ಅರುಣಾಚಲ ಪಶ್ಚಿಮ ಲೋಕಸಭಾ ಕ್ಷೇತ್ರವು ಈ ಬಾರಿಯೂ ಕದನ ಕಲಿಗಳ ಹೋರಾಟಕ್ಕೆ ಅಣಿಯಾಗಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು ಬಿಜೆಪಿಯು ಕಣಕ್ಕಿಳಿಸಿದರೆ, ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ನಬಂ ತುಕಿ ಅವರನ್ನು ಕಾಂಗ್ರೆಸ್ ಅಖಾಡಕ್ಕಿಳಿಸಿದೆ. ನಬಂ ಅವರು ಕಳೆದ ಚುನಾವಣೆಯಲ್ಲಿ ಕಿರಣ್ ವಿರುದ್ಧ ಸೆಣಸಿ ಎರಡನೇ ಸ್ಥಾನಕ್ಕೆ ಸೀಮಿತರಾಗಿದ್ದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಖ್ಯಸ್ಥರಾಗಿರುವ ಜೆಡಿಯು ಈ ಬಾರಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರುಹಿ ತಗುಂಗ್ ಅವರನ್ನು ಸ್ಪರ್ಧೆಗಿಳಿಸಿ ಚುನಾವಣಾ ಕಣವನ್ನು ಇನ್ನಷ್ಟು ರಂಗೇರಿಸಿದೆ. ಈ ಬಾರಿಯ ಸ್ಪರ್ಧೆಯು ಕಿರಣ್ ಮತ್ತು ನಬಂ ನಡುವಣ ನೇರ ಹಣಾಹಣಿಗೆ ವೇದಿಕೆಯಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಕಿರಣ್ ಅವರು ನಬಂ ವಿರುದ್ಧ ಭಾರಿ ಅಂತರದಿಂದ ಗೆದ್ದಿದ್ದರು. ಈಶಾನ್ಯ ರಾಜ್ಯ ಮಣಿಪುರದಲ್ಲಿನ ಗಲಭೆ ಸೇರಿದಂತೆ ವಿವಿಧ ವಿಚಾರಗಳು ಈ ಕ್ಷೇತ್ರದಲ್ಲಿ ತಮಗೆ ಅನುಕೂಲಕರ ವಾತಾವರಣ ಸೃಷ್ಟಿಸಲಿದೆ ಎಂಬುದು ಕಾಂಗ್ರೆಸ್ ನಿರೀಕ್ಷೆಯಾಗಿದೆ. ಕ್ಷೇತ್ರದ ಇತಿಹಾಸವನ್ನು ಗಮನಿಸಿದರೆ ಇದು ಬಿಜೆಪಿಯ ಭದ್ರಕೋಟೆ ಎನ್ನಬಹುದಾಗಿದೆ. 2004, 2014, 2019ರಲ್ಲಿ ಕಿರಣ್ ಅವರು ಇಲ್ಲಿಂದ ಲೋಕಸಭೆಗೆ ಆಯ್ಕೆಯಾಗಿರುವುದರಿಂದ ಬಿಜೆಪಿಯು ಇದನ್ನು ಗೆಲ್ಲುವ ಕ್ಷೇತ್ರವೆಂದೇ ಪರಿಗಣಿಸಿದೆ.