ಬೆಂಗಳೂರು: ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಕರ್ತವ್ಯ ನಿರ್ವಹಿಸಿ, ನಿವೃತ್ತಿ ಅಥವಾ ಸ್ವಯಂ ನಿವೃತ್ತಿ ಬಳಿಕ ರಾಜಕೀಯ ರಂಗ ಪ್ರವೇಶಿಸುವುದು ಹೊಸತೇನಲ್ಲ.
ಅಧಿಕಾರಿ, ಪೊಲೀಸ್, ಎಂಜಿನಿಯರ್, ವೈದ್ಯರಾಗಿದ್ದಾಗ ರಾಜಕಾರಣಿಗಳ ಜೀವನ ಶೈಲಿ, ಅಧಿಕಾರದಲ್ಲಿದ್ದಾಗ ಅವರಿಗಿರುವ ಪ್ರಭಾವ, ಎಂತಹ ಅಧಿಕಾರಿಗಳನ್ನೂ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವ ‘ಅಧಿಕಾರ’ಗಳನ್ನು ಕಂಡವರು, ನಿವೃತ್ತಿ ಬಳಿಕ ‘ಬಿಳಿ ಅಂಗಿ’ ಧರಿಸಿ ಶಕ್ತಿಕೇಂದ್ರದಲ್ಲಿ ಕುಳಿತುಕೊಳ್ಳಲು ಹಂಬಲಿಸುತ್ತಾರೆ. ಐಪಿಎಸ್, ಐಎಎಸ್, ಪೊಲೀಸ್ ಇನ್ಸ್ಪೆಕ್ಟರ್ಗಳಾಗಿದ್ದವರು ಸ್ವಯಂ ನಿವೃತ್ತಿ ಪಡೆದು, ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದು ಉಂಟು. ತಮ್ಮ ಎದುರು ಅಧಿಕಾರದಿಂದ ದಬ್ಬಾಳಿಕೆ ನಡೆಸಿದವರ ಜತೆಗೇ ವಿಧಾನಸಭೆ–ಲೋಕಸಭೆಯಲ್ಲಿ ಕುಳಿತುಕೊಂಡಿದ್ದೂ ಉಂಟು.
ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಈ ಬಾರಿ ಅಂತಹ ಹುರಿಯಾಳುಗಳು ಕಡಿಮೆ. ಈ ಬಾರಿ ವೈದ್ಯ, ಪ್ರಾಧ್ಯಾಪಕ, ಐಎಎಸ್ ಅಧಿಕಾರಿ, ಸೇನೆಯಲ್ಲಿದ್ದವರು ಕಣದಲ್ಲಿದ್ದಾರೆ.