ಹುಬ್ಬಳ್ಳಿ: ‘ಕುಂದಗೋಳದಲ್ಲಿ ಎಂ.ಆರ್. ಪಾಟೀಲ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಮುಂದೇನು ಮಾಡಬೇಕೆಂದು ಬೆಂಬಲಿಗರೊಂದಿಗೆ ಚರ್ಚಿಸಿ ತೀರ್ಮಾನಿಸುವೆ’ ಎಂದು ಕುಂದಗೋಳ ಕ್ಷೇತ್ರದ ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದ ಎಸ್.ಐ. ಚಿಕ್ಕನಗೌಡರ ಹೇಳಿದರು.
ಪಕ್ಷ ಘೋಷಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವ ಕುರಿತು ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ಬೆಂಬಲಿಗರು ಮನೆಯಲ್ಲಿ ಇರಿ ಎನ್ನುತ್ತಾರೊ ಅಥವಾ ವಿಧಾನಸೌಧಕ್ಕೆ ಕಳಿಸುತ್ತಾರೊ ನೋಡಬೇಕು’ ಎಂದರು.
‘ಎಂ.ಆರ್. ಪಾಟೀಲ ಬೆಂಬಲಕ್ಕೆ ಕೇಂದ್ರ, ರಾಜ್ಯ ಹಾಗೂ ಜಿಲ್ಲೆಯ ನಾಯಕರು ಇದ್ದಾರೆ. ನನಗೆ ಸ್ಥಳೀಯ ಕಾರ್ಯಕರ್ತರು ಹಾಗೂ ಬೆಂಬಲಿಗರು ಇದ್ದಾರೆ. ಅವರು ಹೇಳಿದ್ದಕ್ಕೆ ನಾನು ತಲೆ ಬಾಗುವೆ’ ಎಂದು ತಿಳಿಸಿದರು.
ಚಿಕ್ಕನಗೌಡರ ಅವರು ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಸಂಬಂಧಿಯಾಗಿದ್ದಾರೆ. 2008ರಲ್ಲಿ ಕುಂದಗೋಳದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಅದಕ್ಕೂ ಮುಂಚೆ, ಪಕ್ಕದ ಕಲಘಟಗಿ ಕ್ಷೇತ್ರದಲ್ಲಿ ಎರಡು ಸಲ ಬಿಜೆಪಿಯಿಂದ ಗೆದ್ದಿದ್ದರು.