ಈ ಕುರಿತು ಒಂದುನಿಮಿಷದ ವಿಡಿಯೊ ಮಾಡಿರುವ ಪ್ರಜ್ವಲ್ ಅದನ್ನು ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಪ್ರಜ್ವಲ್ ಹೇಳಿರುವುದು ಹೀಗೆ‘ಎಲ್ಲರಿಗೂ ನಮಸ್ಕಾರ, ನಾನು ವಿಡಿಯೊ ಮಾಡುತ್ತಿರುವ ಕಾರಣ ಏನೆಂದರೆ ಜುಲೈ 4ಕ್ಕೆ ನನ್ನ ಹುಟ್ಟುಹಬ್ಬ. ಕಳೆದ ಬಾರಿ ಹುಟ್ಟುಹಬ್ಬದ ಸಮಯದಲ್ಲಿ ನಾನೊಂದು ಮನವಿ ಮಾಡಿದ್ದೆ. ಆ ಮನವಿಯನ್ನು ನೀವು ಮನ್ನಿಸಿದ್ದೀರಿ. ಹಾರಗಳು, ಕೇಕ್ ಬೇಡ. ನಿಮ್ಮಿಂದ ಆದಷ್ಟು ವಿದ್ಯಾರ್ಥಿಗಳು ಹಾಗೂ ಶಾಲೆಗಳಿಗೆ ಸಹಾಯ ಮಾಡಿ ಎಂದಿದ್ದೆ. ಆ ನಿಟ್ಟಿನಲ್ಲಿ ನಾನು ಕೂಡ ಒಂದು ಶಾಲೆಯನ್ನು ದತ್ತು ತೆಗೆದುಕೊಂಡಿದ್ದೆ. ಈ ಬಾರಿ ಕೊರೊನಾ ಹೆಮ್ಮಾರಿ ಎಲ್ಲರಿಗೂ ತೊಂದರೆ ನೀಡುತ್ತಿದೆ. ಹಾಗಾಗಿ ಗುಂಪಲ್ಲಿ ಸೇರುವುದು ಒಳ್ಳೆಯದಲ್ಲ. ಆ ಕಾರಣಕ್ಕೆ ನಾನು ಈ ಬಾರಿ ನಿಮ್ಮೆಲ್ಲರನ್ನೂ ಭೇಟಿ ಮಾಡಲು ಸಾಧ್ಯವಿಲ್ಲ.
ಕಳೆದ ಬಾರಿ ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿಯಿಂದ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡಿದ್ದೀರಿ, ಅನೇಕ ಶಾಲೆಗಳಿಗೆ ಸಹಾಯ ಮಾಡಿದ್ದೀರಿ. ಈ ಬಾರಿ ಕೊರೊನಾದಿಂದ ಎಲ್ಲರಿಗೂ ಸಾಕಷ್ಟು ಕಷ್ಟ ಇದೆ. ನೀವು ನನ್ನ ಮೇಲೆ ಪ್ರೀತಿ ಇಟ್ಟು ಹಾರ, ಕೇಕ್ ತರುವುದು ಹಾಗೂ ಬಂದು ಭೇಟಿ ಮಾಡುವ ಬದಲು ಅದೇ ಹಣದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ರೇಷನ್ ಕಿಟ್ಗಳನ್ನು ನೀಡಿ. ಕೊರೊನಾದಿಂದ ಸಮಸ್ಯೆ ಅನುಭವಿಸುತ್ತಿರುವವರಿಗೆ ಸಾಕಷ್ಟು ರೀತಿಯಲ್ಲಿ ಸಹಾಯ ಮಾಡಬಹುದು. ಅದನ್ನು ಮಾಡಿ, ಮುಂದಿನ ವರ್ಷ ಖಂಡಿತ ನಿಮ್ಮೆಲ್ಲರನ್ನು ಭೇಟಿ ಮಾಡುತ್ತೇನೆ. ಎಲ್ಲರೂ ಆರೋಗ್ಯವಾಗಿರಿ ಸುರಕ್ಷಿತರಾಗಿರಿ. ನಿಮ್ಮ ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳಿ. ಒಳ್ಳೆದಾಗ್ಲಿ’ ಎಂದು ವಿನಂತಿಸಿಕೊಂಡಿದ್ದಾರೆ. ಆ ಮೂಲಕ ಸಾಮಾಜಿಕ ಕಳಕಳಿ ತೋರಿದ್ದಾರೆ ಪ್ರಜ್ವಲ್.