ಬೀದರ್: ‘ರಾಜಕೀಯಕ್ಕೆ ಬರಲು ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಇರಲಿಲ್ಲ. ನಾನೇ ಸ್ವಯಂಪ್ರೇರಣೆಯಿಂದ ಬಂದಿದ್ದೇನೆ’ ಎಂದು ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಹೇಳಿದರು.
ಸಮಾಜ ನಮ್ಮ ಮನೆತನಕ್ಕೆ ಸಾಕಷ್ಟು ಕೊಟ್ಟಿದೆ. ವಾಪಸ್ ಕೊಡಲು ಸಮಾಜ ಸೇವೆಗೆ ಬಂದಿದ್ದೇನೆ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಮ್ಮ ತಾತ (ಭೀಮಣ್ಣ ಖಂಡ್ರೆ), ತಂದೆ (ಈಶ್ವರ ಬಿ. ಖಂಡ್ರೆ) ಹಾಗೂ ನನ್ನ ವರ್ಚಸ್ಸು, ನಮ್ಮ ಸರ್ಕಾರ ಕೊಟ್ಟಿರುವ ಗ್ಯಾರಂಟಿಗಳ ವರ್ಚಸ್ಸಿನ ಮೇಲೆ ಚುನಾವಣೆಗೆ ಸ್ಪರ್ಧಿಸುತ್ತಿರುವೆ. ನಾನು 24X7 ಕ್ಷೇತ್ರದಲ್ಲಿ ಇರುತ್ತೇನೆ. ನಾನು ಕಿರಿಯನಾಗಿರುವುದರಿಂದ ಯಾರು ಬೇಕಾದರೂ ಬಂದು ಭೇಟಿ ಮಾಡಬಹುದು ಎಂದರು.
ತಳಮಟ್ಟದಲ್ಲಿ ಸಾಕಷ್ಟು ಸಮಸ್ಯೆಗಳಿರುತ್ತವೆ. ಹಿರಿಯ ಮುಖಂಡರ ಬಳಿಗೆ ಹೋಗಿ ಹೇಳಿಕೊಳ್ಳಲು ಜನ ಹಿಂಜರಿಯುತ್ತಾರೆ. ಆದರೆ, ಯುವಕರ ಜೊತೆಗೆ ಜನ ಬೇಗ ಕನೆಕ್ಟ್ ಆಗಲು ಸಾಧ್ಯವಾಗುತ್ತದೆ. ಬಿಜೆಪಿ ಅಭ್ಯರ್ಥಿ (ಭಗವಂತ ಖೂಬಾ) ಬಗ್ಗೆ ಜನರಿಗೆ ಬಹಳ ಬೇಸರವಿದೆ. ಕ್ಷೇತ್ರದ ಜನ ಹೊಸ ಮುಖ ಬಯಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ದೂರದೃಷ್ಟಿ ಇದ್ದು, ಬರುವ ದಿನಗಳಲ್ಲಿ ಪ್ರಣಾಳಿಕೆಯಲ್ಲಿ ಜನರೆದುರು ಇಡುತ್ತೇನೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರೂ ಆದ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಭೀಮರಾವ ಪಾಟೀಲ, ಗ್ಯಾರಂಟಿ ಯೋಜನಾ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಅಮೃತರಾವ ಚಿಮಕೋಡೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ್, ಮಾಜಿಸಚಿವ ರಾಜಶೇಖರ ಪಾಟೀಲ ಹುಮನಾಬಾದ್, ಮಾಜಿಸಂಸದ ನರಸಿಂಗರಾವ್ ಸೂರ್ಯವಂಶಿ, ಮುಖಂಡರಾದ ಭೀಮಸೇನರಾವ ಶಿಂಧೆ, ಪುಂಡಲೀಕರಾವ್, ಸುಭಾಷ ರಾಥೋಡ್, ಆನಂದ್ ದೇವಪ್ಪ, ದತ್ತು ಮೂಲಗೆ ಹಾಜರಿದ್ದರು.
ಸಾಗರ್ ಖಂಡ್ರೆ ಯುವಕನಾಗಿ, ಕಾನೂನು ಪದವೀಧರನಾಗಿ ಕೋವಿಡ್ ಸಂದರ್ಭದಲ್ಲಿ ನೂರಾರು ಜನ ಬಡವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಕಾಂಗ್ರೆಸ್ ವಿದ್ಯಾರ್ಥಿ ಒಕ್ಕೂಟದಲ್ಲಿ ಪದಾಧಿಕಾರಿ ಪಕ್ಷ ಸಂಘಟನೆ ಮಾಡಿದ್ದಾರೆ. ಜಿಲ್ಲೆಯ ಜನರ ಧ್ವನಿಯಾಗಿ, ಅಭಿವೃದ್ಧಿ ಸಂಕಲ್ಪದೊಂದಿಗೆ ಕಣಕ್ಕಿಳಿದಿದ್ದಾರೆ.–ಈಶ್ವರ ಬಿ. ಖಂಡ್ರೆ, ಪರಿಸರ ಸಚಿವ
ಅಲೆಗ್ಸಾಂಡರ್ 18 ವರ್ಷಕ್ಕೆ ರಾಜನಾಗಿದ್ದ, 33 ವರ್ಷಕ್ಕೆ ಸತ್ತಿದ್ದ. ಆದರೆ, ಅವನ ಕೊಡುಗೆ ಅಸಾಧಾರಣ. ಸಾಗರ್ ಖಂಡ್ರೆ ವಯಸ್ಸು ಕಿರಿದಾಗಿದ್ದರೂ ಉತ್ತಮ ಗುಣಗಳನ್ನು ಹೊಂದಿದ್ದಾರೆ.
–ಅಶೋಕ್ ಖೇಣಿ, ಮಾಜಿಶಾಸಕ
ಸುದೀರ್ಘ ಚರ್ಚೆ ನಡೆಸಿದ ನಂತರವೇ ಸಾಗರ್ ಖಂಡ್ರೆ ಅವರನ್ನು ಕಣಕ್ಕಿಳಿಸಲಾಗಿದೆ. ಅವರ ಪರ ಎಲ್ಲರೂ ಕೆಲಸ ಮಾಡಲಿದ್ದಾರೆ. ಯುವಕರಿದ್ದರೆ ಜಾಸ್ತಿ ಓಡಾಡಿ ಕೆಲಸ ಮಾಡಬಹುದು.
–ವಿಜಯ್ ಸಿಂಗ್, ಮಾಜಿ ವಿಧಾನ ಪರಿಷತ್ ಸದಸ್ಯ
ಬೀದರ್ ಜಿಲ್ಲೆ ಹಾಗೂ ದೇಶಕ್ಕೆ ಖಂಡ್ರೆ ಮನೆತನದ ಕೊಡುಗೆ ಬಹಳ ದೊಡ್ಡದಿದೆ. ಎಲ್ಎಲ್ಬಿ ಪದವಿ ಓದಿರುವ ಸಾಗರ್ ಖಂಡ್ರೆಯವರಿಗೆ ಕಾನೂನಿನ ತಿಳಿವಳಿಕೆ ಇದೆ. ಇಂತಹವರು ರಾಜಕೀಯಕ್ಕೆ ಬಂದರೆ ಉತ್ತಮ. ಜನ ಕೂಡ ಹೊಸ ಮುಖ ಬಯಸುತ್ತಿದ್ದಾರೆ.
–ರಹೀಂ ಖಾನ್, ಪೌರಾಡಳಿತ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.