ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಧಾನಿ ಮೋದಿ, ರಾಹುಲ್‌, ಖರ್ಗೆ ವಿರುದ್ಧದ ದೂರು; ಆಯೋಗದಿಂದ ಇನ್ನೂ ಕ್ರಮವಿಲ್ಲ

Published 14 ಮೇ 2024, 23:44 IST
Last Updated 14 ಮೇ 2024, 23:44 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧದ ದೂರುಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು (ಇ.ಸಿ) ಬಿಜೆಪಿ ಮತ್ತು ಕಾಂಗ್ರೆಸ್‌ ಮುಖ್ಯಸ್ಥರಿಗೆ ನೋಟಿಸ್‌ಗಳನ್ನು ನೀಡಿ ಮೂರು ವಾರಗಳೇ ಕಳೆದರೂ, ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, ‘ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಮತ್ತು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದೆ. ದೂರುಗಳು ಮತ್ತು ಪ್ರತಿ ದೂರುಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ತೆಗೆದುಕೊಳ್ಳುವ ಕುರಿತು ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿದೆ.

ದ್ವೇಷ ಭಾಷಣಕ್ಕೆ ಸಂಬಂಧಿಸಿದ ದೂರುಗಳನ್ನು ಆಧರಿಸಿ ನಡ್ಡಾ ಅವರಿಗೆ ನೋಟಿಸ್ ನೀಡಲಾಗಿತ್ತು. ಭಾಷಾ ಮತ್ತು ಸಾಂಸ್ಕೃತಿಕ ವಿಭಜನೆಯನ್ನು ಸೃಷ್ಟಿಸುವ ಭಾಷಣಗಳನ್ನು ರಾಹುಲ್‌ ಗಾಂಧಿ ಮಾಡಿದ್ದರೆಂಬ ಕಾರಣಕ್ಕೆ ಖರ್ಗೆ ಅವರಿಗೆ ನೋಟಿಸ್ ಕೊಡಲಾಗಿತ್ತು. ಇಬ್ಬರಿಗೂ ಈ ಕುರಿತು ಪ್ರತಿಕ್ರಿಯಿಸುವಂತೆ ಏಪ್ರಿಲ್‌ 25ರಂದು ಸೂಚಿಲಾಗಿತ್ತು. ಆರಂಭದಲ್ಲಿ ಏಪ್ರಿಲ್‌ 29ರವರೆಗೆ ಸಮಯ ನೀಡಲಾಗಿತ್ತು. ಆದರೆ, ಅವರು ಹೆಚ್ಚಿನ ಸಮಯ ಕೋರಿದ್ದರು.

ಸಂಬಂಧಿಸಿದವರಿಂದ ಪ್ರತಿಕ್ರಿಯೆಗಳನ್ನು ಯಾವಾಗ ಸ್ವೀಕರಿಸಲಾಯಿತು ಎಂಬುದನ್ನು ಆಯೋಗ ಸ್ಪಷ್ಟಪಡಿಸಿಲ್ಲ.

ಕಾಂಗ್ರೆಸ್‌ ಮತ್ತು ಬಿಜೆಪಿ ವಿರುದ್ಧ ಪರಸ್ಪರರು ನೀಡಿರುವ ಕೆಲವು ದೂರುಗಳು ಬಾಕಿ ಉಳಿದಿವೆ. ಅವುಗಳು ಕೋಮು, ಜಾತಿ, ಪ್ರಾದೇಶಿಕ ಭಾಷಾ ವಿಭಜನೆ ಅಥವಾ ಸಂವಿಧಾನ ಪಾವಿತ್ರ್ಯದ ಕುರಿತು ಉನ್ನತ ತಾರಾ ಪ್ರಚಾರಕರ ವಿಭಜಕ ಹೇಳಿಕೆಗಳಿಗೆ ಸಂಬಂಧಿಸಿದ್ದಾಗಿವೆ ಎಂದು ಆಯೋಗ ತಿಳಿಸಿದೆ.

ಕೆಲ ಸಂದರ್ಭಗಳಲ್ಲಿ ಪಕ್ಷದ ಮುಖ್ಯಸ್ಥರಿಗೆ ನೋಟಿಸ್‌ ನೀಡುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಆಯೋಗವು, ‘ತಾವು ಮಾಡುವ ಟೀಕೆಗಳಿಗೆ ವ್ಯಕ್ತಿಗಳು ಜವಾಬ್ದಾರರಾಗಿದ್ದರೂ, ಅಂತಹ ಉಲ್ಲಂಘನೆಗಳನ್ನು ಮಾಡದಂತೆ ತಮ್ಮ ತಾರಾ ಪ್ರಚಾರಕರನ್ನು ನಿಯಂತ್ರಿಸುವ ಪ್ರಮುಖ ಜವಾಬ್ದಾರಿ ಪಕ್ಷಗಳಿಗಿದೆ’ ಎಂದು ಹೇಳಿದೆ.

ಆಯೋಗವು ಒಟ್ಟಾರೆ 425 ಪ್ರಮುಖ ದೂರುಗಳನ್ನು ಸ್ವೀಕರಿಸಿದೆ. ಈ ಪೈಕಿ 400 ಪ್ರಕರಣಗಳಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಈ ದೂರುಗಳಲ್ಲಿ 170 ಕಾಂಗ್ರೆಸ್‌, 95 ಬಿಜೆಪಿ ಮತ್ತು 160 ಇತರ ಪಕ್ಷಗಳು, ವ್ಯಕ್ತಿಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಭಾಷಣ ಮಾಡುವ ಉನ್ನತ ನಾಯಕರು ಉತ್ತಮ ನಿದರ್ಶನಗಳನ್ನು ಹಾಕಿಕೊಡಬೇಕು ಎಂದು ನಿರೀಕ್ಷಿಸಲಾಗುತ್ತದೆ ಎಂದು ಆಯೋಗ ಹೇಳಿದೆ.

ಲೋಕಸಭಾ ಕ್ಷೇತ್ರಗಳ ಮಟ್ಟದಲ್ಲಿ ನಡೆಯುತ್ತಿರುವ ವಿವಿಧ ಪಕ್ಷಗಳ, ಅಭ್ಯರ್ಥಿಗಳ ಪ್ರಚಾರವು ಹಿಂಸಾಚಾರ, ಪ್ರಚೋದನೆ ಮುಕ್ತವಾಗಿದೆ. ಗದ್ದಲದ ವಾತಾವರಣವೂ ಅಷ್ಟಾಗಿ ಇಲ್ಲ ಎಂದು ಆಯೋಗ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT