ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಉತ್ತರ ಪ್ರದೇಶ: ಅವರನ್ನು ಬಿಟ್ಟು ಇವರು; ಸಮಾಜವಾದಿ ‘ಸೂತ್ರ‘

ಹತ್ತು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪದೇ ಪದೇ ಬದಲಾವಣೆ ಮಾಡಿದ ಎಸ್‌ಪಿ
Published 6 ಮೇ 2024, 0:10 IST
Last Updated 6 ಮೇ 2024, 0:10 IST
ಅಕ್ಷರ ಗಾತ್ರ

ಸಮಾಜವಾದಿ ಪಕ್ಷವು ಬೇರೆ ಪಕ್ಷಗಳಿಂದ ವಲಸೆ ಬಂದ ಸುಮಾರು 15 ನಾಯಕರಿಗೆ ಈ ಬಾರಿ ಟಿಕೆಟ್‌ ಕೊಟ್ಟಿದೆ. ಜಾತಿ ಸಮೀಕರಣದ ಆಧಾರದಲ್ಲಿ ಟಿಕೆಟ್‌ ಹಂಚಿಕೆ ಮಾಡಲಾಗಿದೆ ಎಂಬುದು ಎಸ್‌ಪಿ ನಾಯಕರ ನುಡಿ

*****

ನವದೆಹಲಿ: ಉತ್ತರ ಪ್ರದೇಶದ ಬದೌನ್‌ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷವು ಮೊದಲಿಗೆ ಮಾಜಿ ಸಂಸದ ಹಾಗೂ ಅಖಿಲೇಶ್‌ ಯಾದವ್‌ ಅವರ ಸೋದರ ಸಂಬಂಧಿ ಧರ್ಮೇಂದ್ರ ಯಾದವ್‌ ಅವರನ್ನು ಕಣಕ್ಕಿಳಿಸಿತು. ಕೆಲವು ದಿನಗಳ ನಂತರ ಪಕ್ಷದ ಹಿರಿಯ ನಾಯಕ ಶಿವಪಾಲ್‌ ಯಾದವ್‌ ಸ್ಪರ್ಧಿಸಲಿದೆ ಎಂದು ಪಕ್ಷ ಪ್ರಕಟಿಸಿತು. ಶಿವಪಾಲ್‌ ಪುತ್ರ ಆದಿತ್ಯ ಯಾದವ್‌ ಹುರಿಯಾಳುವಾಗಲಿದ್ದಾರೆ ಎಂದು ಏಪ್ರಿಲ್‌ 14ರಂದು ಘೋಷಿಸಿತು. 

ಉತ್ತರ ಪ್ರದೇಶದ 62 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಸಮಾಜವಾದಿ ಪಕ್ಷವು ಅಭ್ಯರ್ಥಿ ಬದಲಾವಣೆ ಮಾಡಿದ್ದು ಇದೊಂದೇ ಕ್ಷೇತ್ರದಲ್ಲಿ ಅಲ್ಲ. ಬರೋಬ್ಬರಿ 10 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪದೇ ಪದೇ ಬದಲಾವಣೆ ಮಾಡಿದೆ. ಮಿಶ್ರಿಖ್‌ ಕ್ಷೇತ್ರದಲ್ಲಂತೂ ಐದು ಸಲ ಅಭ್ಯರ್ಥಿಯ ಬದಲಿಸಿದೆ. ಮೊದಲು ಮಾಜಿ ಸಂಸದ ರಾಮಶಂಕರ ಭಾರ್ಗವ್ ಅವರಿಗೆ ಟಿಕೆಟ್‌ ಕೊಟ್ಟಿತು. ಬಳಿಕ ಶಾಸಕ ರಾಮ್‌ಪಾಲ್‌ ಭಾರ್ಗವ ಅವರ ಹೆಸರನ್ನು ಅಖೈರುಗೊಳಿಸಿತು. ನಂತರ ಅವರ ಮಗ ಹಾಗೂ ಸೊಸೆಯ ಸರದಿ. ಕೊನೆಗೆ ಭಾರ್ಗವ ಅವರನ್ನೇ ಕಣಕ್ಕಿಳಿಸಿತು.

