ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪಕ್ಷಗಳ ಬಲ ಕುಗ್ಗಿಸಿರುವ ವೈಮನಸ್ಸು: ಸಂದರ್ಶನದಲ್ಲಿ ಅಮರ್ತ್ಯ ಸೇನ್ ಅಭಿಪ್ರಾಯ

ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ
Published 14 ಏಪ್ರಿಲ್ 2024, 23:30 IST
Last Updated 14 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಕೋಲ್ಕತ್ತ: ತಮ್ಮ ನಡುವಣ ಭಿನ್ನಾಭಿಪ್ರಾಯಗಳಿಂದಾಗಿ ಭಾರತದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟವು ಬಲ ಕಳೆದುಕೊಂಡಿದೆ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್‌ ಪಕ್ಷವು ಸಾಂಸ್ಥಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.

‘ಜಾತಿಗಣತಿ ನಡೆಸುವಂತೆ ಕೇಳಿಬರುತ್ತಿರುವ ಕೂಗನ್ನು ಪರಿಗಣಿಸಬಹುದಾದರೂ ಉತ್ತಮ ಶಿಕ್ಷಣ, ಆರೋಗ್ಯ ಸೌಲಭ್ಯ ಮತ್ತು ಲಿಂಗ ಸಮಾನತೆಯ ಮೂಲಕ ಹಿಂದುಳಿದವರ ಸಬಲೀಕರಣವು ಭಾರತಕ್ಕೆ ಅತಿ ಅಗತ್ಯವಾಗಿದೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಬಿಜೆಪಿಯನ್ನು ಎದುರಿಸುವಲ್ಲಿ ವಿರೋಧ ಪಕ್ಷಗಳ ದೌರ್ಬಲ್ಯ ಏನು ಎಂಬ ಪ್ರಶ್ನೆಗೆ, ‘ಭಾರತದಲ್ಲಿ ವಿರೋಧ ಪಕ್ಷಗಳಲ್ಲಿ ಒಗ್ಗಟ್ಟು ಇಲ್ಲದಿರುವುದರಿಂದ ಅವುಗಳು ಶಕ್ತಿ ಕಳೆದುಕೊಂಡಿವೆ. ಒಗ್ಗಟ್ಟು ಇದ್ದಿದ್ದರೆ ಹೆಚ್ಚಿನ ಬಲದೊಂದಿಗೆ ಬಿಜೆಪಿಯನ್ನು ಎದುರಿಸಬಹುದಿತ್ತು. ಜೆಡಿಯು ಮತ್ತು ಆರ್‌ಎಲ್‌ಡಿ ಹೊರನಡೆದಿರುವ ಕಾರಣ, ವಿರೋಧ ಪಕ್ಷಗಳ ಮೈತ್ರಿಕೂಟದ ಬಲ ಕುಗ್ಗಿದೆ’ ಎಂದು ಉತ್ತರಿಸಿದರು.

‘ಕಾಂಗ್ರೆಸ್‌ ಪಕ್ಷವು ಸಂಘಟನೆಗೆ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಹಲವು ವರ್ಷಗಳ ಭವ್ಯ ಇತಿಹಾಸವು ಆ ಪಕ್ಷಕ್ಕೆ ಸ್ಪೂರ್ತಿಯಾಗಬೇಕು’ ಎಂದು 90 ವರ್ಷದ ಅವರು ತಿಳಿಸಿದರು.

ಭಾರತದಂತಹ ಪ್ರಜಾಸತ್ತಾತ್ಮಕ ದೇಶದ ಪ್ರಜೆಯಾಗಿರುವುದಕ್ಕೆ ಅತೀವ ಹೆಮ್ಮೆಯಿದೆ. ಆದರೆ, ರಾಷ್ಟ್ರದ ಪ್ರಜಾಸತ್ತಾತ್ಮಕ ಸ್ವರೂಪವನ್ನು ಬಲಪಡಿಸಲು ಹೆಚ್ಚು ಶ್ರಮವಹಿಸುವ ಅಗತ್ಯವಿದೆ.
–ಅಮರ್ತ್ಯ ಸೇನ್, ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ

ಬಿಜೆಪಿಯ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸಲಿದೆ ಎಂಬ ವಿರೋಧ ಪಕ್ಷಗಳ ಆರೋಪಗಳ ಕುರಿತು ಪ್ರತಿಕ್ರಿಯಿಸಿ, ‘ಸಂವಿಧಾನ ಬದಲಾಯಿಸುವುದನ್ನು ಸರ್ಕಾರದ ‘ಏಕ–ಧರ್ಮ’ ಕೇಂದ್ರಿತ ನೀತಿಯ ಒಂದು ಭಾಗವಾಗಿ ಭಾವಿಸಬೇಕೇ ಹೊರತು, ಅದರಿಂದ ದೇಶದ ಸಾಮಾನ್ಯ ಜನರಿಗೆ ಯಾವುದೇ ಲಾಭ ಉಂಟಾಗದು’ ಎಂದರು.

ರಾಮಮಂದಿರ ನಿರ್ಮಾಣ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಮೂಲಕ ಹಿಂದೂಗಳನ್ನು ಒಗ್ಗೂಡಿಸಲು ಬಿಜೆಪಿಗೆ ಸಾಧ್ಯವಾಗಲಿದೆಯೇ ಎಂಬ ಪ್ರಶ್ನೆಗೆ, ‘ಭಾರತವು ಜಾತ್ಯತೀತ ಸಂವಿಧಾನವನ್ನು ಹೊಂದಿರುವ ಜಾತ್ಯತೀತ ರಾಷ್ಟ್ರವಾಗಿದೆ. ಹಿಂದೂ ಅಸ್ಮಿತೆಯನ್ನು ಎತ್ತಿಹಿಡಿಯುವುದರಿಂದ ಬಹುಸಂಖ್ಯಾತ ಹಿಂದೂಗಳಿಗೆ ಅನುಕೂಲಕರ ಎನಿಸಬಹುದು. ಆದರೆ ಇದರಿಂದ ಭಾರತದ ಜಾತ್ಯತೀತ ಬೇರುಗಳು ಮತ್ತು ಬಹುಸಂಸ್ಕೃತಿ ಸ್ವರೂಪಕ್ಕೆ ಧಕ್ಕೆ ಉಂಟಾಗಲಿದೆ’ ಎಂದು ಎಚ್ಚರಿಸಿದರು.

ಆರ್ಥಿಕ ನೀತಿ ಬಗ್ಗೆ ಟೀಕೆ

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಅಮರ್ತ್ಯ ಸೇನ್ ಟೀಕಿಸಿದರು. ‘ಭಾರತದಲ್ಲಿ ಆಡಳಿತ ನಡೆಸುತ್ತಿರುವವರು ಶ್ರೀಮಂತರ ಹಿತಾಸಕ್ತಿಗಳನ್ನು ಕಾಪಾಡಲು ಒಲವು ತೋರುವರು. ಅನಕ್ಷರತೆ ಮತ್ತು ಲಿಂಗ ಅಸಮಾನತೆಯಿಂದಾಗಿ ಭಾರತದಲ್ಲಿ ಬಡವರಿಗೆ ಪ್ರಗತಿಯತ್ತ ಮುನ್ನಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT