ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡ: ಆರ್.ಅಶೋಕ

Published 15 ಮೇ 2024, 11:44 IST
Last Updated 15 ಮೇ 2024, 11:44 IST
ಅಕ್ಷರ ಗಾತ್ರ

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡ ಇದೆ. ಇದನ್ನು ಬಿಜೆಪಿ ಮೇಲೆ ಹೊರಿಸುವ ಪ್ರಯತ್ನವನ್ನು ಕಾಂಗ್ರೆಸ್‌ನ ಹಿರಿಯ ನಾಯಕರು ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರೇವಣ್ಣ ಅವರನ್ನು ಕೂಡಲೇ ಬಂಧಿಸಿದ್ದರೂ, ಚಾಲಕನನ್ನು ಮಾತ್ರ ಬಂಧಿಸಿಲ್ಲ. ಎಸ್ಐಟಿ ಅಧಿಕಾರಿಗಳು ಪಕ್ಷಪಾತ ಧೋರಣೆಯಿಂದ ಕೆಲಸ ಮಾಡುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದಂತೆ ಇಲ್ಲಿ ತಿಮಿಂಗಿಲವೇ ಇದೆ.‌ ಅದನ್ನು ಬಡಿದು ತಿನ್ನಬೇಕಾ ಬೇಡವಾ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ ತೀರ್ಮಾನಿಸಲಿದೆ. ಆದರೆ, ಮಾಜಿ ಪ್ರಧಾನಿ ದೇವೇಗೌಡರ ಮೂಲಕ ಇಡೀ ಒಕ್ಕಲಿಗ ಸಮುದಾಯವನ್ನು ಅಪಮಾನಿಸಬೇಕಿತ್ತೇ ಎಂದು ಜನರು ಮಾತಾಡುತ್ತಿದ್ದಾರೆ. ಆದ್ದರಿಂದ ಬಿಜೆಪಿಯ ಮೇಲೆ ಆರೋಪ ತರುವ ಪ್ರಯತ್ನ ನಡೆದಿದೆ ಎಂದರು.

ತನಿಖೆಯ ಪ್ರತಿ ಮಾಹಿತಿ ಮೊದಲು ಕಾಂಗ್ರೆಸ್ ‌ನಾಯಕರಿಗೆ ತಲುಪುತ್ತಿದೆ.‌ ಎಸ್‌ಐಟಿ ಅಧಿಕಾರಿಗಳು ಕಾಂಗ್ರೆಸ್‌ ನಾಯಕರು ಹೇಳಿದಂತೆ ಕೇಳುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಆ‌ ನಂತರ ಯಾರೆಲ್ಲ ಬಂಧನಕ್ಕೊಳಗಾಗುತ್ತಾರೆ ಎಂದು‌ ನೋಡಲಿ ಎಂದರು.

ಕಾರು ಚಾಲಕ ಎಲ್ಲೋ ನಿಂತು ಸಂದೇಶ ಕಳುಹಿಸುತ್ತಿದ್ದಾನೆ. ಶಾಸಕ ಮಂಜು ಸೇರಿದಂತೆ ಹಲವರ ಮೇಲೆ ಆರೋಪ ಮಾಡಲಾಗಿದೆ. ಕಾಂಗ್ರೆಸ್‌ನವರೇ ಚಾಲಕನನ್ನು ಎಲ್ಲೋ ಇರಿಸಿದ್ದಾರೆ. ಹಾಸನದಲ್ಲಿ ಎಲ್ಲ ಕಡೆ ಪೆನ್‌ಡ್ರೈವ್ ಹಂಚಲಾಗಿದೆ ಎಂದ ಮೇಲೆ ಅದು ಬಿಜೆಪಿ ಕಾರ್ಯಕರ್ತರಿಗೆ ತಲುಪಿರಬಹುದು. ಆದರೆ ಕಾಂಗ್ರೆಸ್ ಕಾರ್ಯಕರ್ತರ ಬಳಿಯೂ ವೀಡಿಯೋ ಇದೆ. ಆ ರೀತಿಯಲ್ಲಿ ನೋಡುವುದಾದರೆ ಕಾಂಗ್ರೆಸ್ ಕಾರ್ಯಕರ್ತರನ್ನು ಕೂಡ ಬಂಧಿಸಬೇಕಿತ್ತು ಎಂದರು.

ಮಾಜಿ ಸಚಿವ ರೇವಣ್ಣ ಜೈಲಿಗೆ ಹೋದಾಗ ಕಾಂಗ್ರೆಸ್ ‌ನಾಯಕರು ಹೆಚ್ಚು ಖುಷಿ ಪಟ್ಟಿದ್ದಾರೆ. ಇದು ವ್ಯವಸ್ಥಿತ ಸಂಚಾಗಿದ್ದು, ಎಲ್ಲರೂ ಟೀಮ್ ಮಾಡಿಕೊಂಡಿದ್ದಾರೆ. ಚುನಾವಣೆಯ ದೃಷ್ಟಿಯಿಂದ ಈ ಕೆಲಸ ಮಾಡಿದ್ದಾರೆ. ತಿಮಿಂಗಿಲ ಆಮ್ಲಜನಕಕ್ಕಾಗಿ ಹೊರಗೆ ಬರಲೇಬೇಕು. ಮುಂದೆ ಇದು ತಿಳಿದುಬರಲಿದೆ ಎಂದರು.

ಫಲಿತಾಂಶದ ಬಳಿಕ ಗೊತ್ತಾಗಲಿದೆ

ಕಳೆದ ಬಾರಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದಾಗ ಕಾಂಗ್ರೆಸ್ ‌ನಾಯಕರು ಏನೂ ಮಾಡಲಿಲ್ಲ. ಆಗ ಬಂದಂತೆ ಮುಂದೆಯೂ ಬಿಟ್ಟು ಬರುತ್ತಾರೆ. ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗುತ್ತದೆ. ಭ್ರಷ್ಟ ಸರ್ಕಾರದ ಪಾಪದ ಕರ್ಮ, ರೈತರ ಆತ್ಮಹತ್ಯೆ, ಮಕ್ಕಳ ಮಾರಾಟ, ಬರಗಾಲದ ಬವಣೆ, ಮೊದಲಾದ ಕಾರಣಗಳಿಂದ ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಬೀಳಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಗಲುಗನಸು ಕಾಣುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ 90 ಕ್ಕೂ ಅಧಿಕ‌ ಶಾಸಕರು ಪಕ್ಷ ಬಿಟ್ಟು ಹೋಗಿದ್ದರು. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾದ ನಂತರ ‌ಕಾಂಗ್ರೆಸ್‌ಗೆ ಗಂಟೆ ಮೂಟೆ ಕಟ್ಟುವುದೇ ಗತಿ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT