ಧನುಷ್ ಹಾಗೂ ಮಂಜು ವಾರಿಯರ್ ಮುಖ್ಯಪಾತ್ರಗಳಲ್ಲಿ ಅಭಿನಯಿಸಿರುವ ತಮಿಳಿನ ‘ಅಸುರನ್’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಭಾರಿ ಹಿಟ್ ಗಳಿಸಿದ್ದ ಚಿತ್ರ. ಇದು ಈಗ ತೆಲುಗಿಗೆ ರಿಮೇಕ್ ಆಗುತ್ತಿದ್ದು, ಇದರಲ್ಲಿ ಮುಖ್ಯಪಾತ್ರವನ್ನು ವಿಕ್ಟರಿ ವೆಂಕಟೇಶ್ ನಿರ್ವಹಿಸಲಿದ್ದಾರೆ.
ಇಂತಹ ದೊಡ್ಡ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಕೀರ್ತಿ ಸುರೇಶ್ ನಿರಾಕರಿಸಿದ್ದಾರೆ ಎಂಬ ಸುದ್ದಿ ಸಿನಿವಲಯದಲ್ಲಿ ಕೇಳಿಬರುತ್ತಿದೆ. ಮೂಲ ಚಿತ್ರದಲ್ಲಿ ಮಂಜು ವಾರಿಯರ್ ನಿರ್ವಹಿಸಿದ ಪಾತ್ರಕ್ಕೆ ಕೀರ್ತಿ ಸುರೇಶ್ ಅವರ ಜೊತೆ ಮಾತುಕತೆ ನಡೆಸಲಾಗಿತ್ತು. ಚಿತ್ರತಂಡ ಅವರನ್ನು ಭೇಟಿಯಾಗಿ ನಟಿಸುವಂತೆ ಕೇಳಿಕೊಂಡಿತ್ತು. ಆದರೆ ಕೀರ್ತಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿಲ್ಲ. ಇದಕ್ಕೆ ಏನು ಕಾರಣ ಎಂಬುದನ್ನು ಅವರು ಬಹಿರಂಗ ಮಾಡಿಲ್ಲ.
ಕೀರ್ತಿ ನಟಿಸಲ್ಲ ಎಂದ ಬಳಿಕ ಚಿತ್ರತಂಡ ನಟಿ ಶ್ರೀಯಾ ಶರಣ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದೆ. ಸದ್ಯ ಚಿತ್ರದ ತಯಾರಿ ಅಂತಿಮ ಹಂತದಲ್ಲಿದೆ.
ಸದ್ಯ ಕೀರ್ತಿ ಸುರೇಶ್ ಮುಖ್ಯಪಾತ್ರದಲ್ಲಿ ನಟಿಸಿರುವ ‘ನಿಶ್ಶಬ್ಧಂ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.