ಬಳ್ಳಾರಿ: ‘ನಮ್ಮ ತಾಕತ್ತು ಎಷ್ಟಿದೆಯೋ ಅಷ್ಟನ್ನು ಬಳಸುತ್ತೇವೆ. ತಂತ್ರ ಮಾಡುತ್ತೇವೆ. ಬಿಜೆಪಿಯಂತೆ ಕುತಂತ್ರ ಮಾಡುವುದಿಲ್ಲ. ಈ ಚುನಾವಣೆಯಲ್ಲಿ ಶ್ರೀರಾಮುಲು ಅವರನ್ನು ಸೋಲಿಸುತ್ತೇವೆ. ಅವರು ಸೋಲಿಗೆ ಸಿದ್ಧವಾಗಿದ್ದಾರೆ’ ಎಂದು ಯುವ ಸಬಲೀಕರಣ, ಕ್ರೀಡೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಶಪತ ಮಾಡಿದ್ದಾರೆ.
ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇಲೇರಿದವನು ಕೆಳಗಿಳಿಯಲೇ ಬೇಕು. ಇದು ಪ್ರಕೃತಿ ನಿಯಮ. ಎದುರಾಳಿಯನ್ನು ಸೋಲಿಸಲು ನಾವು ಏನನ್ನಾದರೂ ಮಾಡುತ್ತೇವೆ. ಅದನ್ನು ಷಡ್ಯಂತ್ರ ಎನ್ನಲಾಗದು. ಬಿಜೆಪಿಯಂತೆ ನಾವು ಕುತಂತ್ರ ಮಾಡುವುದಿಲ್ಲ. ನಮ್ಮೆಲ್ಲ ಶಕ್ತಿಯನ್ನು ಪ್ರಯೋಗ ಮಾಡುತ್ತೇವೆ. ಶ್ರೀರಾಮುಲುಗೆ ಸೋಲುಣಿಸುತ್ತೇವೆ’ ಎಂದು ಅವರು ಹೇಳಿದರು.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ‘ನನ್ನನ್ನು ಸೋಲಿಸಲು ಕಾಂಗ್ರೆಸ್ ಷಡ್ಯಂತ್ರ ಮಾಡಿದೆ. ಪಂಚಾಯಿತಿಗೊಬ್ಬ ಮಂತ್ರಿಯನ್ನು ನಿಯೋಜಿಸಿದೆ’ ಎಂದು ಆರೋಪಿಸಿದ್ದರು. ಶ್ರೀರಾಮುಲು ಅವರ ಈ ಹೇಳಿಕೆಗೆ ಸಚಿವ ನಾಗೇಂದ್ರ ತಿರುಗೇಟು ನೀಡಿದರು.