ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರಲ್ಲ, ನೂರು ‘ಸುಮಲತಾ’ ಬರಲಿ: ಸಿ.ಎಂ, ಡಿಕೆಶಿ ವಿರುದ್ಧ ಸುಮಲತಾ ಆಕ್ರೋಶ

ಬಿಎಸ್‌ವೈ ತವರಿನಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಚಾರ, ಸಿ.ಎಂ, ಡಿಕೆಶಿ ವಿರುದ್ಧ ಆಕ್ರೋಶ
Last Updated 2 ಮೇ 2019, 12:01 IST
ಅಕ್ಷರ ಗಾತ್ರ

ಮಂಡ್ಯ: ‘ಸುಮಲತಾ ಹೆಸರಿನ ಮೂವರಲ್ಲ, ನೂರು ಅಭ್ಯರ್ಥಿಗಳು ಬಂದರೂ ಪ್ರಜ್ಞಾವಂತ ಮತದಾರರು ತಮಗೆ ಬೇಕಾದವರಿಗೆ ಮತ ಹಾಕುತ್ತಾರೆ. ಕುತಂತ್ರ ರಾಜಕಾರಣಕ್ಕೆ ಜನರು ಏ.18ರಂದು ತಕ್ಕ ಉತ್ತರ ನೀಡುತ್ತಾರೆ’ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಬುಧವಾರ ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತವರು, ಕೆ.ಆರ್‌.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಪ್ರಚಾರ ನಡೆಸಿ ಅವರು ಮಾತನಾಡಿದರು.

‘ನನ್ನ ಹೆಸರಿನ ಮೂವರು ಮಹಿಳೆಯರನ್ನು ಹುಡುಕಿ ನಾಮಪತ್ರ ಹಾಕಿಸಿದ್ದಾರೆ. ಮಹಿಳೆಯರಿಗೆ ಇನ್ನೊಬ್ಬ ಮಹಿಳೆಯ ನೋವು ಅರ್ಥವಾಗುತ್ತದೆ. ಜಿಲ್ಲೆಯ ಜನರು ಮುಠ್ಠಾಳರಲ್ಲ, ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕುತಂತ್ರದಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯವಿಲ್ಲ. ಬೇಕಿದ್ದರೆ ಅವರ ಅಭ್ಯರ್ಥಿಯ ಹೆಸರನ್ನೂ ಸುಮಲತಾ ಎಂದೇ ಬದಲಾಯಿಸಿಕೊಳ್ಳಲಿ’ ಎಂದು ಸವಾಲು ಹಾಕಿದರು.

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್‌ ಹಾವು–ಮುಂಗಿಸಿಯಂತೆ ಕಿತ್ತಾಡುತ್ತಿದ್ದರು. ಆದರೆ ಈಗ ನಿಜವಾಗಿ ದುಡಿಯುವ ಜೋಡೆತ್ತು ಎನ್ನುತ್ತಿದ್ದಾರೆ. ನನ್ನ ಮಕ್ಕಳಾದ ಯಶ್‌, ದರ್ಶನ್‌ ಅವರಿಗೆ ತಾವು ಯಾರ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಎಂಬ ಅರಿವು ಇದೆ. ಯಾರು, ಎಷ್ಟೇ ಬೆದರಿಕೆ ಹಾಕಿದರೂ ಅವರು ನನ್ನ ಜೊತೆ ನಿಲ್ಲುತ್ತಾರೆ. ನಾನು ಹೋದ ಕಡೆಯಲ್ಲಿ ಜನರು ಪ್ರೀತಿಯಿಂದ ಬರುತ್ತಾರೆ. ನಾನು ಜನರನ್ನು ದುಡ್ಡು ಕೊಟ್ಟು ಕರೆಸುತ್ತಿಲ್ಲ. ಅವರೆಲ್ಲಾ ಸ್ವಾಭಿಮಾನಿಗಳಾಗಿದ್ದು ನನ್ನ ಏಕಾಂಗಿ ಹೋರಾಟಕ್ಕೆ ಕೈ ಜೋಡಿಸುತ್ತಾರೆ’ ಎಂದರು.

ಹೈಕಮಾಂಡ್‌ ಸೂಚನೆ ಮೀರಿ ಕಾಂಗ್ರೆಸ್‌ ಕಾರ್ಯಕರ್ತರು ಸುಮಲತಾ ಪ್ರಚಾರದಲ್ಲಿ ಪಾಲ್ಗೊಂಡರು. ಬಿಜೆಪಿ ಕಾರ್ಯಕರ್ತರೂ ಸುಮಲತಾರಿಗೆ ಬೆಂಬಲ ವ್ಯಕ್ತಪಡಿಸಿದರು. ಸುಮಲತಾ ಬೂಕನಕೆರೆ ಗ್ರಾಮದ ಗೋಗುಲಮ್ಮ ದೇವಿಗೆ ಪೂಜೆ ಸಲ್ಲಿಸಿದರು. ಬಿಜೆಪಿ ಕಾರ್ಯಕರ್ತರೊಬ್ಬರು ಸುಮಲತಾ ಪರ ದೇವಾಲಯದ ಸುತ್ತಾ ಉರಳು ಸೇವೆ ಮಾಡಿದರು.‌