ಕಳೆದ ಎರಡು ವರ್ಷಗಳಲ್ಲಿ ಬಹುಜನ ಸಮಾಜ ಪಕ್ಷದ ಹಲವು ನಾಯಕರು ಸಮಾಜವಾದಿ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದಾರೆ. ವಲಸೆ ಬಂದ ಸುಮಾರು 15 ನಾಯಕರಿಗೆ ಈ ಚುನಾವಣೆಯಲ್ಲಿ ಎಸ್‌ಪಿ ಟಿಕೆಟ್‌ ಕೊಟ್ಟಿದೆ. ಜಾತಿ ಸಮೀಕರಣದ ಆಧಾರದಲ್ಲಿ ಟಿಕೆಟ್‌ ಹಂಚಿಕೆ ಮಾಡಲಾಗಿದೆ ಎಂಬುದು ಎಸ್‌ಪಿ ನಾಯಕರ ನುಡಿ. ಹೊರಗಿನವರಿಗೆ ಟಿಕೆಟ್‌ ಕೊಟ್ಟಿದ್ದಕ್ಕೆ ಕಾರ್ಯಕರ್ತರ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಹೀಗಾಗಿ, ಪಕ್ಷವು ಅಭ್ಯರ್ಥಿಗಳ ನಿರಂತರ ಬದಲಾವಣೆ ಮಾಡಿದೆ. ತಳಮಟ್ಟದ ಕಾರ್ಯಕರ್ತರ ಮಾತಿಗೆ ಮನ್ನಣೆ ನೀಡಿ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಪಕ್ಷದ ಹಿರಿಯ ನಾಯಕರು ಸಮಜಾಯಿಷಿ ನೀಡಿದ್ದಾರೆ. ‘ಸಮಾಜವಾದಿ ಪಕ್ಷದ ಹೆಸರನ್ನು ಗೊಂದಲಮಯ ಪಕ್ಷ ಎಂದು ಬದಲಿಸುವುದು ಸೂಕ್ತ’ ಎಂದು ಬಿಜೆಪಿ ಹಾಗೂ ರಾಷ್ಟ್ರೀಯ ಲೋಕದಳದ ನಾಯಕರು ವ್ಯಂಗ್ಯವಾಡಿದ್ದಾರೆ. 

ಎಲ್ಲೆಲ್ಲಿ ಅಭ್ಯರ್ಥಿಗಳ ಬದಲಾವಣೆ? (ಕ್ಷೇತ್ರ; ಬದಲಾವಣೆ ಪ್ರಕ್ರಿಯೆ)

ಮೀರತ್‌;ಭಾನು ಪ್ರತಾಪ್ ಸಿಂಗ್‌, ಅತುಲ್‌ ಪ್ರಧಾನ್‌, ಸುನಿತಾ ವರ್ಮಾ

ಬಾಗ್‌ಪತ್‌;ಮನೋಜ್‌ ಚೌಧರಿ, ಅಮರ್‌ಪಾಲ್‌ ಶರ್ಮಾ

ಗೌತಮ್‌ಬುದ್ಧ ನಗರ;ಡಾ.ಮಹೇಂದ್ರ ನಗರ್‌, ರಾಹುಲ್‌ ಅವಾನಾ, ಡಾ.ಮಹೇಂದ್ರ ನಗರ್‌

ಬದೌನ್‌;ಧರ್ಮೇಂದ್ರ ಯಾದವ್‌, ಶಿವ‍ಪಾಲ್‌ ಯಾದವ್‌, ಆದಿತ್ಯ ಯಾದವ್‌

ಮಿಶ್ರಿಖ್‌;ರಾಮಶಂಕರ್ ಭಾರ್ಗವ, ರಾಮ್‌ಪಾಲ್‌ ರಾಜವಂಶಿ, ಮನೋಜ್‌ ರಾಜವಂಶಿ, ಸಂಗೀತಾ ರಾಜವಂಶಿ, ರಾಮಶಂಕರ್‌ ಭಾರ್ಗವ

