ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ನೀಡಬೇಕು ಎಂದು ಈಗಾಗಲೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಬಹುಭಾಷಾ ನಟ ಕಮಲ ಹಾಸನ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದು ಎಲ್ಲರಿಗೂ ಗೊತ್ತಿದೆ.
ಸೆಪ್ಟೆಂಬರ್ 25ರಂದು ಎಸ್ಪಿಬಿ ನಿಧನರಾದ ದಿನದಿಂದಲೇ ಆನ್ಲೈನ್ನಲ್ಲಿ ಅವರಿಗೆ ‘ಭಾರತ ರತ್ನ’ ನೀಡುವಂತೆ ಅಭಿಮಾನ ಕೂಡ ಆರಂಭಗೊಂಡಿದೆ. ಬೆಂಗಳೂರು ಮೂಲದ ಗಿರೀಶ್ ಕುಮಾರ್ ಎಂಬುವರು ಆರಂಭಿಸಿರುವ ಈ ಅಭಿಯಾನಕ್ಕೆ ಇಲ್ಲಿಯವರೆಗೆ 35 ಸಾವಿರಕ್ಕೂ ಹೆಚ್ಚು ಜನರು ಒಪ್ಪಿಗೆಯ ಮುದ್ರೆ ಒತ್ತಿದ್ದಾರೆ.
‘ಎಸ್ಪಿಬಿ ಸರ್ ನನಗೆ ಆದರ್ಶ. ಅವರ ಹಾಡುಗಳು ನನ್ನ ಬೆಳವಣಿಗೆಗೆ ಪೂರಕವಾಗಿವೆ. ಅವು ನನ್ನ ಬದುಕಿನ ಭಾಗವೂ ಆಗಿವೆ. ಜೀವನದಲ್ಲಿ ನಾನು ಕುಸಿದು ಹೋದಾಗಲೆಲ್ಲಾ ಅವರು ಹಾಡಿರುವ ಹಾಡುಗಳೇ ನನಗೆ ಊರುಗೋಲಾಗುತ್ತವೆ. ನನ್ನ ಸಂತೋಷಕ್ಕೆ ಕಾರಣೀಭೂತವಾಗಿವೆ’ ಎಂದು ತನ್ನ ಫೇಸ್ಬುಕ್ ವಾಲ್ನಲ್ಲಿ ಅವರು ಬರೆದುಕೊಂಡಿದ್ದಾರೆ.
‘ಎಸ್ಪಿಬಿ ಅವರ ಹುಟ್ಟೂರು ಆಂಧ್ರದ ನಲ್ಲೂರು ಎಂಬ ಕಾರಣಕ್ಕೆ ಅವರಿಗೆ ‘ಭಾರತ ರತ್ನ’ ನೀಡಿ ಎಂದು ಕೋರುತ್ತಿಲ್ಲ. ಅವರಿಗೆ ಭಾರತ ಸೇರಿದಂತೆ ವಿದೇಶಗಳಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಗಾಯನ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಸೇವೆ ಪರಿಗಣಿಸಿ ‘ಭಾರತ ರತ್ನ’ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.
‘ಈಗಾಗಲೇ, ಸಂಗೀತದ ಮೂಲಕ ವಿಶಿಷ್ಟ ಸೇವೆ ಸಲ್ಲಿಸಿರುವ ಲತಾ ಮಂಗೇಷ್ಕರ್, ಭೂಪೇನ್ ಹಜಾರಿಕಾ, ಎಂ.ಎಸ್. ಸುಬ್ಬಲಕ್ಷ್ಮಿ, ಬಿಸ್ಮಿಲ್ಲಾ ಖಾನ್, ಭೀಮಸೇನ್ ಜೋಷಿ ಅವರು ‘ಭಾರತ ರತ್ನ’ ಪುರಸ್ಕೃತರಾಗಿದ್ದಾರೆ. ದಂತಕಥೆಯಾಗಿರುವ ಎಸ್ಪಿಬಿ ಕೂಡ ಇದಕ್ಕೆ ಅರ್ಹರಾಗಿದ್ದಾರೆ. ಅವರ ಸೇವೆ ಗುರುತಿಸಿ ದೇಶದ ಅತ್ಯುತ್ತಮ ಪುರಸ್ಕಾರ ನೀಡಿ ಗೌರವಿಸಬೇಕು’ ಎಂದು ಜಗನ್ ಮನವಿ ಮಾಡಿದ್ದಾರೆ.
ಎಸ್ಪಿಬಿಗೆ ‘ಭಾರತ ರತ್ನ’ ನೀಡುವಂತೆ ಜಗನ್ ಅವರು ಪ್ರಧಾನಿಗೆ ಬರೆದಿರುವ ಪತ್ರದ ಬಗ್ಗೆ ಟ್ವಿಟರ್ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವ ನಟ ಕಮಲ ಹಾಸನ್, ಜಗನ್ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
Thank you Honourable CM of Andhra Pradesh. @AndhraPradeshCM.
— Kamal Haasan (@ikamalhaasan) September 28, 2020
The honour you seek for our brother Shri.S.P.Balasubramaniam is a sentiment which true fans of his voice will echo, not only in Tamilnadu but throughout the whole nation. pic.twitter.com/eSeC4MnR8p
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.