ಬೆಂಗಳೂರು: ‘ದೇವೇಗೌಡರು ರಾಜ್ಯದಿಂದ ಮಾಜಿ ಪ್ರಧಾನಿ ಎಂದು ಹೇಳಲು ಕಾರಣ ಕಾಂಗ್ರೆಸ್ ಪಕ್ಷ. ಗೌಡರಿಗೆ ಕಾಂಗ್ರೆಸ್ ಪಕ್ಷದ ಮೇಲೆ ಋಣ ಇದೆ’ ಎಂದು ವಿಧಾನ ಪರಿಷತ್ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ ಹೇಳಿದ್ದಾರೆ.
‘ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ?’ ಎಂಬ ದೇವೇಗೌಡರ ಹೇಳಿಕೆಯನ್ನು ಖಂಡಿಸಿರುವ ಅವರು, ‘ಕಾಂಗ್ರೆಸ್ 140 ಕೋಟಿ ಜನರ ಮನಸ್ಸಿನಲ್ಲಿದೆ. ಪಕ್ಷಕ್ಕೆ 140 ವರ್ಷಗಳ ಇತಿಹಾಸವಿದೆ’ ಎಂದಿದ್ದಾರೆ.
‘ಕುಟುಂಬ ರಕ್ಷಣೆಗಾಗಿ ಬಿಜೆಪಿ ಜೊತೆ ಕೈ ಜೋಡಿಸಿ ಜಾತ್ಯತೀತ ಸಿದ್ಧಾಂತವನ್ನು ದೇವೇಗೌಡರು ಬಲಿ ಕೊಟ್ಟಿದ್ದಾರೆ. ಜಾತ್ಯತೀತ ಪಕ್ಷ ಎನ್ನುವ ಕಾರಣಕ್ಕೆ ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು. ಜೆಡಿಎಸ್ ಈಗ ಜಾತ್ಯತೀತವಾಗಿ ಉಳಿದಿಲ್ಲ. ಕೋಮುವಾದಿಯಾಗಿ ಪರಿವರ್ತನೆಯಾಗಿದೆ’ ಎಂದು ಟೀಕಿಸಿದ್ದಾರೆ.