ಬೆಂಗಳೂರು: ಕನ್ನಡದ ಹಿರಿಯ ನಟಿ ಭಾರ್ಗವಿ ನಾರಾಯಣ್ (84) ಅವರು ಸೋಮವಾರ ಸಂಜೆ 7:30ಕ್ಕೆ ನಿಧನರಾದರು.
ಸಿನಿಮಾ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಭಾರ್ಗವಿ ನಾರಾಯಣ್ ಅವರು ಸಹಜ ಅಭಿನಯದಿಂದ ಗುರುತಿಸಿಕೊಂಡವರು. ಅವರ ಸಾವಿನ ಕುರಿತು ಅವರ ಮೊಮ್ಮಗಳು, ನಟಿ ಸಂಯುಕ್ತಾ ಹೊರನಾಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಎರಡು ಕನಸು, ಹಂತಕರ ಸಂಚು, ಪಲ್ಲವಿ ಅನುಪಲ್ಲವಿ, ಬಾ ನಲ್ಲೆ ಮಧುಚಂದ್ರಕೆ, ವಂಶವೃಕ್ಷ, ಪ್ರೊಫೆಸರ್ ಹುಚ್ಚುರಾಯ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2019ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಭಾರ್ಗವಿ ಅವರು 600ಕ್ಕೂ ಹೆಚ್ಚು ನಾಟಕಗಳ ಪ್ರದರ್ಶನ ನೀಡಿದ್ದಾರೆ.
ಸುಮಾರು ಎರಡು ವರ್ಷಗಳಿಂದ ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಸೊಂಟದ ಮೂಳೆ ಮುರಿತಕ್ಕೊಳಗಾಗಿದ್ದರು. ಸಂಜೆ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದ ಅವರು ಬಳಲಿದಂತೆ ಕಂಡುಬಂದರು. ನಮ್ಮ ಜೊತೆ ಕೆಲ ಮಾತುಗಳನ್ನಾಡಿ ಸಂಜೆ 7.30ರ ವೇಳೆಗೆ ಕೊನೆಯುಸಿರೆಳೆದರು ಎಂದು ಅವರ ಪುತ್ರ, ನಟ ಪ್ರಕಾಶ್ ಬೆಳವಾಡಿ ತಿಳಿಸಿದರು.
ಭಾರ್ಗವಿ ಅವರ ದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾನ ಮಾಡಲಾಗುವುದು. ಈ ಸಂಬಂಧ ಭಾರ್ಗವಿ ಅವರು ಬಹಳ ಹಿಂದೆಯೇ ಸಮ್ಮತಿ ನೀಡಿದ್ದಾರೆ. ಅಂಗಾಂಗ ದಾನ ಹಾಗೂ ದೇಹ ದಾನ ಸಂಬಂಧಿಸಿದ ಪ್ರಕ್ರಿಯೆಗಳು ನಡೆಯಬೇಕಿದೆ. ಅವರ ಕಣ್ಣುಗಳನ್ನು ನೇತ್ರಧಾಮ ಸಂಸ್ಥೆಗೆ ದಾನ ಮಾಡಲಾಗುವುದು. ಹಿರಿಯ ಪುತ್ರಿ ಸುಜಾತಾ ಅವರು ಮುಂಬೈಯಿಂದ ಬರಬೇಕಿದೆ. ಅವರು ಬಂದ ತಕ್ಷಣ ವಿಳಂಬ ಮಾಡದೇ ದೇಹವನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಗುವುದು ಎಂದು ಪ್ರಕಾಶ್ ಬೆಳವಾಡಿ ತಿಳಿಸಿದರು.
ರಂಗಭೂಮಿಯಲ್ಲಿ 'ಮೇಕಪ್ ನಾಣಿ' ಎಂದೇ ಹೆಸರಾಗಿದ್ದ ಬೆಳವಾಡಿ ನಂಜುಡಯ್ಯ ನಾರಾಯಣ ಅವರು ಭಾರ್ಗವಿ ಅವರ ಪತಿ. ದಂಪತಿಗೆ ನಟರಾದ ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ ಸೇರಿ ನಾಲ್ವರು ಮಕ್ಕಳು.
ಭಾರ್ಗವಿ ಅವರು ಬಿಎಸ್ಸಿ ಮತ್ತು ಇಂಗ್ಲಿಷ್ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದರು. ಅವರು ಆತ್ಮಕಥನ 'ನಾನು ಭಾರ್ಗವಿ', 'ನಾ ಕಂಡ ನಮ್ಮವರು' ಕೃತಿಗಳನ್ನು ರಚಿಸಿದ್ದಾರೆ.
Koo Appಹಿರಿಯ ನಟಿ, ರಂಗಭೂಮಿ ಕಲಾವಿದೆ ಶ್ರೀಮತಿ ಭಾರ್ಗವಿ ನಾರಾಯಣ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಹಾಗೂ ಕಿರುತರೆಗೆ ತುಂಬಲಾರದ ನಷ್ಟವಾಗಿದೆ. ತಮ್ಮ ಸಹಜ ಅಭಿನಯದಿಂದ ಕನ್ನಡಿಗರ ಪಾಲಿನ ಪ್ರೀತಿಯ ಅಜ್ಜಿಯಾಗಿದ್ದ ಶ್ರೀಮತಿ ಭಾರ್ಗವಿ ನಾರಾಯಣ್ ಅವರು ಟಿ.ಎನ್.ಸೀತಾರಾಮ್ ಅವರ ಮುಕ್ತ ಧಾರಾವಾಹಿಯಲ್ಲಿ ಅಜ್ಜಿ ಪಾತ್ರದ ಮೂಲಕ ಮನೆ ಮಾತಾಗಿದ್ದರು. (1/2)- Dr. Sudhakar K (@drsudhakark.official) 14 Feb 2022
Koo Appಸಹಜ ಅಭಿನಯದ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ಹಿರಿಯ ನಟಿ ಹಾಗೂ ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್ ಅವರ ನಿಧನದ ಸುದ್ದಿ ತಿಳಿದು ಅಘಾತವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅಭಿಮಾನಿಗಳು ಹಾಗೂ ಕುಟುಂಬ-ಹಿತೈಷಿಗಳಿಗೆ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.- Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 14 Feb 2022
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.