ಬಿಜ್ನೋರ್‌;ಯಶ್ವೀರ್ ಸಿಂಗ್‌, ದೀಪಕ್‌ ಸೈನಿ 

ಸುಲ್ತಾನ್‌ಪುರ;ಭೀಮ್‌ ನಿಶಾದ್‌, ರಾಮ್‌ ಭುವಲ್‌ ನಿಶಾದ್‌

ಮೊರಾದಾಬಾದ್‌;ಎಸ್‌.ಟಿ.ಹಸನ್‌, ರುಚಿ ವೀರಾ

ಕನೌಜ್‌;ತೇಜ್‌ ಪ್ರತಾಪ್ ಸಿಂಗ್‌, ಅಖಿಲೇಶ್‌ ಯಾದವ್‌

ಶಹಜಹಾನ್‌ಪುರ;ರಾಜೇಶ್‌ ಕಶ್ಯಪ್‌, ಜ್ಯೋತ್ಸ್ನಾ ಗೊಂಡ್

ಹೊಸ ಸಮೀಕರಣದತ್ತ ಅಖಿಲೇಶ್‌ ಚಿತ್ತ 

ಹಿಂದುಳಿದವರು ಹಾಗೂ ಮುಸ್ಲಿಂ ಮತಗಳ ಸಮೀಕರಣದಿಂದ ಯಶಸ್ಸು ಕಂಡವರು ಮುಲಾಯಂ ಸಿಂಗ್‌ ಯಾದವ್‌. ಹೊಸ ಪೀಳಿಗೆಯ ರಾಜಕಾರಣಿ ಅಖಿಲೇಶ್‌ ಯಾದವ್‌ ಈ ಹಿಂದಿನ ಚುನಾವಣೆಗಳಲ್ಲಿ ಅಪ್ಪನ ಸೂತ್ರವನ್ನೇ ಅನುಸರಿಸಿದ್ದರು. ‘ಮುಸ್ಲಿಂ–ಯಾದವ ಪಕ್ಷ’ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಅಖಿಲೇಶ್‌ ಅವರು ಈ ಸಲ ಕಸರತ್ತು ನಡೆಸಿದ್ದಾರೆ. 2014ರ ಲೋಕಸಭಾ ಚುನಾವಣೆಯಿಂದ ಬಿಜೆಪಿಯ ಸಾಂಪ್ರದಾಯಿಕ ಮತದಾರರಾಗಿರುವ ಪ್ರಬಲವಲ್ಲದ ಜಾತಿಗಳಿಗೆ ಅವಕಾಶ ನೀಡಲು ಅವರು ಪ್ರಯತ್ನ ನಡೆಸಿದ್ದಾರೆ.  ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ ಶೇ 20ರಷ್ಟು ಇದೆ. ಆದರೆ ಸಮಾಜವಾದಿ ಪಕ್ಷವು ಈ ಸಲ ಮುಸ್ಲಿಂ ಸಮುದಾಯದ ನಾಲ್ಕು ಅಭ್ಯರ್ಥಿಗಳಿಗಷ್ಟೇ ಟಿಕೆಟ್‌ ನೀಡಿದೆ. ಶೇ 30ರಷ್ಟು ಅಲ್ಪಸಂಖ್ಯಾತರು ಇರುವ ಮೀರಠ್ ಹಾಗೂ ಮೊರಾದಾಬಾದ್‌ನಂತಹ ಕ್ಷೇತ್ರಗಳಲ್ಲಿ ಹಿಂದೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಯೋಗವನ್ನು ಪಕ್ಷ ಮಾಡಿದೆ.

ಕೆಲವು ಸಾಮಾನ್ಯ ಕ್ಷೇತ್ರಗಳಲ್ಲಿ ದಲಿತ ಸಮುದಾಯದ ಅಭ್ಯರ್ಥಿಗಳಿಗೆ ಮಣೆ ಹಾಕಿದೆ.  ಸಮಾಜವಾದಿ ಪಕ್ಷವನ್ನು ಯಾದವ ಕೇಂದ್ರಿತ ಪಕ್ಷ ಎಂದು ಬಿಜೆಪಿ ಮತ್ತಿತರ ಪಕ್ಷಗಳು ಪದೇ ಪದೇ ಟೀಕಿಸಿವೆ. ಅಖಿಲೇಶ್‌ ಅವರು ಕನೌಜ್‌ನಿಂದ ಪತ್ನಿ ಡಿಂಪಲ್‌ ಯಾದವ್ ಅವರು ಮೈನ್‌ಪುರಿಯಿಂದ ಸ್ಪರ್ಧಿಸುತ್ತಿದ್ದಾರೆ. ಅವರ  ಸಂಬಂಧಿಗಳಾದ ಆದಿತ್ಯ ಅಕ್ಷಯ್‌ ಹಾಗೂ ಧರ್ಮೇಂದ್ರ ಅವರನ್ನು ಹುರಿಯಾಳುಗಳನ್ನಾಗಿ ಮಾಡಲಾಗಿದೆ. ಉಳಿದಂತೆ ಯಾದವ ಸಮುದಾಯದ ಯಾರಿಗೂ ಟಿಕೆಟ್‌ ನೀಡಿಲ್ಲ.  ಎಸ್ಪಿ ಈ ಬಾರಿ ಯಾದವೇತರ ಹಿಂದುಳಿದ ಸಮುದಾಯಗಳಿಗೆ 26 ಟಿಕೆಟ್‌ಗಳನ್ನು ಹಂಚಿಕೆ ಮಾಡಿದೆ. ಕುರ್ಮಿಗಳಿಗೆ 9 ಮೌರ್ಯ ಶಾಕ್ಯ ಹಾಗೂ ಕುಶ್ವಾಹಾ ಸಮುದಾಯಗಳಿಗೆ ಆರು ಹಾಗೂ ನಿಶಾದ್‌ ಸಮುದಾಯಕ್ಕೆ ನಾಲ್ಕು ಟಿಕೆಟ್‌ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT