್ರಯಾಣಿಕರ ಸಂಖ್ಯೆಯೂ ಅಧಿಕ. ರೈಲು ಬಂದಾಗ ಆಟೋ ಹಾಗೂ ಟ್ಯಾಕ್ಸಿಗಳ ಓಡಾಟ ಹೆಚ್ಚು. ಆಗ ರಸ್ತೆಯಲ್ಲಿ ದಟ್ಟಣೆ ಉಂಟಾಗುವುದು ಸಾಮಾನ್ಯ. ಆದರೆ ರಸ್ತೆಯೇ ವ್ಯಾಪಾರದ ಕೇಂದ್ರವಾದಾಗ ವಾಹನಗಳ ಪಾಡು ಹೇಳತೀರದು. ನಡೆದಾಡಲು ಆಗದವರು, ವೃದ್ಧರು ಟ್ಯಾಕ್ಸಿ ಅಥವಾ ಆಟೊಗಳನ್ನೇ ನೆಚ್ಚಿಕೊಂಡಿರುತ್ತಾರೆ. ರೈಲಿನಿಂದ ಇಳಿದು ಬರುವವರು ದೊಡ್ಡ ದೊಡ್ಡ ಲಗೇಜ್ನೊಂದಿಗೆ ನಿಲ್ದಾಣದಿಂದ ಹೊರಬರುತ್ತಾರೆ. ತಮ್ಮ ಸಾಮಗ್ರಿಗಳನ್ನೂ ಸಾಗಿಸಲೂ ಪ್ರಯಾಣಿಕರು ಕಷ್ಟಪಡುವ ದೃಶ್ಯ ಇಲ್ಲಿ ಸಾಮಾನ್ಯ.
ಇಲ್ಲಿನ ಬೀದಿಬದಿ ವರ್ತಕರಿಗೆ ವ್ಯಾಪಾರ ನಡೆಸಲು ಸೂಕ್ತ ಜಾಗ ಕಲ್ಪಿಸುವುದೇ ಈ ಸಮಸ್ಯೆಗೆ ಇರುವ ಮಾರ್ಗ ಎನ್ನುತ್ತಾರೆ ಸಾರ್ವಜನಿಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.