ಮಂಗಳೂರು: ದಕ್ಷಿಣ ಕನ್ನಡ (ಹಿಂದಿನ ಮಂಗಳೂರು) ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ನ ಜನಾರ್ದನ ಪೂಜಾರಿ ಅವರ ಹೆಸರಲ್ಲಿ ಸತತ ಗೆಲುವು ಮತ್ತು ಸತತ ಸೋಲಿನ ದಾಖಲೆ ಇದೆ.
ಈ ಕ್ಷೇತ್ರದಲ್ಲಿ ಅತಿ ಹೆಚ್ಚುಬಾರಿ ಸ್ಪರ್ಧಿಸಿದ ಕೀರ್ತಿಯೂ ಅವರದ್ದು.
ಒಂಬತ್ತು ಬಾರಿ ಸ್ಪರ್ಧಿಸಿದ್ದ ಅವರು, ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಐದು ಬಾರಿ ಪರಾಭವಗೊಂಡಿದ್ದಾರೆ.
1977ರಲ್ಲಿ ಮೊದಲ ಚುನಾವಣೆಯಲ್ಲೇ ದಾಖಲೆಯ ಶೇ 60.08ರಷ್ಟು ಮತ ಪಡೆದು ಆಯ್ಕೆಯಾಗಿದ್ದ ಅವರು, 1980, 1984, 1989ರ ಚುನಾವಣೆಯಲ್ಲಿ ಸತತ ಗೆಲುವು ಸಾಧಿಸಿದರು.
ಮುಂದಿನ ಮೂರು ಚುನಾವಣೆಗಳಲ್ಲಿ ಅಂದರೆ, 1991, 1996, 1998ರಲ್ಲಿ ಬಿಜೆಪಿಯ ವಿ. ಧನಂಜಯ ಕುಮಾರ್ ವಿರುದ್ಧ ಪರಾಭವಗೊಂಡರು. 2009 ಮತ್ತು 2014ರ ಚುನಾವಣೆಗಳಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್ ವಿರುದ್ಧ ಪರಾಭವವಗೊಂಡರು.
ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವ, ನಂತರ ಗ್ರಾಮೀಣಾಭಿವೃದ್ಧಿ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದರು.