ಚಂದನವನದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಸಿನಿಮಾ ತೆರೆ ಮೇಲೆ ಬರುತ್ತಿದೆ ಎಂದರೆ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಅಲ್ಲದೇ ನಿರ್ದೇಶಕರುಗಳಿಗೂ ಪುನೀತ್ ಜೊತೆ ಸಿನಿಮಾ ಮಾಡುವುದೆಂದರೆ ಒಂದು ರೀತಿಯ ಖುಷಿ. ಸದಾ ವಿಭಿನ್ನ ಪಾತ್ರಗಳಿಂದ ಜನರನ್ನು ರಂಜಿಸುವ ಅಪ್ಪು ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ.
ಇಂತಿಪ್ಪ ಪುನೀತ್, ಛಾಯಾಗ್ರಾಹಕ ಹಾಗೂ ನಿರ್ಮಾಪಕ ಕೃಷ್ಣ ಅವರ ಮುಂದಿನ ಚಿತ್ರದಲ್ಲಿ ರಾ ಏಜೆಂಟ್ ಆಗಿ ನಟಿಸುತ್ತಿದ್ದಾರೆ. ಪುನೀತ್ ಅಭಿಮಾನಿಗಳು ಮೊದಲಿನಿಂದಲೂ ಪುನೀತ್ ಅವರನ್ನು ಸೈನಿಕನ ಪಾತ್ರದಲ್ಲಿ ಕಾಣಲು ಹಂಬಲದಲ್ಲಿದ್ದರು. ಈಗ ಈ ವಿಷಯ ಅಭಿಮಾನಿಗಳಿಗೆ ಖುಷಿ ನೀಡುವುದರಲ್ಲಿ ಸಂದೇಹವಿಲ್ಲ.
‘ನಾನು ಹಾಗೂ ಪುನೀತ್ ಇದೇ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಾನು ಈ ಹಿಂದೆ ಮಾಡಿರುವ ಎಲ್ಲಾ ಸಿನಿಮಾಗಳಿಗಿಂತಲೂ ಈ ಸಿನಿಮಾ ಭಿನ್ನವಾಗಿದೆ. ಇದರಲ್ಲಿ ಪುನೀತ್ ಅವರದ್ದು ರಾ ಏಜೆಂಟ್ ಪಾತ್ರ. ಸಿನಿಮಾದಲ್ಲಿ ನೈಜತೆ ಇರಬೇಕು ಎಂಬ ಕಾರಣಕ್ಕೆ ನಾನು ಭಾರತದ ಹಲವು ರಾ ಏಜೆಂಟ್ಗಳ ಬಗ್ಗೆ ಸಂಶೋಧನೆ ನಡೆಸಿದ್ದೇನೆ. ರಾ ಏಜೆಂಟ್ಗಳೂ ಸೈನಿಕರಂತೆ ದೇಶವನ್ನು ಕಾಯುವ ಕೆಲಸ ಮಾಡುತ್ತಾರೆ. ಅವರು ನಮ್ಮ ದೇಶಕ್ಕೆ ಎಷ್ಟು ಮುಖ್ಯ ಎಂಬುದನ್ನು ಇದರಲ್ಲಿ ತೋರಿಸಲಾಗುತ್ತದೆ. ನಾನು ಈಗಾಗಲೇ ಪುನೀತ್ಗೆ ಕಥೆ ಹೇಳಿದ್ದೇನೆ. ಈಗ ಸ್ಕ್ರೀನ್ಪ್ಲೇ ಕೆಲಸ ನಡೆಯುತ್ತಿದೆ. ಚಿತ್ರದ ಕುರಿತಾದ ಹೆಚ್ಚಿನ ಮಾಹಿತಿಯನ್ನು ಪುನೀತ್ ಹುಟ್ಟುಹಬ್ಬದಂದು ತಿಳಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ ಕೃಷ್ಣ.
ಕೃಷ್ಣ ಅವರ ಹೋಮ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಸಿನಿಮಾಕ್ಕೆ ಕರುಣಾಕರ್ ಸಿನಿಮಾಟೊಗ್ರಫಿ ಇದ್ದು, ಸಂಗೀತ ನಿರ್ದೇಶಕರು ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. ಈ ಚಿತ್ರವನ್ನು ವಿದೇಶಗಳಲ್ಲೂ ಶೂಟಿಂಗ್ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.