ಮುಂಬೈ: ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ಅಧಿಕಾರಕ್ಕೇರಿದರೆ, ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮ ಮಂದಿರವನ್ನು ಶುದ್ಧೀಕರಿಸಲಾಗುವುದು ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಶುಕ್ರವಾರ ಹೇಳಿಕೆ ನೀಡಿದ್ದಾರೆ.
'ಅಲ್ಲಿರುವುದು ಶ್ರೀ ರಾಮನ ಮೂರ್ತಿಯಲ್ಲ. ಬಾಲ ರಾಮ ಮೂರ್ತಿ. ಮಂದಿರ ನಿರ್ಮಾಣ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿಷ್ಟಾಚಾರಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ನಾವು ಅದನ್ನು ಧರ್ಮದ ಮೂಲಕ ಸರಿಪಡಿಸುತ್ತೇವೆ' ಎಂದು ಪಟೋಲೆ ಹೇಳಿದ್ದಾರೆ.
'ನಾಲ್ವರು ಶಂಕರಾಚಾರ್ಯರು ಮಂದಿರವನ್ನು ಶುದ್ಧೀಕರಿಸಲಿದ್ದಾರೆ. ದರ್ಬಾರ್ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತೇವೆ' ಎಂದೂ ಹೇಳಿದ್ದಾರೆ.
ಪಟೋಲೆ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಶ್ರೀರಾಮ ಮಂದಿರದಲ್ಲಿ ಜನವರಿ 22ರಂದು ಪ್ರತಿಷ್ಠಾಪಿಸಲಾಗಿರುವ ಬಾಲ ರಾಮನ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದಾರೆ.
ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ದೊರೆತ ಕೃಷ್ಣಶಿಲೆಯನ್ನು ಈ ಮೂರ್ತಿಯ ನಿರ್ಮಾಣಕ್ಕೆ ಬಳಸಲಾಗಿದೆ. ಬಿಲ್ಲು ಮತ್ತು ಬಾಣವನ್ನು ಹಿಡಿದಿರುವ ಐದು ವರ್ಷದ ಮಗುವಿನಂತೆ ಕಾಣುವ ಬಾಲ ರಾಮನ ಮೂರ್ತಿಗೆ ಅಂತಿಮ ರೂಪ ನೀಡಲು 6 ತಿಂಗಳು ತೆಗೆದುಕೊಂಡಿದ್ದರು.