ಐಪಿಎಲ್ ಹಬ್ಬದ ಆರಂಭದ ದಿನವೇ ಚಂದನವನದ ತೆರೆಗಳಲ್ಲಿ ಇಂದು(ಮಾರ್ಚ್ 22)ಐದಾರು ಸಿನಿಮಾಗಳು ತೆರೆಕಾಣುತ್ತಿವೆ.
ಲೈನ್ಮ್ಯಾನ್: ಹಳ್ಳಿಯೊಂದರಲ್ಲಿ ಬದಲಾವಣೆ ತಂದ ಲೈನ್ಮ್ಯಾನ್ ಒಬ್ಬನ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ಪರ್ಪಲ್ ರಾಕ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಈ ಚಿತ್ರವು ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗಿದೆ. ಚಾಮರಾಜನಗರದ ಚಂದಕವಾಡಿಯಲ್ಲಿ ಇಡೀ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಇತ್ತೀಚೆಗೆ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಲ್ಲೂ ಈ ಚಿತ್ರ ಪ್ರದರ್ಶನ ಕಂಡಿತ್ತು. ತೆಲುಗಿನ ನಟ ತ್ರಿಗುಣ್ ಈ ಚಿತ್ರದ ನಾಯಕನಾಗಿದ್ದು, ಕಾಜಲ್ ಕುಂದರ್, ಬಿ.ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಕಮಲ ತಾರಾಬಳಗದಲ್ಲಿದ್ದಾರೆ.
ರಾಕ್ಷಸತಂತ್ರ: ಮೇಘಾ ಅಕ್ಷರಾ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವು, ಕಂಪ್ಯೂಟರ್ ಸ್ಕ್ರೀನ್ ಬೇಸ್ ಹಾರರ್ ಕಥಾಹಂದರ ಹೊಂದಿದೆ. ಐದು ಜನ ಸ್ನೇಹಿತರು ವಿಡಿಯೋ ಕಾನ್ಫರೆನ್ಸ್ ಕಾಲ್ನಲ್ಲಿ ವಿಚಿತ್ರವಾದ ವಿಡಿಯೊವೊಂದನ್ನು ನೋಡುತ್ತಾರೆ. ಅದರಿಂದ ಮುಂದೇನಾಗುತ್ತದೆ ಎನ್ನುವುದು ಚಿತ್ರದ ಕಥೆ. ಈ ಚಿತ್ರದ ತಾರಾಗಣದಲ್ಲಿ ರಕ್ಷಿತಾ ನಾಗರಾಜು, ಸುಖೇಶ್ ಆನಂದ್, ರಕ್ಷಿತಾ ಮಲ್ಲಿಕ್, ತಿಲಕ್ ಕುಮಾರ್ ಹಾಗೂ ಮೇಘಾ ಅಕ್ಷರಾ ನಟಿಸಿದ್ದಾರೆ.
ತೂತ್ ಕಾಸು: ಹಂಸಲೇಖ ಅವರ ಮಾರ್ಗದರ್ಶನದಲ್ಲಿ ಪಳಗಿದ ಒಂದಿಷ್ಟು ಜನರು ಸೇರಿ ಮಾಡಿದ ಸಿನಿಮಾವಿದು. ಕಾಮಿಡಿ ಜಾನರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ರವಿ ತೇಜಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾ. ಚಿತ್ರದಲ್ಲಿ ನಾಯಕನಾಗಿ ವರುಣ್ ದೇವಯ್ಯ ನಟಿಸಿದ್ದು, ನಾಯಕಿಯರಾಗಿ ಪ್ರಿಷಾ ಹಾಗೂ ಪ್ರೇರಣ ಭಟ್ ಬಣ್ಣಹಚ್ಚಿದ್ದಾರೆ. ‘ತೂತ್ ಕಾಸು’ 1942ರಿಂದ 1947ರವರೆಗೆ ಚಲಾವಣೆಯಲ್ಲಿದ್ದ ನಾಣ್ಯ. ಸ್ವಾತಂತ್ರ್ಯ ನಂತರ ಇದರ ಚಲಾವಣೆ ನಿಂತಿತು. ಸಿನಿಮಾದಲ್ಲಿ ಇದೊಂದು ಕೋಡ್ ವರ್ಡ್ ಆಗಿ ಬಳಸಲಾಗಿದೆ ಎಂದಿದೆ ಚಿತ್ರತಂಡ.
ದಿಲ್ಖುಷ್: ರೊಮ್ಯಾಂಟಿಕ್ ಕಾಮಿಡಿ ಕಥಾಹಂದರದ ಈ ಸಿನಿಮಾವನ್ನು ಪ್ರಮೋದ್ ಜಯ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಸಿಂಪಲ್ ಸುನಿ ಬಳಿ ಕಾರ್ಯನಿರ್ವಹಿಸಿರುವ ಪ್ರಮೋದ್ ಜಯ ಅವರಿಗೆ ಇದು ಚೊಚ್ಚಲ ಚಿತ್ರ. ರಂಜಿತ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಸ್ಪಂದನ ಸೋಮಣ್ಣ ಚಿತ್ರದ ನಾಯಕಿ. ರಂಗಾಯಣ ರಘು, ಧರ್ಮಣ್ಣ ಕಡೂರು, ರವಿ ಭಟ್, ಅರುಣ ಬಾಲರಾಜ್ ಚಿತ್ರದ ತಾರಾಬಳಗದಲ್ಲಿದ್ದಾರೆ.
ತ್ರಿಗುಣ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.