ಮಾಜಿ ಶಾಸಕ ಬೆಂಬಲ:ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಎಚ್‌.ವಿ.ರಾಮು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ‘ಜಿಲ್ಲೆಯ ಶೇ 95ರಷ್ಟು ಕಾಂಗ್ರೆಸ್‌ ಕಾರ್ಯಕರ್ತರು ಸುಮಲತಾ ಅವರಿಗೆ ಬಂಬಲ ನೀಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಮುಖಂಡರು ಮೃತಪಟ್ಟಾಗ ಅವರ ಪತ್ನಿಯರಿಗೆ ಟಿಕೆಟ್‌ ಕೊಟ್ಟ ಸಂಪ್ರದಾಯವಿದೆ. ಅದರಂತೆ ಕಾಂಗ್ರೆಸ್‌ ಪಕ್ಷ ಸುಮಲತಾ ಅವರಿಗೆ ಟಿಕೆಟ್‌ ನೀಡಬೇಕಾಗಿತ್ತು. ಹೊರಗಿನ ಅಭ್ಯರ್ಥಿಗೆ ನಾವು ಬೆಂಬಲ ನೀಡುವುದಿಲ್ಲ. ಮಂಡ್ಯ ಸ್ವಾಭಿಮಾನದ ಸಂಕೇತವಾಗಿರುವ ಸುಮಲತಾ ಅವರಿಗೆ ಬೆಂಬಲ ನೀಡುತ್ತೇವೆ’ ಎಂದರು.

ಗೋಗಾಲಮ್ಮ ದೇವಿಗೆ ವಿಶೇಷ ಪೂಜೆ
ಬೂಕನಕೆರೆಯ ಗ್ರಾಮದೇವತೆ ಆದಿಶಕ್ತಿ ಗೋಗಾಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಸುಮಲತಾ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ, ರೋಡ್‌ ಷೋ ನಡೆಸಿದರು. ಇದರಲ್ಲಿ ಕಾಂಗ್ರೆಸ್ ಮುಖಂಡ ಬಿ.ಟಿ.ವೆಂಕಟೇಶ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬೂಕಹಳ್ಳಿ ಮಂಜು, ಪ್ರಮೀಳಾ ವರದರಾಜೇಗೌಡ, ಬಳ್ಳೇಕೆರೆ ವರದರಾಜೇಗೌಡ, ಮೀನಾಕ್ಷಿ ಪುಟ್ಟರಾಜು, ವಿಜಯಲಕ್ಷ್ಮಿ, ಅಂಗಡಿ ನಾಗರಾಜು ಪಾಲ್ಗೊಂಡಿದ್ದರು.

ಬಲ್ಲೇನಹಳ್ಳಿ, ಬೂಕನಕೆರೆ, ಗಂಜಿಗೆರೆ, ಬಣ್ಣೇನಹಳ್ಳಿ, ಐಚನಹಳ್ಳಿ, ಸೋಮನಹಳ್ಳಿ, ಆಲಂಬಾಡಿ ಕಾವಲು, ಅಕ್ಕಿಹೆಬ್ಬಾಳು ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೋಡ್ ಷೋ ನಡೆಸಿದ ಸುಮಲತಾ ಮತ ಯಾಚಿಸಿದರು.

‘ಸುಮಲತಾ’ ನಾಮಪತ್ರ ವಾಪಸ್‌ ಇಂದು!
ಕಣದಲ್ಲಿರುವ ನಾಲ್ವರು ಸುಮಲತಾ ಹೆಸರಿನ ಅಭ್ಯರ್ಥಿಗಳಲ್ಲಿ ಕೆ.ಆರ್‌.ಪೇಟೆ ತಾಲ್ಲೂಕು, ಗೊರವಿ ಗ್ರಾಮದ ಸುಮಲತಾ ಮಂಜೇಗೌಡ ಗುರುವಾರ ನಾಮಪತ್ರ ವಾಪಸ್‌ ಪಡೆಯಲಿದ್ದಾರೆ. ಅವರ ಪತಿ ಮಂಜೇಗೌಡ ಈ ವಿಷಯ ತಿಳಿಸಿದ್ದಾರೆ.

‘ನಾನು ಅಂಬರೀಷ್‌ ಹಾಗೂ ದರ್ಶನ್‌ ಅವರ ಅಪ್ಪಟ ಅಭಿಮಾನಿ. ಯಾರದೋ ಮಾತು ಕೇಳಿ ನನ್ನ ಪತ್ನಿ ನಾಮಪತ್ರ ಸಲ್ಲಿಸಿದ್ದಾಳೆ. ಗುರುವಾರ ಪತ್ನಿಯೊಂದಿಗೆ ತೆರಳಿ ನಾಮಪತ್ರ ವಾಪಸ್‌ ಪಡೆಯುತ್ತೇವೆ. ಬೂಕನಕೆರೆಯಲ್ಲಿ ಸುಮಲತಾ ಅವರನ್ನು ಭೇಟಿ ಮಾಡಿ ಈ ವಿಚಾರ ತಿಳಿಸಿದ್ದೇನೆ. ನಾವು ಸುಮಲತಾ ಅವರನ್ನು ಬೆಂಬಲಿಸುತ್ತೇವೆ’ ಎಂದು ಮಂಜೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT